ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಬಾಗೂರು ಗೇಟ್ನ ಸಿದ್ದರಾಮೇಶ್ವರ ಸನ್ನಿಧಿಯಲ್ಲಿ 2019ರ ಜ.14 ಮತ್ತು 15ರಂದು ರಾಜ್ಯಮಟ್ಟದ 846ನೇ ಸಿದ್ದರಾಮ ಜಯಂತ್ಯುತ್ಸವ ನಡೆಯಲಿದೆ.
ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಯಂತ್ಯುತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬೆಟ್ಟಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ‘ಪ್ರತಿ ವರ್ಷದಂತೆಯೇ ರಾಜ್ಯ ನೊಳಂಬ ವೀರಶೈವ ಸಂಘ ಹಾಗೂ ಸಿದ್ದರಾಮೇಶ್ವರರ ಭಕ್ತರು ಜಯಂತಿ ಹಮ್ಮಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಪರಿಸರ ಸ್ನೇಹಿಯಾಗಿ ಜಯಂತಿ ನಡೆಯಲಿದೆ. ಇಲ್ಲಿ ದೇಸಿ ಆಹಾರ ಪದ್ಧತಿ, ಅಂತರ್ಜಲ ರಕ್ಷಣೆ, ಗೋ ಸಂರಕ್ಷಣೆ, ಗುಡಿ ಕೈಗಾರಿಕೆ, ಕೊಳವೆ ಬಾವಿ ಮರುಪೂರಣ, ಮಳೆನೀರು ಸಂಗ್ರಹ, ಕಾಡು ಬೆಳೆಸಿ- ನಾಡು ಉಳಿಸುವ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ’ ಎಂದರು.