ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains: ರಾಜ್ಯದ ಹಲವೆಡೆ ಮಳೆ, ತಂಪಾದ ಇಳೆ

Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಕಲಬುರಗಿ/ಶಿವಮೊಗ್ಗ: ರಾಜ್ಯದ ಕೆಲವೆಡೆ ಗುರುವಾರ ಮಳೆಯಾಗಿದ್ದು ಸುಡು ಬಿಸಿಲಿನಿಂದ ಕಾದಿದ್ದ ಇಳೆ ಕೊಂಚ ತಂಪಾಗಿದೆ.

ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಹಲವೆಡೆ ಗುರುವಾರ ಗುಡುಗು, ಮಿಂಚು ಸಹಿತ ಜೋರು ಮಳೆಯಾಯಿತು. ಕಲಬುರಗಿ ನಗರದಲ್ಲಿ ಸುಮಾರು 45 ನಿಮಿಷ ಬಿರುಸಿನ ಮಳೆ ಸುರಿದು ನಗರವನ್ನು ತಂಪಾಗಿಸಿತು. ಜಿಲ್ಲೆ ಆಳಂದ ಪಟ್ಟಣ, ಮಾದನ ಹಿಪ್ಪರಗಿ, ಝಳಕಿ, ದರ್ಗಾ ಶಿರೂರು, ಕೆರೂರು, ನಿಂಗದಳ್ಳಿ, ಹಳ್ಳಿ ಸಲಗರ, ಕಾಮನಳ್ಳಿ, ನಿಂಗದಳ್ಳಿ ಸೇರಿ ಇತರೆ ಗ್ರಾಮಗಳಲ್ಲಿ ಅರ್ಧ ಗಂಟೆ ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಅಫಜಲಪುರ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಮನೋಹರ್ ಕಲ್ಲಸಿದ್ದನೂರು ಎಂಬುವವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಮೃತಪಟ್ಟಿದೆ. 

ಮಳೆಯಿಂದಾಗಿ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯ ವಾರದ ಸಂತೆಗೆ ಅಡಚಣೆಯಾಯಿತು. ಬೀದರ್‌, ಹುಮನಾಬಾದ್‌, ಹುಲಸೂರ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದೆ.

ಬುಧವಾರ ತಡರಾತ್ರಿ ಕೂಡ ಮಳೆಯಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ 4ಗಂಟೆ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಸಂಜೆ 6.30ರವರೆಗೆ ಸುರಿದಿದೆ. ಮಳೆಗೆ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಕೆಂಡದ ಬಿಸಿಲಿನಿಂದ ಬಸವಳಿದವರು ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮೊದಲ ಮಳೆಯ ಸ್ಪರ್ಶ: ಶಿವಮೊಗ್ಗದಲ್ಲಿ ಗುರುವಾರ ಸಂಜೆ 20 ನಿಮಿಷಕ್ಕೂ ಅಧಿಕ ಕಾಲ ಸುರಿದ ಪ್ರಸಕ್ತ ವರ್ಷದ ಮೊದಲ ಮಳೆ ಯುಗಾದಿ, ಈದ್‌–ಉಲ್‌ ಫಿತ್ರ್‌ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಮಲೆನಾಡ ಹೆಗ್ಗಳಿಕೆಯನ್ನು ಮರೆಮಾಚುವಂತಹ ಬೇಸಿಗೆಯ ಬಿಸಿಲಿಗೆ ಶಿವಮೊಗ್ಗ ನಗರ ಕಾದ ಕಾವಲಿಯಂತಾಗಿತ್ತು. ಸಂಜೆ ಸುರಿದ ಮಳೆ ಇಳೆಗೆ ತಂಪೆರೆಯಿತು. ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಜನರು ಮಳೆರಾಯನ ದರ್ಶನದಿಂದ ಪುಳಕಗೊಂಡರು. ಮಳೆಗೆ ನಗರದ ರಸ್ತೆಗಳಲ್ಲಿ ನೀರು ಹರಿಯಿತು.

ಸಿಡಿಲಿಗೆ ಮೂವರ ಸಾವು

ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ವಿವಿಧೆಡೆ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಹೊರವಲಯದಲ್ಲಿ ಬೀರಪ್ಪ ನಿಂಗಪ್ಪ ಅವರಾದಿ (15), ಮಸಳಿ ಬಿ.ಕೆ.ಗ್ರಾಮದ ಸೋಮಶೇಖರ ಪಟ್ಟಣಶೆಟ್ಟಿ (45) ಮತ್ತು ಚಡಚಣ ತಾಲ್ಲೂಕಿನ ಹಾವನಾಳ ಗ್ರಾಮ ಸುನಂದಾ ಶ್ರೀಮಂತ ಡೋಳ್ಳಿ (50) ಎಂಬುವರು ಮೃತಪಟ್ಟಿದ್ದಾರೆ. ಒಂದು ಎಮ್ಮೆ ಮತ್ತು ಎರಡು ಆಕಳು ಸಿಡಲಿಗೆ ಬಲಿಯಾಗಿವೆ.

ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆ ವಿವಿಧೆಡೆ ಗುರುವಾರ ಗುಡುಗು ಸಹಿತ ಮಳೆಯಾಯಿತು.ವಿಜಯಪುರ ಜಿಲ್ಲೆ ತಿಕೋಟಾ,ಆಲಮಟ್ಟಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.‌ ತಾಳಿಕೋಟೆ ಪಟ್ಟಣದಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಬಿರುಗಾಳಿ ಅಬ್ಬರಕ್ಕೆ 20ಕ್ಕೂ ಮನೆಯ ಮೇಲಿನ ಪತ್ರಾಸ್‌ಗಳು ಹಾರಿಹೋಗಿವೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣ ಸೇರಿ ತಾಲ್ಲೂಕಿನ ಸುತ್ತಮುತ್ತಲ‌ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಮಳೆ ಸುರಿಯಿತು.  ಬೈಲಹೊಂಗಲ– ಹಾರೂಗೊಪ್ಪ ಮುಖ್ಯ ರಸ್ತೆಯಲ್ಲಿ ಮರ ನೆಲಕ್ಕುರುಳಿತು. ಮರಕುಂಬಿ, ಮಲ್ಲೂರ, ದುಂಡನಕೊಪ್ಪ ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿದವು. ಬಾಗಲಕೋಟೆ ನಗರ ಸೇರಿ ಜಿಲ್ಲೆಯ ಕಮತಗಿ, ಸೂಳೇಭಾವಿ, ಐಹೊಳೆ, ರಕ್ಕಸಗಿ ಸೇರಿ ವಿವಿಧೆಡೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಯಿತು. ಹುನಗುಂದದಲ್ಲಿ ಕೆಲ ನಿಮಿಷ ಮಳೆಯಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT