ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲವಿದ್ದರೂ ಕೇಂದ್ರದಿಂದ ಬಿಡಿಗಾಸು ನೆರವಿಲ್ಲ: ಸಚಿವ ದಿನೇಶ್ ಗುಂಡೂರಾವ್

Published 7 ಮಾರ್ಚ್ 2024, 7:18 IST
Last Updated 7 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ಕಲಬುರಗಿ: ‘ಬರಗಾಲದಿಂದ ಇಡೀ ರಾಜ್ಯ ತತ್ತರಿಸುತ್ತಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸೂ ಬಿಡುಗಡೆ ಮಾಡಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯ ಆಗುತ್ತಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಹಣ ಕೊಡುವ ರಾಜ್ಯಗಳಲ್ಲಿ ನಮ್ಮದೂ ಒಂದಾಗಿದೆ. ನಮ್ಮ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ತಯಾರಿಲ್ಲ. ಕೇಂದ್ರವು ರಾಜ್ಯದ ಮೇಲೆ ಏಕೆ ಸೇಡು ತೀರಿಸಿಕೊಳ್ಳುತ್ತಿದೆ? ಏಕೆ ರಾಜ್ಯಕ್ಕೆ ನೆರವು ಕೊಡುತ್ತಿಲ್ಲ? ಏಕೆ ಅನ್ಯಾಯ ಆಗುತ್ತಿದೆ?’ ಎಂದು ಪ್ರಶ್ನಿಸಿದರು.

‘ಈ ಅನ್ಯಾಯ ಸರಿಪಡಿಸಬೇಕಾದ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಅವರು ಕಿಂಚಿತ್ತೂ ಸಹಾಯ ಮಾಡಿಲ್ಲ’ ಎಂದರು.

‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಏನೂ ಪ್ರಯೋಜನ ಆಗದು. ಕಳೆದ ಬಾರಿ ನಾವೂ ಜೆಡಿಎಸ್ ಜೊತೆ ಮೈತ್ರಿಯಲ್ಲಿದ್ದೆವು. ಆಗಲೇ ನಮಗೆ ಯಾವತ್ತೂ ಬರದ ಪರಿಸ್ಥಿತಿ ಬಂದಿತ್ತು. ಈಗ ಬಿಜೆಪಿಗೂ ಇದೇ ಪರಿಸ್ಥಿತಿ ಬರುತ್ತದೆ. ಸೋಲಿನ ಭಯ ಬಿಜೆಪಿಯನ್ನು ಕಾಡುತ್ತಿದೆ.‌ ಅದಕ್ಕಾಗಿಯೇ ಮೈತ್ರಿ ಮಾಡಿಕೊಡಿದ್ದಾರೆ. ಆದರೆ ಇವರ ಮೈತ್ರಿ ಲೆಕ್ಕಕ್ಕಿಲ್ಲ. ಅತಿ ಹೆಚ್ಚು ಸ್ಥಾನ ಗೆಲ್ಲೋದು ನಾವೇ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT