ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿಯ ವಿ.ಸುನಿಲ್ಕುಮಾರ್ ಅವರು ಕಾನೂನು ಸಚಿವ ಎಚ್.ಕೆ.ಪಾಟೀಲ ವಿರುದ್ಧ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ನೋಟಿಸ್ ನೀಡಿದರೆ, ರಾಜ್ಯಪಾಲರು ರಾಷ್ಟ್ರಗೀತೆ ಮೊಳಗಿದಾಗ ನಿಲ್ಲದೇ, ಅಗೌರವ ತೋರಿ ಹೊರ ನಡೆದರು ಎಂದು ಎಚ್.ಕೆ.ಪಾಟೀಲ ಅವರು ರಾಜ್ಯಪಾಲರ ವಿರುದ್ಧ ಆರೋಪ ಮಾಡಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಭಾರಿ ವಾಕ್ಸಮರಕ್ಕೆ ಕಾರಣವಾಯಿತು. ರಾಜ್ಯಪಾಲರನ್ನು ಬೀಳ್ಕೊಟ್ಟ ಬಳಿಕ ಸದನ ಮತ್ತೆ ಸೇರಿತು. ಇತ್ತೀಚೆಗೆ ನಿಧನರಾದವರಿಗೆ ಸಂತಾಪ ಸೂಚನೆ ಬಳಿಕ ನಡೆದ ಚರ್ಚೆಯ ವೇಳೆ, ಕಲಾಪ ಗದ್ದಲದ ಗೂಡಾಯಿತು.