ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರ ಮಾತಿನಲ್ಲಿ ಮಹಿಳೆಯರನ್ನು ಅವಮಾನಿಸುವ ಭಾವನೆ ಇರಲಿಲ್ಲ. ಕಾಂಗ್ರೆಸ್ನವರು ತಿರುಚಿ ಚುನಾವಣಾ ವಿಷಯವಾಗಿಸಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
'ಜೆಡಿಎಸ್ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆಯಾಗಿದೆ' ಎಂದು ಹೇಳಿದ ಅವರು, 'ಚುನಾವಣೆಯಲ್ಲಿ ಇದು ಅನಗತ್ಯವಾಗಿ ಚರ್ಚೆಯ ವಿಷಯವಾಗಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
'ಕುಮಾರಸ್ವಾಮಿ ಅವರ ಕುರಿತು ಯಾರೋ ಸಣ್ಣಪುಟ್ಟವರು, ದಾರಿಯಲ್ಲಿ ಹೋಗುವವರು ಗೋಬ್ಯಾಕ್ ಎಂದರೆ ಏನೂ ಪರಿಣಾಮ ಬೀರುವುದಿಲ್ಲ. ಮಂಡ್ಯಕ್ಕೆ ಕುಮಾರಣ್ಣ, ದೇಶಕ್ಕೆ ಮೋದಿ ಎಂಬುದೇ ಮಂಡ್ಯದಲ್ಲಿ ನಮ್ಮ ಘೋಷಣೆ’ ಎಂದರು.
ಶೋಭಾ ಟೀಕೆ:
‘ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವವಿದೆ. ಆದರೆ, ಅವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನೂರಕ್ಕೆ ನೂರು ಸುಳ್ಳು ಹೇಳಿ ಸತ್ಯ ಮಾಡುವ ಚಾಳಿ ಕಾಂಗ್ರೆಸ್ನದು’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ಗೆ ಚುನಾವಣೆಗೆ ಒಂದು ವಿಷಯ ಬೇಕಿತ್ತು. ಏನೂ ಸಿಗದಿದ್ದಾಗ ಇಂತಹ ವಿಚಾರಗಳನ್ನು ತಿರುಗಿಸಿ– ಮುರುಗಿಸಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದೆ’ ಎಂದರು.