ಈ ಸಂಬಂಧ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಬರೆದಿದ್ದಾರೆ. ‘ಕೆಲ ವರ್ಷಗಳ ಹಿಂದೆ ಅಂದಿನ ಸರ್ಕಾರ ರಾಷ್ಟ್ರಕವಿ ಗೌರವಕ್ಕೆ ಅರ್ಹರಾದವರ ಹೆಸರನ್ನು ಸೂಚಿಸಲು ಕೋ. ಚೆನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆದರೆ, ಆ ಸಮಿತಿಯು ಯಾರ ಹೆಸರನ್ನು ಸೂಚಿಸಿರಲಿಲ್ಲ. ರಾಷ್ಟ್ರಕವಿ ಗೌರವಕ್ಕೆ ಸೂಕ್ತರಾದವರು ಯಾರೂ ಇಲ್ಲ ಎಂಬ ವರದಿ ನೀಡಿತ್ತು. ಇದು ಸಮಿತಿಗೆ ನೀಡಿದ ಕಾರ್ಯಷರತ್ತಿನ ಉಲ್ಲಂಘನೆಯಾಗಿದೆ. ಈಗ ಹೊಸದಾಗಿ ಸಮಿತಿ ರಚಿಸಿ, ಯೋಗ್ಯರಾದವರ ಹೆಸರನ್ನು ಸೂಚಿಸಬೇಕು’ ಎಂದು ಆಗ್ರಹಿಸಿದ್ದಾರೆ.