ಮೈಸೂರು: ‘ಸಿದ್ದರಾಮಯ್ಯ ಸರ್ ನೀವು ಬ್ರಿಲಿಯಂಟ್ ಫಾದರ್; ಬ್ರಿಲಿಯಂಟ್ ಪೊಲಿಟೀಷಿಯನ್. ಮಗನನ್ನು (ಡಾ.ಯತೀಂದ್ರ) ಸಂಸದನನ್ನಾಗಿಸುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ’ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವಾನ ತೆಗೆಯಬಹುದಷ್ಟೆ’ ಎಂದು ಭಾವುಕವಾಗಿ ಹೇಳಿದರು.
‘ಮರ ಕಡಿದ ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು (ವಿಕ್ರಂ) ಅರೆಸ್ಟ್ ಮಾಡಿಸಿದ್ದೀರಿ. ಮನೆಯಲ್ಲಿ ವೃದ್ಧ ತಾಯಿ ಇದ್ದಾರೆ. ತಂಗಿ ಇದ್ದಾಳೆ. ಅವರನ್ನೂ ಅರೆಸ್ಟ್ ಮಾಡಿಸಿಬಿಡಿ. ನನ್ನ ತೇಜೋವಧೆ ಮಾಡಿದ್ದಾಯಿತು, ಈಗ ನನ್ನ ಕುಟುಂಬ ಮುಗಿಸಲು ಯತ್ನಿಸುತ್ತಿದ್ದೀರಿ. ಇದ್ಯಾವುದಕ್ಕೂ ಜಗ್ಗುವ ಮಗ ನಾನಲ್ಲ’ ಎಂದು ಗುಡುಗಿದರು.
‘ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನು ಬೇಕಾದರೂ ತುಳಿಯುತ್ತಾರೆ. ಇದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇಂತಹ ತಂದೆ ಎಲ್ಲರಿಗೂ ಸಿಗುವುದಿಲ್ಲ. ನಿಜಕ್ಕೂ ನಿಮ್ಮನ್ನು ಮೆಚ್ಚಿದ್ದೇನೆ. ನಿಮ್ಮ ಆಕಾಂಕ್ಷೆಗಳಿಗೆ ಅಡ್ಡಿಯಾಗಿದ್ದಾನೆಂದು ನನ್ನನ್ನು ಮುಗಿಸಲು ಮುಂದಾಗಿದ್ದೀರಿ. ನಿಮ್ಮ ಕುಟುಂಬದ ರಾಜಕಾರಣವೇ ಮುಂದುವರಿಯಲಿ’ ಎಂದು ಚುಚ್ಚಿದರು.
‘ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರದಿಂದ ಜನರು ಹಾಗೂ ಮಾಧ್ಯಮದ ಗಮನ ಬೇರೆಡೆ ಸೆಳೆಯಲು ನೀವು ನನ್ನ ವಿಷಯ ಮುಂದೆ ತರುತ್ತೀರಿ. ಲೋಕಸಭೆ ಪ್ರವೇಶಕ್ಕೆ ಪಾಸ್ಗೆ ಶಿಫಾರಸು ಮಾಡಿದ್ದನ್ನೇ ಇಟ್ಟುಕೊಂಡು ನೀವು, ನಿಮ್ಮ ಸಚಿವರು, ಡಿಸಿಎಂ ಎಲ್ಲರೂ ಮಾತನಾಡುತ್ತೀರಿ. ತನಿಖೆ ನಡೆಸುವಂತೆ ಹೇಳುತ್ತೀರಿ’ ಎಂದು ಟೀಕಿಸಿದರು.
‘ಸಚಿವ ಮಧು ಬಂಗಾರಪ್ಪ ಚೆಕ್ ಬೌನ್ಸ್ ಪ್ರಕರಣದಲ್ಲಿ ತಪ್ಪಿತಸ್ಥ. ಆದರೆ, ಬಂಧಿಸಿರುವುದು ನನ್ನ ತಮ್ಮನನ್ನು. ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ. ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆ ತಂದಿರಿ. ಪ್ರಕರಣದಲ್ಲಿ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರಿಗೆ ರವಿ ಎನ್ನುವವರು ಸಹಾಯ ಮಾಡಿದ್ದರು. ಆತ ಪರಾರಿಯಾಗಿದ್ದಾನೆ. ಈವರೆಗೆ ಆ ಮೂವರನ್ನೂ ಬಂಧಿಸಿಲ್ಲ’ ಎಂದು ವ್ಯಂಗ್ಯವಾಡಿದರು.
‘ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ, ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ನನ್ನ ತಮ್ಮ ಮರಗಳ್ಳ ಎಂದು ಕಾಂಗ್ರೆಸ್ನವರು ಪೋಸ್ಟ್ ಹಾಕಿದ್ದರು. ಎಫ್ಐಆರ್ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನು ಬಂಧಿಸಲಾಗಿದೆ. ಆತ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಎಫ್ಐಆರ್ ಆಗಿಲ್ಲ. ತಲೆ ಮರೆಸಿಕೊಂಡಿರಲಿಲ್ಲ. ಏಕೆ ದಾರಿ ತಪ್ಪಿಸುತ್ತಿದ್ದೀರಿ?’ ಎಂದು ಕೇಳಿದರು.
‘ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ನನ್ನ ಚಾರಿತ್ರ್ಯವಧೆ ಮಾಡುತ್ತಿದ್ದೀರಿ. ನನ್ನ ಕುಟುಂಬದವರನ್ನು ಬೀದಿಗೆ ಎಳೆ ತರುತ್ತಿದ್ದೀರಿ. ಶನಿವಾರ ಮಧ್ಯಾಹ್ನ 3ಕ್ಕೆ ನನ್ನ ತಮ್ಮನನ್ನು ಬಂಧಿಸಲಾಗಿದೆ. ಈವರೆಗೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯನವರೇ ನಿಮಗೆ ಬಹಳಷ್ಟು ದಾರಿಗಳಿಲ್ಲ. ಚಾಮುಂಡಿ, ಕಾವೇರಿ ತಾಯಿ ಬಿಡುವುದಿಲ್ಲ. ಮೈಸೂರು- ಕೊಡಗು ಜನರು ಬಿಡುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.