ಮಂಗಳೂರು: ಡಿಸೆಂಬರ್ 19ರಂದು ನಗರದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ ವೇಳೆ ಗಲಭೆ ನಡೆದು ಪೊಲೀಸ್ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದ ಸ್ಥಳದಲ್ಲೇ ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಭಾನುವಾರ ಗಣರಾಜ್ಯೋತ್ಸವ ಆಚರಿಸಲಾಯಿತು.
ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಕಂದಕ್ ನಿವಾಸಿ ಅಬ್ದುಲ್ ಜಲೀಲ್ ಮೃತಪಟ್ಟಿದ್ದ ಸ್ಥಳದಲ್ಲೇ ತಾತ್ಕಾಲಿಕ ಧ್ವಜಸ್ತಂಭ ನೆಟ್ಟ ಸಾರ್ವಜನಿಕರು, ಅಲ್ಲೇ ಗಣರಾಜ್ಯೋತ್ಸವ ಆಚರಿಸಿದರು. ಮೃತ ಜಲೀಲ್ ಅವರ ಮಗಳು ಶಿಫಾನಿ ಮತ್ತು ಮಗ ಝಮೀಲ್ ಧ್ವಜಾರೋಹಣ ನೆರವೇರಿಸಿದರು. ನಂತರ ಶಿಫಾನಿ ಸಂವಿಧಾನದ ಪೀಠಿಕೆಯನ್ನು ಓದಿದರು.
ಬಳಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ‘ಇದು ಸಂವಿಧಾನದ ಕಗ್ಗೊಲೆ ನಡೆದ ಸ್ಥಳ. ಸಾಂವಿಧಾನಿಕ ಗಣರಾಜ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಗೋಲಿಬಾರ್ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಮತ್ತು ನೌಶೀನ್ ಕುದ್ರೋಳಿ ಅವರ ಕುಟುಂಬಗಳಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.
ಮಹಾನಗರ ಪಾಲಿಕೆ ಅಬ್ದುಲ್ ಲತೀಫ್, ನಿವೃತ್ತ ಶಿಕ್ಷಕಿ ಗುಲೋಲಿ, ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಸದಸ್ಯ ತಲ್ಹ ಇಸ್ಮಾಯಿಲ್, ಅನುಪಮಾ ಮಾಸಿಕದ ಸಂಪಾದಕಿ ಶಹನಾಝ್ ಎಂ. ಹೋರಾಟ ಬೆಂಬಲಿಸಿ ಮಾತನಾಡಿದರು.