ಬೆಳಗಾವಿ: ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ನಿರ್ಮಿಸಿರುವ ಜಲಾಶಯ (ರೇಣುಕಾ) ಭರ್ತಿಗೆ ಎಂಟು ಅಡಿಗಳಷ್ಟೇ ಬಾಕಿ ಇದೆ.
ಈ ನದಿಯ ಉಗಮ ಸ್ಥಳವಾದ ಕಣಕುಂಬಿ ಹಾಗೂ ಖಾನಾಪುರ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರಿನ ಹರಿವು ಹೆಚ್ಚುತ್ತಿದೆ. ಇದರ ಗರಿಷ್ಠ ಮಟ್ಟ 2079.50 ಅಡಿಗಳು. ಸೋಮವಾರ ಇಲ್ಲಿನ ನೀರಿನ ಮಟ್ಟ 2071 ಅಡಿ ಇತ್ತು. 30,845 ಕ್ಯುಸೆಕ್ ಒಳಹರಿವು ಇದೆ.
ಇದು ಸವದತ್ತಿ, ಹುಬ್ಬಳ್ಳಿ- ಧಾರವಾಡ, ರಾಮದುರ್ಗ, ಬಾದಾಮಿ, ರೋಣ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಪ್ರಮುಖ ಜಲ ಮೂಲವಾಗಿದೆ. 2012ರ ನಂತರ ಇದು ಭರ್ತಿಯಾಗಿರಲಿಲ್ಲ. ಈ ಬಾರಿ ತುಂಬುವ ಸಾಧ್ಯತೆ ಇದೆ.
ವಿಶೇಷವೆಂದರೆ ಕೆಲವೇ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಇದು ಆ ಭಾಗದವರಲ್ಲಿ ಸಂತಸ ಮೂಡಿಸಿದೆ.
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು, ಮೂಡಿಗೆರೆ ತಾಲ್ಲೂಕಿನಲ್ಲಿ ಶಾಲೆಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಳಸ ಭಾಗದಲ್ಲಿ ಮಳೆ ಜೋರಾಗಿದ್ದು ಭದ್ರಾ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಮಳೆಗಾಳಿ ರಭಸಕ್ಕೆ ಕೊಪ್ಪ ತಾಲ್ಲೂಕಿನ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.ಎನ್.ಆರ್.ಪುರ.ಶೃಂಗೇರಿ ಭಾಗದಲ್ಲಿ ಮಳೆಯಾಗುತ್ತಿದೆ.