ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: BJP ವಿರೋಧಕ್ಕಿಂತ ಚೌಹಾಣ್‌ ವಿರೋಧಿ ಅಲೆಯೇ ಬಲ

Published 16 ನವೆಂಬರ್ 2023, 14:14 IST
Last Updated 16 ನವೆಂಬರ್ 2023, 14:14 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ಪೈಕಿ ಅತ್ಯಂತ ‘ಹೈವೊಲ್ಟೇಜ್’ ಚುನಾವಣೆ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಎಲ್ಲ 230 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಆಳುವ ಬಿಜೆಪಿ ಮತ್ತು ವಿರೋಧಪಕ್ಷ ಕಾಂಗ್ರೆಸ್ ನಡುವೆ ತೀವ್ರ ತುರುಸಿನ ಸ್ಪರ್ಧೆ ನಡೆದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಮೋದಿ ನಾಮಬಲ– ಹಿಂದುತ್ವ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪಣಕ್ಕಿಟ್ಟರೆ, ‘ಆಪರೇಷನ್‌ ಕಮಲ’ದಿಂದ ಮೂರುವರೆ ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಆಡಳಿತ ವಿರೋಧಿ ಅಲೆಯನ್ನೇ ನಂಬಿಕೊಂಡಿದೆ. ಬಿಜೆಪಿ ಪುನಃ ಅಧಿಕಾರ ಹಿಡಿಯುತ್ತದೆಂದು ನಿಶ್ಚಿತವಾಗಿ ಹೇಳುವ ಸ್ಥಿತಿ ಇಲ್ಲ. 18 ವರ್ಷಗಳ ಆಡಳಿತದ ಬಳಿಕ ಶಿವರಾಜ್ ಸಿಂಗ್‌ ಚೌಹಾಣ್ ಅವರ ಸಾಂಪ್ರದಾಯಿಕ ಬೆಂಬಲಿಗರು ನಿಧಾನಕ್ಕೆ ಕೈಕೊಡಲಾರಂಭಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಗಿಂತ ಚೌಹಾಣ್‌ ವಿರೋಧಿ ಅಲೆಯೇ ಬಲವಾಗಿದೆ. 

ಹಿಂದಿ ಪ್ರಾಬಲ್ಯದ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15 ರ‍್ಯಾಲಿಗಳಲ್ಲಿ ಭಾಗಿಯಾಗಿ ಬಿಜೆಪಿ ಪರ ಅಲೆ ಎಬ್ಬಿಸುವ ಪ್ರಯತ್ನ ನಡೆಸಿದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಒಂದೇ ತಿಂಗಳಲ್ಲಿ 160 ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 14 ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾದರು. 

ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಲಾ 10 ರ‍್ಯಾಲಿಗಳಲ್ಲಿ ಭಾಗಿಯಾದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಳು ಸಭೆಗಳಲ್ಲಿ ಭಾಗವಹಿಸಿ ‘ಕೈ’ ಕಾರ್ಯಕರ್ತರಲ್ಲಿ ಹುರುಪು ತುಂಬಿದರು. 

ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆಯ ಬಿಸಿ ಜೋರಾಗಿ ತಟ್ಟಿದೆ. ಇದನ್ನು ಕಡಿಮೆ ಮಾಡಲು ಕಮಲ ಪಡೆಯು ಮಹಿಳೆಯರ ಮನ ಗೆಲ್ಲಲು ಹಲವು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಲಾಡ್ಲಿ ಬೆಹನಾ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹1,250 ಹಣ ವರ್ಗಾಯಿಸುತ್ತಿದೆ. ಮಹಿಳೆಯರ ಖಾತೆಗೆ ಒಂದಷ್ಟು ದುಡ್ಡು ಬಂದಿದೆ. ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೇರಳ ಅನುದಾನ ನೀಡಿದೆ. ಕಾಂಗ್ರೆಸ್‌ ಪಕ್ಷವು ಕರ್ನಾಟಕದ ಮಾದರಿಯಲ್ಲೇ ‘ಗ್ಯಾರಂಟಿ’ಗಳನ್ನು ಘೋಷಿಸಿದೆ. ಒಬಿಸಿ ಮತದಾರರೇ ನಿರ್ಣಾಯಕವಾಗಿರುವ ರಾಜ್ಯದಲ್ಲಿ ‘ಜಾತಿ ಗಣತಿಯ ಅಸ್ತ್ರ’ ಬಿಟ್ಟಿದೆ. ಮೀಸಲಾತಿ ರಾಜಕಾರಣ ಚುನಾವಣೆಗಳ ಆಸುಪಾಸಿನಲ್ಲಿ ತಲೆಯೆತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರಿಸುಮಾರು 19 ವರ್ಷಗಳಿಂದ ಆಧಿಕಾರ ನಡೆಸಿದೆ. ಹಾಗಾಗಿ ಆಡಳಿತವಿರೋಧಿ ಭಾವನೆ ಸ್ವಾಭಾವಿಕ. ಅದನ್ನು ಅಡಗಿಸುವಷ್ಟು ಪ್ರಖರ ಸಾಧನೆಯನ್ನು ಚೌಹಾಣ್‌ ಮಾಡಿಲ್ಲ. ಚೌಹಾಣ್ ಜನರ ನಡುವೆ ಬೆರೆಯುವ ಸರಳ ವ್ಯಕ್ತಿ. ಆದರೆ, ಮೋದಿ ಅವರಂತಹ ‍ಪ್ರಖರ ವರ್ಚಸ್ಸು ಅವರಿಗೆ ಇಲ್ಲ. ಜತೆಗೆ, ಬಿಜೆಪಿ ಶಾಸಕರ ಜನಪ್ರಿಯತೆ ನಶಿಸಿದೆ. ಈ ಕಾರಣಕ್ಕೆ ಶೇ 33ರಷ್ಟು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಈ ವ್ಯತಿರಿಕ್ತ ಅಂಶವನ್ನು ಮೆಟ್ಟುವ ಪ್ರಯತ್ನವನ್ನು ಕಮಲ ಪಾಳಯ ಮಾಡಿದೆ. ಮೂವರು ಕೇಂದ್ರ ಸಚಿವರು ಒಳಗೊಂಡಂತೆ ಏಳು ಸಂಸದರನ್ನು ಹುರಿಯಾಳುಗಳನ್ನಾಗಿ ಮಾಡಿ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡುವ ಮಹಾಪ್ರಯತ್ನ ನಡೆಸಿದೆ. ಐದು ರಾಜ್ಯಗಳ ಚುನಾವಣೆಗೆ ತಿಂಗಳುಗಳು ಇರುವ ಹೊತ್ತಿನಲ್ಲಿ ಸಂಸತ್‌ನ ವಿಶೇಷ ಅಧಿವೇಶನ ನಡೆಸಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ಸಿಗುವಂತೆ ಮಾಡಲಾಯಿತು. ಇದೊಂದು ಚಾರಿತ್ರಿಕ ಸಾಧನೆ ಎಂದು ಬೆನ್ನು ತಟ್ಟಿಕೊಂಡ ಬಿಜೆಪಿಯು ಮಧ್ಯಪ್ರದೇಶದಲ್ಲಿ ಮಹಿಳೆಯರನ್ನು 27 ಕ್ಷೇತ್ರಗಳಲ್ಲಷ್ಟೇ ಕಣಕ್ಕಿಳಿಸಿತು. ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಕಮಲ ಪಾಳಯದ ಘಟಾನುಘಟಿ ನಾಯಕರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಹೆಚ್ಚೇನೂ ಮಾತನಾಡಲೂ ಹೋಗಿಲ್ಲ. 

ರಾಜ್ಯದಲ್ಲಿ ವಿರೋಧಪಕ್ಷಗಳು ಹರಿದು ಹಂಚಿ ಹೋಗಿರುವುದೇ ಬಿಜೆಪಿಯ ಉಳಿವಿನ ಆಸರೆಯಾಗಿ ಪರಿಣಮಿಸಿದೆ. ಬಿಜೆಪಿಯನ್ನು ಸೋಲಿಸುವ ಸಂಕಲ್ಪ ತೊಟ್ಟು ಪಾಟ್ನ, ಬೆಂಗಳೂರು ಹಾಗೂ ಮುಂಬೈನಲ್ಲಿ ಸುದೀರ್ಘ ಚಿಂತನ ಮಂಥನ ನಡೆಸಿದ್ದ ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳು ಮಧ್ಯಪ್ರದೇಶದ ಕಣದಲ್ಲಿ ಪರಸ್ಪರ ಹೋರಾಟಕ್ಕೆ ಸಜ್ಜಾಗಿ ನಿಂತಿವೆ. ಕಾಂಗ್ರೆಸ್‌ ಪಕ್ಷವು 92 ಕ್ಷೇತ್ರಗಳಲ್ಲಿ ಬಿಜೆಪಿ ಜತೆಗೆ ‘ಇಂಡಿಯಾ’ ಒಕ್ಕೂಟದ ಪಕ್ಷಗಳಿಂದಲೇ ಸವಾಲು ಎದುರಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT