ಬೆಂಗಳೂರು: ಸಚಿವಾಲಯಗಳ ಎಲ್ಲಾ ಸೇವೆಗಳನ್ನೂ ‘ಸಕಾಲ’ ಯೋಜನೆ ವ್ಯಾಪ್ತಿಗೆ ತರಲಾಗುವುದು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಸಕಾಲ ಸಚಿವರೂ ಆದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸಕಾಲ ಸೇವೆಗಳ ಅನುಷ್ಠಾನ ಸಂಬಂಧ ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಕ್ಟೋಬರ್, ನವೆಂಬರ್ ತಿಂಗಳ ವರದಿ ಬಿಡುಗಡೆ ಮಾಡಿ ಮಾತನಾಡಿದರು. ಸಚಿವಾಲಯಗಳಲ್ಲೂ ಹಲವು ಅರ್ಜಿಗಳು ವಿಲೇವಾರಿಯಾಗದೆ ಸಾರ್ವಜನಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವಾಲಯವನ್ನೂ ಸಕಾಲದ ವ್ಯಾಪ್ತಿಗೆ ತಂದರೆ ಸಾರ್ವಜನಿಕರ ಕೆಲಸ ಕಾರ್ಯಗಳು ಚುರುಕಾಗಿ ನಡೆಯುತ್ತವೆ ಎಂದರು.
ಬೆಂಗಳೂರಿಗೆ ಕೊನೇ ಸ್ಥಾನ: ಈವರೆಗೆ ಸಕಾಲ ಯೋಜನೆಯಲ್ಲಿ 20.45 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ನಲ್ಲಿ ಚಿಕ್ಕಬಳ್ಳಾಪುರ, ನವೆಂಬರ್ನಲ್ಲಿ ಯಾದಗಿರಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿವೆ. ಬೆಂಗಳೂರು ನಗರ ಜಿಲ್ಲೆ ಕಳಪೆ ಸಾಧನೆ ಮಾಡಿದ್ದು, ಅದರಲ್ಲೂ ಬಿಬಿಎಂಪಿ ತೀರ ಹಿಂದೆ ಉಳಿದಿದೆ. ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಿ ಕೆಲಸ ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಅರ್ಜಿ ತಿರಸ್ಕಾರ: ಕೆಐಎಡಿಬಿ, ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿ,ಮಾಹಿತಿ ತಂತ್ರಜ್ಞಾನ ಇಲಾಖೆ ಗಳು ಹೆಚ್ಚಿನ ಪ್ರಮಾಣದಲ್ಲಿ ಸಕಾಲದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗ ಳನ್ನುತಿರಸ್ಕರಿಸಿವೆ. ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ, ಅರ್ಜಿ ತಿರಸ್ಕಾರಕ್ಕೆ ಕಾರಣಗಳನ್ನು ಪತ್ತೆಮಾಡಲಾಗುವುದು ಎಂದರು.
ಅರ್ಜಿಗಳೇ ಬಂದಿಲ್ಲ:ತೋಟಗಾರಿಕೆ ಇಲಾಖೆ,ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಜೆಸ್ಕಾಂ ವ್ಯಾಪ್ತಿಯ ಕಚೇರಿಗಳಿಗೆ ಈವರೆಗೂ ಸಕಾಲದಲ್ಲಿ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಹೇಳಿದರು.
34 ಸಾವಿರ ಅರ್ಜಿ ಬಾಕಿ: ಸಕಾಲ ಯೋಜನೆ ವ್ಯಾಪ್ತಿಗೆ 91 ಇಲಾಖೆಗಳ 1,033 ಸೇವೆಗಳು ಬರುತ್ತವೆ. ಈ ಯೋಜನೆಯಲ್ಲಿ ಅಕ್ಟೋಬರ್ನಲ್ಲಿ ಸಲ್ಲಿಕೆಯಾದ 14,307 ಹಾಗೂ ನವೆಂಬರ್ನಲ್ಲಿ 20,601 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 34,908 ಅರ್ಜಿಗಳು ಬಾಕಿ ಉಳಿದಂತಾಗಿದೆ.