ವಿಧಾನಸಭೆ: ರಾಣೆಬೆನ್ನೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆಯನ್ನು ನರೇಗ, ಬೆಳೆ ವಿಮೆ ಮತ್ತು ಇತರ ಯೋಜನೆಗಳಿಂದ ಹೊರಗಿಟ್ಟಿರುವುದನ್ನು ಆಕ್ಷೇಪಿಸಿದ ಕಾಂಗ್ರೆಸ್ನ ಪ್ರಕಾಶ್ ಕೋಳಿವಾಡ, ‘ಅಡಿಕೆ ಬೆಳೆಗಾರರ ರಕ್ಷಣೆಗಾಗಿ ನನ್ನನ್ನು ಮಂತ್ರಿ ಮಾಡಿ’ ಎಂದು ಕಾಂಗ್ರೆಸ್ನ ಪ್ರಕಾಶ್ ಕೋಳಿವಾಡ ಆಗ್ರಹಿಸಿದರು.
ರಾಣೆಬೆನ್ನೂರಿನಲ್ಲಿ ಅಡಿಕೆ ಬೆಳೆ ಕುರಿತು ಅವರು ಶುಕ್ರವಾರ ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉತ್ತರಿಸಿದರು. ರಾಣೆಬೆನ್ನೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಉತ್ತೇಜನ ನೀಡುವುದಿಲ್ಲ ಎಂಬ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕಾಶ್, ‘ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೂ ನಮ್ಮ ತಾಲ್ಲೂಕಿನಂತೆ ನೀರಿನ ಕೊರತೆ ಇದೆ. ಶಿಗ್ಗಾವಿ ತಾಲ್ಲೂಕಿನಲ್ಲೂ ಅದೇ ಸ್ಥಿತಿ ಇದೆ. ನಮ್ಮ ತಾಲ್ಲೂಕಿಗೆ ಮಾತ್ರ ತಾರತಮ್ಯ ಏಕೆ’ ಎಂದು ಕೇಳಿದರು.
‘ಮಂತ್ರಿ, ಮುಖ್ಯಮಂತ್ರಿ ಆದರೆ ಕೆಲಸ ಆಗುತ್ತದೆ. ಹಾಗಾಗಿ ನನ್ನನ್ನೂ ಮಂತ್ರಿ ಮಾಡಿ’ ಎಂದು ಪ್ರಕಾಶ್ ಬೇಡಿಕೆ ಇಟ್ಟರು.