ಚಿತ್ರದುರ್ಗ: ಜೆಡಿಎಸ್-ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದ್ದು, ಯಾವುದೇ ಗೊಂದಲ ಇಲ್ಲ. ಸಮ್ಮಿಶ್ರ ಸರ್ಕಾರ ಟೇಕ್ಆಫ್ ಆಗಲು ಸಮಯ ಹಿಡಿಯುತ್ತದೆ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಇಲ್ಲಿನ ಕೆಒಎಫ್ಗೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಬಜೆಟ್ ನಂತರ ಸರ್ಕಾರ ಟೇಕ್ಆಫ್ ಆಗಲಿದೆ. ಮಾಧ್ಯಮದ ಸ್ನೇಹಿತರು ಎಕ್ಸರೇ ಕಣ್ಣಿನಿಂದ ನೋಡಿದ್ರೆ ಹೀಗಾಗುತ್ತೆ. ಕನ್ನಡಕ ತೆಗೆದು ನೋಡಿ. ಊಹಾಪೋಹಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ’ ಎಂದರು.
‘ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜತೆ ಇದ್ದಾರೆ. ಅಗತ್ಯ ಸಲಹೆ ಸೂಚನೆ ನೀಡಲಿದ್ದು, ಸರ್ಕಾರ ಐದು ವರ್ಷ ಅಧಿಕಾರ ಪೂರೈಸುತ್ತೇವೆ. ಬಜೆಟ್ಗಿಂತ ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗುತ್ತದೆ. ಬಳಿಕ ಅಭಿವೃದ್ಧಿ ಕೆಲಸಗಳು ವೇಗ ಪಡೆಯಲಿವೆ’ ಎಂದರು.
‘ಬಿಜೆಪಿ ನಾಯಕರು ಕಾನೂನು ತಿಳಿದುಕೊಂಡು ಮಾತನಾಡಬೇಕು. ನಮ್ಮ ಸಂಪರ್ಕದಲ್ಲಿ ಶಾಸಕರಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ದೇಸಿ ಹಸುಗಳ ಬೆಳವಣಿಗೆಗೆ ಒತ್ತು ನೀಡುತ್ತೇವೆ. ಹೆಚ್ಚು ಹಾಲು ಕೊಡುವ ಸ್ಥಳೀಯ ಹಸುಗಳಾದ ದೇವಣಿ ತಳಿ ಅಭಿವೃದ್ಧಿಗೆ ಬಳ್ಳಾರಿ ಬಳಿ ಫಾರ್ಮ್ ಮಾಡುವ ಚಿಂತನೆ ಇದೆ. ಇಸ್ರೇಲ್ ಮಾದರಿಯಲ್ಲಿ ಹೈಡ್ರೋಪೋನಿಕ್ ಸಿಸ್ಟಂ ಅಳವಡಿಸಲು ಬಜೆಟ್ನಲ್ಲಿಪೈಲಟ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದರು.
ರಾಜ್ಯದಲ್ಲಿ ಇಲಾಖೆಯ ಜಮೀನು ಒತ್ತುವರಿಯಾಗಿದ್ದು, ಬಜೆಟ್ ಬಳಿಕ ಕಂದಾಯ ಸಚಿವರು ಜತೆ ಚರ್ಚಿಸಿ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.