ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಬರೆದು ಉತ್ತೀರ್ಣರಾಗುವವರ ಸಂಖ್ಯೆ ಶೂನ್ಯ!

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಇಂಗ್ಲಿಷ್‌ ಶಿಕ್ಷಿತರ ಪಾರಮ್ಯ
Last Updated 15 ಡಿಸೆಂಬರ್ 2018, 5:05 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್‌, ಐಪಿಎಸ್‌ ಮತ್ತಿತರ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಗಳಲ್ಲಿ 2011 ರಿಂದ ಈಚೆಗೆ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದಿರುವ ಒಬ್ಬ ಅಭ್ಯರ್ಥಿಯೂ ಉತ್ತೀರ್ಣರಾಗಿಲ್ಲ. ಕೇವಲ ಇಂಗ್ಲಿಷ್‌ ಮಾಧ್ಯಮದಲ್ಲಿ ಬರೆದಿರುವವರೇ ಆಯ್ಕೆ ಆಗುತ್ತಿದ್ದಾರೆ.

ಕನ್ನಡ ಮಾತ್ರವಲ್ಲ ಇತರ ಭಾರತೀಯ ಭಾಷೆಗಳಲ್ಲಿ ಬರೆಯುವ ವಿದ್ಯಾರ್ಥಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸಿರುವ ಮನುಕುಮಾರ್‌ ರಾಜೇಅರಸ್‌. ಇವರು ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಇಂಗ್ಲಿಷ್‌ ಬದಲಿಗೆ ಆಯಾ ರಾಜ್ಯಗಳ ಭಾಷೆಗಳಲ್ಲೇ ನಡೆಸಬೇಕು ಎಂಬ ಹೋರಾಟ ನಡೆಸುತ್ತಿದ್ದಾರೆ.

ಅಧ್ಯಯನದ ಪ್ರಕಾರ, 1990 ರಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಶೇ 45, ಹಿಂದಿಯಲ್ಲಿ ಬರೆದವರು ಶೇ 25 ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಬರೆದವರು ಶೇ 30 ರಷ್ಟು ಉತ್ತೀರ್ಣರಾಗಿ ಆಯ್ಕೆ ಆಗುತ್ತಿದ್ದರು. ಈ ಪ್ರಮಾಣ 2015 ಈ ರೀತಿ ಇತ್ತು; ಇಂಗ್ಲಿಷ್‌ ಮಾಧ್ಯಮ ಶೇ94, ಹಿಂದಿ ಮಾಧ್ಯಮ ಶೇ 0.4 ಮತ್ತು ಕನ್ನಡ ಅಥವಾ ಇತರ ಭಾರತೀಯ ಭಾಷೆಗಳ ಪ್ರಮಾಣ ಶೂನ್ಯ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾಷೆ ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯೂ ಗ್ರಾಮೀಣರು, ಹಿಂದುಳಿದವರು ಮತ್ತು ಶೋಷಿತರು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆ ಆಗಲು ಸಾಧ್ಯವಾಗುತ್ತಿಲ್ಲ. ಹಣವಂತರು ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಮಾತ್ರ ಆಯ್ಕೆಯಾಗುತ್ತಿದ್ದಾರೆ ಎಂದರು.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಆಯ್ಕೆಯಾಗುತ್ತಿರುವವರಲ್ಲೂ ತಾರತಮ್ಯವಿದೆ. ಶೇ 70 ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಆದರೆ, ಅಲ್ಲಿಂದ ಐಎಎಸ್‌, ಐಪಿಎಸ್‌ ಮತ್ತಿತರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಶೇ 30. ಇದರಲ್ಲೂ ಶೇ 20 ರಷ್ಟು ಅಭ್ಯರ್ಥಿಗಳು ಮಾತ್ರ ಹಳ್ಳಿಗಳಲ್ಲಿ ಶಾಲೆ ಓದಿರುತ್ತಾರೆ. ಶೇ 5 ರಷ್ಟು ಅಭ್ಯರ್ಥಿಗಳು ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಪದವಿ ಪಡೆದಿರುತ್ತಾರೆ. ಉಳಿದ ಶೇ 85 ರಷ್ಟು ಅಭ್ಯರ್ಥಿಗಳು ಅಕ್ಕ–ಪಕ್ಕದ ಪಟ್ಟಣ ಮತ್ತು ನಗರಗಳಲ್ಲಿ ಶಿಕ್ಷಣ ಪಡೆದಿರುತ್ತಾರೆ ಎಂದು ಹೇಳಿದರು.

ಅಚ್ಚರಿ ಎಂದರೆ ನಾಗರಿಕ ಸೇವೆಗಳಿಗೆ ಆಯ್ಕೆ ಆಗುವ ಒಟ್ಟು ಅಭ್ಯರ್ಥಿಗಳಲ್ಲಿ ಶೇ 60 ರಷ್ಟು ಜನ ಸರ್ಕಾರಿ ಅಧಿಕಾರಿಗಳ ಮಕ್ಕಳೇ ಆಗಿದ್ದಾರೆ. ಶೇ 30 ವ್ಯಾಪಾರೋದ್ಯಮಿಗಳ ಮಕ್ಕಳು ಶೇ 10, ಉಳಿದ ವೃತ್ತಿಯಲ್ಲಿರುವವರ ಮಕ್ಕಳು ಶೇ 10. ಇದರಲ್ಲಿ ಕೃಷಿಕರು ಮತ್ತು ಕಾರ್ಮಿಕರ ಮಕ್ಕಳು ಪ್ರಮಾಣ ನಗಣ್ಯ ಎಂದು ಮನುಕುಮಾರ್‌ ಅರಸ್‌ ಹೇಳಿದರು.

ಪರೀಕ್ಷೆ– ನೇಮಕಾತಿಯಲ್ಲಿ ಲೋಪ:ನಾಗರಿಕ ಸೇವೆಗಳ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಬರೆಯುವ ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತದೆ. ಅಭ್ಯರ್ಥಿಗಳನ್ನೂ ಅದಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಭಾರತೀಯ ಭಾಷೆಗಳಲ್ಲಿ ಬರೆಯುವ ಅಭ್ಯರ್ಥಿಗಳು ನಗರ ಪ್ರದೇಶಗ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಸರ್ಕಾರಕ್ಕೆ ಸಲಹೆಗಳು:

* ಇಂಗ್ಲಿಷ್‌ ಮತ್ತು ಹಿಂದಿಗಳನ್ನು ಅಧಿಕೃತ ಭಾಷೆ ಸ್ಥಾನದಿಂದ ಮುಕ್ತಗೊಳಿಸಿ, ಕೇಂದ್ರ ಮತ್ತು ರಾಜ್ಯದ ಎಲ್ಲ ಶಾಲೆಗಳಲ್ಲಿ ಏಕರೂಪತೆಗಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಬೇಕು.

* ಪ್ರತಿಯೊಂದು ರಾಜ್ಯವೂ ಅಲ್ಲಿನ ರಾಜ್ಯ ಭಾಷೆಯನ್ನೇ ಅಧಿಕೃತ ಪ್ರಥಮ ಭಾಷೆಯನ್ನಾಗಿ ಅಂಗೀಕರಿಸಬೇಕು. ಇಂಗ್ಲಿಷನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಬಹುದು.

* ಇಂಗ್ಲಿಷ್‌ ಅಥವಾ ಇತರ ಯಾವುದೇ ವಿದೇಶಿ ಭಾಷೆಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಬಳಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT