ಮಂಗಳೂರು: ನಗರದ ನಂತೂರು ವೃತ್ತದ ಬಳಿ ಪಡೀಲ್ ಕಡೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಬುಧವಾರ ನಸುಕಿನ ಜಾವ ಎಲ್ಪಿಜಿ ಅನಿಲ ತುಂಬಿದ ಟ್ಯಾಂಕರ್ ಉರುಳಿ ಬಿದ್ದಿದೆ.
ನಂತೂರಿನಿಂದ ಪಡೀಲ್ ಮತ್ತು ಕುಲಶೇಖರ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ.
ನಸುಕಿನ ಜಾವ 3 ಗಂಟೆ ಸುಮಾರಿಗೆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅನಿಲ ಸೋರಿಕೆ ಆಗದಂತೆ ತಡೆಯಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ತೆರವು ಕಾರ್ಯಾಚರಣೆ ಬೆಳಿಗ್ಗೆ 8.45ಕ್ಕೆ ಪೂರ್ಣಗೊಂಡಿದೆ. ಸತತ ಐದೂವರೆ ಗಂಟೆಗಳ ಪ್ರಯತ್ನದ ಬಳಿಕ ಅನಿಲ ಸೋರಿಕೆ ಅಗದಂತೆ ನಿಯಂತ್ರಿಸಿ, ಟ್ಯಾಂಕರ್ ಅನ್ನು ಮೇಲಕ್ಕೆ ಎತ್ತಲಾಗಿದೆ. ಈ ಟ್ಯಾಂಕರ್ ಅನಿಲ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೊರಟಿತ್ತು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.