ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜನರ ಆಕ್ರೋಶಕ್ಕೂ ಕಾರಣವಾಗಿದೆ. ದರ ಇಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಹಾಗಿದ್ದರೆ ವಿದ್ಯುತ್ ಬಿಲ್ ಏರಿಕೆಗೆ ಕಾರಣ ಏನು?
ಪ್ರತಿವರ್ಷ ಕೆಇಆರ್ಸಿ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಪರಿಷ್ಕರಿಸುತ್ತಿತ್ತು. ಆದರೆ, ವಿಧಾನಸಭೆ ಚುನಾವಣೆ ಕಾರಣಕ್ಕಾಗಿ ವಿಳಂಬ ಮಾಡಿ, ಮೇ 12ರಂದು ಪ್ರತಿ ಯೂನಿಟ್ ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತು. ಜತೆಗೆ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿತು. ಇದರಿಂದ, ಎರಡು ತಿಂಗಳ ಹೆಚ್ಚುವರಿ ಬಿಲ್ ಜೂನ್ನಲ್ಲಿ ಸೇರಿತು.
ಜತೆಗೆ, ಈ ಮೊದಲು ನಾಲ್ಕು ಸ್ಲ್ಯಾಬ್ಗಳಿದ್ದವು. ಅದನ್ನು ಕೆಇಆರ್ಸಿ ಎರಡು ಸ್ಲ್ಯಾಬ್ಗೆ ಬದಲಿಸಿತು. ಹಳೆ ಸ್ಲ್ಯಾಬ್ಗಳ ಅನ್ವಯ 0ದಿಂದ 50 ಯೂನಿಟ್ಗೆ ₹4.15, 50ರಿಂದ 100ವರೆಗೆ ₹5.60, 100ರಿಂದ 200 ಯೂನಿಟ್ವರೆಗೆ ₹7.15 ಹಾಗೂ 250 ಯೂನಿಟ್ಗೂ ಹೆಚ್ಚು ಇದ್ದರೆ ₹8.20 ನಿಗದಿಪಡಿಸಲಾಗಿತ್ತು. ಆದರೆ, ಹೊಸ ಸ್ಲ್ಯಾಬ್ ಅನ್ವಯ 0–100 ಯೂನಿಟ್ಗೆ ₹4.75, 101 ಯೂನಿಟ್ಗೆ ಮೇಲ್ಪಟ್ಟು ಎಷ್ಟೇ ಬಳಕೆ ಮಾಡಿದರೂ ಪ್ರತಿಯೂನಿಟ್ಗೆ ₹7 ನಿಗದಿಪಡಿಸಲಾಯಿತು.
ಕೇಂದ್ರ ವಿದ್ಯುತ್ ಸಚಿವಾಲಯ ನೀಡಿದ್ದ ಆದೇಶದ ಅನ್ವಯ ಎಫ್ಪಿಪಿಸಿಎ ಅನ್ನು ಡಿಸೆಂಬರ್ನಿಂದಲೇ ವಸೂಲಿ ಮಾಡುವಂತೆ ಎಸ್ಕಾಂಗಳಿಗೆ ಸೂಚಿಸಲಾಗಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ವಿಧಾನಸಭೆ ಚುನಾವಣೆ ಮುಗಿಯವರೆಗೆ ಮುಂದೂಡಿಕೆಯಾಯಿತು. ಈ ಮೊತ್ತ ಮಾರ್ಚ್ನಿಂದ ಅನ್ವಯವಾಗುವಂತೆ ಜಾರಿಗೊಳಿಸಿತು. ಈ ಮೂರು ತಿಂಗಳ ಹೆಚ್ಚುವರಿ ಶುಲ್ಕ ಸಹ ಜೂನ್ನಲ್ಲಿ ಸೇರಿಕೊಂಡಿತು.
ತಾಂತ್ರಿಕ ಸಮಸ್ಯೆ: ಬಿಲ್ಲಿಂಗ್ಗಾಗಿ ಅಳವಡಿಸಿಕೊಂಡಿರುವ ಸಾಫ್ಟ್ವೇರ್ 12 ವರ್ಷ ಹಳೆಯದು. ದರ ಪರಿಷ್ಕರಣೆಯನ್ನು ಈ ಸಾಫ್ಟ್ವೇರ್ನಲ್ಲಿ ಅಳವಡಿಸುವುದು ವಿಳಂಬವಾಯಿತು.