ಮುಳಬಾಗಿಲು: ತಾಲ್ಲೂಕಿನ ಕಸಬಾ ಹೋಬಳಿ ಯಲವಹಳ್ಳಿ ಗ್ರಾಮದ ರೈತ ಪ್ರಭಾಕರ್ ಅವರು ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿರುವ ಟೊಮೆಟೊಗೆ ಮಾರುಕಟ್ಟೆಯೂ ಇಲ್ಲದೆ, ಹಣ್ಣನ್ನೂ ಕೊಯ್ಲು ಮಾಡಲಾಗದೆ, ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ.
ಹೊರ ಜಿಲ್ಲೆ, ರಾಜ್ಯಗಳಿಗೆ ಟೊಮೊಟೊ ರವಾನಿಸಲು ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು.
ತಾಲ್ಲೂಕಿನ ತೊರಡಿ ಗ್ರಾಮದ ಚಂದ್ರಶೇಖರ್ ಅವರು ಕಂದಾಯ ಇಲಾಖೆ ನಿವೃತ್ತ ನೌಕರ. ಮೂರು ವರ್ಷದ ಹಿಂದೆ ನಿವೃತ್ತರಾದ ಬಳಿಕ ಜಮೀನಿನ ಫಲವತ್ತತೆಗಾಗಿ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ತೊಡಗಿಸಿದ್ದರು. ಅವರ ಎರಡು ಎಕರೆಯಲ್ಲಿ ಈಗ ಸುಮಾರು ನೂರು ಟನ್ಗಳಷ್ಟು ಟೊಮೆಟೊ ಫಸಲಿದೆ. ಅದರೆ, ಕೇಳುವವರೇ ಇಲ್ಲವಾಗಿದ್ದಾರೆ.
ತಾಲ್ಲೂಕಿನ ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ 15 ಕೆ.ಜಿ ತೂಗುವ ಟೊಮೆಟೊ ಬಾಕ್ಸ್ ಒಂದರ ಬೆಲೆ ಸೋಮವಾರ ₹15ರಿಂದ ₹20 ಇತ್ತು.