ಕೋಲಾರ: ‘ಮತ ಪಟ್ಟಿಗೆ ಕನ್ನ ಪ್ರಕರಣದಲ್ಲಿ ಚಿಲುಮೆ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಮಂತ್ರಿಯ ಖಾಲಿ ಚೆಕ್, ಲೆಟರ್ ಹೆಡ್, ದುಡ್ಡು, ಗುರುತಿನ ಚೀಟಿ ಸಿಕ್ಕಿವೆ. ಅವು ಅಲ್ಲಿ ಏಕಿದ್ದವು? ಇಂಥ ಮಂತ್ರಿ ಇಟ್ಟುಕೊಂಡು ಯಾವ ತನಿಖೆ ನಡೆಸುತ್ತಾರೆ. ಮೊದಲ ಆ ಮಂತ್ರಿ ವಜಾಗೊಳಿಸಿ ತನಿಖೆ ನಡೆಸಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಶನಿವಾರ ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಕುತಂತ್ರದ ರಾಜಕಾರಣ ನಡೆಸುತ್ತಿದೆ. ಇದು ಅತ್ಯಂತ ಹೇಯ ಕೃತ್ಯ. ಒಂದು ಕಡೆ ದೇಶ, ಸಮಾಜ ಒಡೆಯುತ್ತಿದ್ದರೆ, ಇನ್ನೊಂದೆಡೆ ಕುತಂತ್ರದಿಂದ ಚುನಾವಣೆ ಗೆಲ್ಲಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸಿ ಮುಚ್ಚಿ ಹಾಕುತ್ತಾರೆ ಅಷ್ಟೆ’ ಎಂದು ದೂರಿದರು.