ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ತಡೆಯಲು ಧರ್ಮಾತೀತ ಹೋರಾಟ ಅಗತ್ಯ

Last Updated 6 ಸೆಪ್ಟೆಂಬರ್ 2022, 3:54 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಈಗ ಬಂಧನಲ್ಲಿದ್ದಾರೆ. ದೇಶದ ಗಮನಸೆಳೆದ ಈ ಪ್ರಕರಣ ವಿವಿಧ ಕಾರಣಗಳಿಗೆ ಚರ್ಚೆಗೂ ಗ್ರಾಸವಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ‘ಅತ್ಯಾ ಚಾರ, ಲೈಂಗಿಕ ದೌರ್ಜನ್ಯ: ಎಲ್ಲಿ ದೆಯೋ ನ್ಯಾಯ?ಎನ್ನುವ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿ ಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

‘ಜಾತಿ ಆಧಾರದ ಮೇಲೆ ಆರೋಪಿ ರಕ್ಷಣೆ ಸಲ್ಲದು’
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಘನತೆಯ ಬದುಕು ಕಲ್ಪಿಸಬೇಕಾಗಿದೆ. ಯಾವುದು ಧರ್ಮ ಎನ್ನುವುದು ತಿಳಿಸಬೇಕಾಗಿದೆ. ನ್ಯಾಯಾಲಯವು ಬೀದಿ ಹೋರಾಟಗಳನ್ನು ಪರಿಗಣಿಸುವುದಿಲ್ಲ. ಸಾಕ್ಷ್ಯಾಧಾರಗಳು ಮುಖ್ಯ. ಲಕ್ಷಾಂತರ ಜನರನ್ನು ಸೇರಿಸಿ ಹೋರಾಟ ಮಾಡಿದರೆ ಜಾಗೃತಿ ಮೂಡಬಹುದು. ಹೀಗಾಗಿ, ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ನಮ್ಮನ್ನು ಬೆಂಬಲಿಸಿ ಬರುತ್ತಿರುವ ಕರೆಗಳ ‍ಪೈಕಿಶೇ 80ರಷ್ಟು ಒಂದು ಸಮುದಾಯಕ್ಕೆ ಸೇರಿದ್ದಾಗಿವೆ. ಲಿಂಗಾಯತ ಧರ್ಮಕ್ಕೆ ಸೇರಿದವರು ನಮ್ಮ ಪರವಾಗಿ ನಿಂತಿದ್ದಾರೆ. ಇಲ್ಲಿ ಧರ್ಮ, ಜಾತಿ ಬಗ್ಗೆ ಮಾತನಾಡುವುದು ಸರಿ ಅಲ್ಲ. ಈ ಪ್ರಕರಣದಲ್ಲಿ ಈಗ ಆರೋಪಿಯು ಪುರುಷತ್ವ ಪರೀಕ್ಷೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಪ್ರಕರಣದ ಮೂಲಕ ವ್ಯವಸ್ಥೆಯ ಮತ್ತು ನಮ್ಮ ಪರೀಕ್ಷೆಯೂ ನಡೆಯುತ್ತಿದೆ. ಕ್ರೌರ್ಯ ನಡೆದಾಗ ಆರೋಪಿಯ ಜಾತಿ, ಧರ್ಮದ ಮೂಲ ಹುಡುಕುವ ಪರಿಸ್ಥಿತಿ ಇದೆ. ಆರೋಪಿಯನ್ನು ಆರೋಪಿಯನ್ನಾಗಿಯೇ ಮಾತ್ರ ನೋಡಬೇಕು. ಸ್ವಾಮೀಜಿಗಳು, ಪಾದ್ರಿಗಳು, ಮುಲ್ಲಾಗಳು ಅಪರಾಧ ಎಸಗಿದರೆ ಅವರಿಗೆ ರಕ್ಷಣೆ ನೀಡುವುದು ಸರಿಯೇ? ಸಂವಿಧಾನ, ಕಾನೂನಿಗಿಂತ ಯಾರೂ ದೊಡ್ಡವರಲ್ಲ.
– ಸ್ಟ್ಯಾನ್ಲಿ, ಸಹ ಸಂಸ್ಥಾಪಕ, ಒಡನಾಡಿ, ಮೈಸೂರು

‘ಮೌನ ಅಪಾಯಕಾರಿ’
ಭಾರತದಲ್ಲಿ ಇಂದಿಗೂ ಜಾತಿ, ಧರ್ಮ ಆಧರಿಸಿಯೇ ನ್ಯಾಯ ವ್ಯವಸ್ಥೆ ಇದೆ. ರಾಘವೇಶ್ವರ ಶ್ರೀಗಳ ಪ್ರಕರಣವನ್ನು ಈ ಸಂದರ್ಭದಲ್ಲಿ ಗಮನಿಸಬೇಕು. 10ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ಇವತ್ತಿಗೂ ನ್ಯಾಯ ದೊರೆತಿಲ್ಲ. ಪ್ರಭುತ್ವ ಮನಸ್ಸು ಮಾಡಿದ್ದರೆ ನ್ಯಾಯ ಕೊಡಿಸಲು ಸಾಧ್ಯವಿದೆ. ಆದರೆ, ರಾಜಕೀಯ ವ್ಯವಸ್ಥೆ ಶೇ 40 ಅಥವಾ 100ಕ್ಕೆ ಮಾರಾಟವಾಗುವುದಾದರೆ ಯಾವ ರೀತಿಯ ನಿರೀಕ್ಷೆ ಮಾಡಲು ಸಾಧ್ಯ? ರಾಜಕೀಯ ಪ್ರಜ್ಞೆ ಇಲ್ಲದೆ ಹೋದರೆ ಇಂತಹ ಪ್ರಕರಣಗಳಲ್ಲಿ ನಾವು ಮೌನ ವಹಿಸುತ್ತೇವೆ. ಸಜ್ಜನರ ಮಹಾಮೌನ ಹೆಚ್ಚು ಅಪಾಯಕಾರಿ. ಶಿವಮೂರ್ತಿ ಮುರುಘಾ ಶರಣರ ಪ್ರಕರಣದಲ್ಲಿ ಮೌನ ವಹಿಸಿದವರ ಪಟ್ಟಿ ಮಾಡಿದಾಗ ಮೌನದ ಹಿಂದಿನ ಕಾರಣಗಳನ್ನು ಗುರುತಿಸುತ್ತೇವೆ. ಪ್ರಜ್ಞಾವಂತ ಲಿಂಗಾಯತ ಸಮುದಾಯವು ಇಂತಹ ಪ್ರಕರಣದಲ್ಲಿ ಎದ್ದು ಬರಬೇಕಿತ್ತು. ಆದರೆ, ಈ ಸಮುದಾಯ ಮೌನವಹಿಸಿತು. ಇಂತಹ ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುವುದರಿಂದ ಜನ ಚಳವಳಿ ನಡೆಯುವುದು ಅಗತ್ಯವಿದೆ.
– ಕೆ. ನೀಲಾ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಕಲಬುರಗಿ

‘ನ್ಯಾಯ ಪ್ರಜ್ಞೆ ಜಾಗೃತಿಗೊಳಿಸಬೇಕು’
ಸಮಾಜದಲ್ಲಿ ನ್ಯಾಯಪ್ರಜ್ಞೆ ಜಾಗೃತಗೊಳಿಸುವುದು ಇಂದಿನ ತುರ್ತು ಅಗತ್ಯ.ಹಲವಾರು ರಾಜಕೀಯ ಪಕ್ಷಗಳ ಅಧಿಕಾರಾವಧಿಯಲ್ಲೂ ಅನೇಕ ಪ್ರಕರಣಗಳು ನಡೆದಿವೆ.ಯಾವುದೇ ರಾಜಕೀಯ ಪಕ್ಷ ಅಸಮಾನತೆ, ಲಿಂಗ ದೌರ್ಜನ್ಯವನ್ನು ಎತ್ತಿಹಿಡಿಯುವ ಸಿದ್ಧಾಂತ ಹೊಂದಿದ್ದರೆ ಅದನ್ನು ಅನುಮೋದಿಸಬಾರದು.ಮಹಿಳಾ ವಿರೋಧಿಗಳನ್ನು ಆಯ್ಕೆ ಮಾಡಿಕೊಳ್ಳಬಾರದು ಎನ್ನುವ ನಿಲುವು ಹೊಂದಬೇಕು. ಮಹಿಳಾ ವಿರೋಧಿಗಳನ್ನು ತಿರಸ್ಕರಿಸುತ್ತೇವೆ ಎನ್ನುವ ನಿರ್ಧಾರ ಕೈಗೊಳ್ಳಬೇಕು. ಜತೆಗೆ,ಶಾಂತಿ ಕಾಲದಲ್ಲೂ ಮಹಿಳಾ ಪರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಕೇವಲ ಒಂದು ಘಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳಬಾರದು. ಜಿಲ್ಲಾಮಟ್ಟದಲ್ಲಿ ಲೈಂಗಿಕ ದೌರ್ಜನ್ಯ ತಡೆ ಘಟಕಗಳನ್ನು ಇಂದಿಗೂ ಸ್ಥಾಪಿಸಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ದೌರ್ಜನ್ಯಕ್ಕೂ ಪೂರಕವಾಗಲಿದೆ.ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಲುಕಾನೂನಿನ ಹೋರಾಟಕ್ಕೂ ಸಜ್ಜಾಗಬೇಕು.
– ಮಲ್ಲಿಗೆ ಸಿರಿಮನೆ,ಸಂಚಾಲಕಿ, ಕರ್ನಾಟಕ ಜನಶಕ್ತಿ, ಮಂಡ್ಯ

‘ಪ್ರಗತಿಪರ ಎನ್ನುವುದು ಸಮಜಾಯಿಷಿಯಾಗಬಾರದು’
ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದರು ಮತ್ತು ಜಾತಿ ವ್ಯವಸ್ಥೆಯ ವಿರೋಧಿಯಾಗಿದ್ದರು ಎನ್ನುವುದು ಸಮಜಾಯಿಷಿಯಾಗಬಾರದು. ವಿಕೃತ ಮನಸ್ಸಿನ ವ್ಯಕ್ತಿ ದೌರ್ಜನ್ಯಗಳನ್ನು ನಡೆಸಿದಾಗ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಮುಖ್ಯವಾಗಿ ಅಸಹಜತೆ ಬಿಟ್ಟು ಸಹಜ ಮನುಷ್ಯರಾಗಬೇಕು. ಇತರರಿಗೆ ಕೇಡು ಬಯಸದೆ ನಮ್ಮಷ್ಟಕ್ಕೆ ನಾವು ಒಳ್ಳೆಯವರಾಗಬೇಕು. ಕಾಲ್ಪನಿಕ ಸನ್ಯಾಸತ್ವ ಅಥವಾ ಬ್ರಹ್ಮಚರ್ಯ ಶ್ರೇಷ್ಠ ಎನ್ನುವ ಮೂಲಕ ಸಾಮಾಜಿಕ ವಿಕೃತಿಗಳನ್ನು ಮಾಡುವುದೇ ಅಪರಾಧ. ರಾಜಕೀಯ ಪಕ್ಷವಾಗಿ ಬಿಜೆಪಿ ಮನುವಾದವನ್ನು ತನ್ನ ಸಿದ್ಧಾಂತವಾಗಿ ಪ್ರಸ್ತುತಪಡಿಸುತ್ತವೆ. ಮನುವಾದ ಪರ ಬಹಿರಂಗವಾಗಿ ಹೇಳಿಕೆ ನೀಡುವುದೇ ಸಂವಿಧಾನಕ್ಕೆ ವಿರುದ್ಧ ನೆಲೆಯ ನಿಲುವು. ಕಾಂಗ್ರೆಸ್‌ನಲ್ಲೂ ಹಿಂದುತ್ವವಾದಿಗಳಿದ್ದಾರೆ, ಪುರುಷ ಪ್ರಧಾನ ಮನಸ್ಥಿತಿ ಇರುವವರು ಇದ್ದಾರೆ. ಆದರೆ, ಪಕ್ಷದ ಸಿದ್ಧಾಂತ ವಿಭಿನ್ನ ನಿಲುವು ತಳೆಯುತ್ತದೆ. ಆದ್ದರಿಂದ, ಜನರಲ್ಲಿ ಸಂವಿಧಾನ ಪ್ರಜ್ಞೆ, ಲಿಂಗ ಪ್ರಜ್ಞೆ ಮೂಡಿಸುವುದು ಅಗತ್ಯವಿದೆ.
-ವಿ.ಕೆ. ಸಂಜ್ಯೋತಿ, ಚಿತ್ರ ನಿರ್ದೇಶಕಿ, ಬೆಂಗಳೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT