ಚಿತ್ರದುರ್ಗ: ಮೂಲಸೌಕರ್ಯ ಕಲ್ಪಿಸಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರಾರಂಭವಾದ ಸರ್ವ ಶಿಕ್ಷಾ ಅಭಿಯಾನ ಯೋಜನೆ ವರ್ಷದಿಂದ ವರ್ಷಕ್ಕೆ ಮೂಲೆ ಗುಂಪಾಗುತ್ತಿದ್ದು, ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ನಲುಗುತ್ತಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷವೂ ಹಂತ ಹಂತವಾಗಿ ಅನುದಾನ ಕಡಿತ ಆಗುತ್ತಿದ್ದು, ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳ ಮಕ್ಕಳು ನೇರವಾಗಿ ಈ ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜ್ಯ ಸರ್ಕಾರ, ಶಾಸಕರ ಹಾಗೂ ಶಿಕ್ಷಣ ಇಲಾಖೆ ಅನುದಾನಗಳ ಮೂಲಕ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿ ಕೆಲಸ ಆಗುತ್ತಿದ್ದರೂ, ಪ್ರಸ್ತುತ ಈಗಲೂ ಅನೇಕ ಪ್ರಾಥಮಿಕ ಶಾಲೆಗಳ ಸ್ಥಿತಿಗತಿ ಬದಲಾಗುತ್ತಿಲ್ಲ. ಕೇಂದ್ರದ ಅನುದಾನ ಇಲ್ಲದೆ, ನಿರೀಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಅಸಾಧ್ಯ ಎಂಬ ಮಾತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಕೇಳಿಬರುತ್ತಿದೆ.
ದಶಕಗಳ ಹಿಂದೆ ಇದೇ ಯೋಜನೆಯಡಿ ಶಾಲಾ ಕಟ್ಟಡಗಳ ದುರಸ್ತಿ, ನೂತನ ಹೆಚ್ಚುವರಿ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ಫಿಲ್ಟರ್, ತಡೆಗೋಡೆ, ರ್ಯಾಂಪ್ ನಿರ್ಮಾಣ, ವಿದ್ಯುತ್ ಸಂಪರ್ಕ, ಪೀಠೋಪಕರಣ ಹೀಗೆ ಅನೇಕ ರೀತಿಯ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿತ್ತು. ಆದರೀಗ ಇವೆಲ್ಲವಕ್ಕೂ ಕೇಂದ್ರ ಅನುದಾನ ಸಂಪೂರ್ಣ ಸ್ಥಗಿತಗೊಳಿಸಿದೆ ಎನ್ನುತ್ತಾರೆ ಸರ್ವ ಶಿಕ್ಷಾ ಅಭಿಯಾನ ಅಧಿಕಾರಿಗಳು.
ಪ್ರಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 75:25, ನಂತರ 50:50 ಅನುಪಾತದಲ್ಲಿ ಸರ್ವ ಶಿಕ್ಷಾ ಅಭಿಯಾನ ಯೋಜನೆಗೆ ಅನುದಾನ ನೀಡಲಾಗುತ್ತಿತ್ತು. ಆದರೀಗ ಆ ಪ್ರಮಾಣವೂ ಕಡಿಮೆಯಾಗುತ್ತಿದೆ ಎನ್ನುತ್ತಾರೆ.
ಸರ್ವ ಶಿಕ್ಷಾ ಅಭಿಯಾನ(ಎಸ್ ಎಸ್ಎ) ಯೋಜನೆಯನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದೊಂದಿಗೆ (ಆರ್ಎಂಎಸ್ಎ) ವಿಲೀನಗೊಳಿಸಿದ ನಂತರ ಶಾಲೆಗಳ ಅಭಿವೃದ್ಧಿಗೆ ಹೇಳಿಕೊಳ್ಳುವಂಥ ಅನುದಾನ ಬಂದಿಲ್ಲ. ಈ ಹಿಂದೆ ನೀಡುತ್ತಿದ್ದ ನೋಟ್ ಬುಕ್, ಶಾಲಾ ಬ್ಯಾಗ್ ಅನ್ನೂ ವಿತರಿಸಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ.
ವಾಜಪೇಯಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೇಂದ್ರದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿದ್ದ ಕಾರಣ ಸಾಕಷ್ಟು ಮೂಲಸೌಕರ್ಯ ಕಲ್ಪಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿ ಗಮನಿಸಿದರೆ ಯೋಜನೆಯನ್ನು ನಿಧಾನವಾಗಿ ಸ್ಥಗಿತಗೊಳಿಸುವ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲೇ ಸುಮಾರು 100 ಸರ್ಕಾರಿ ಶಾಲೆಗಳ ಚಾವಣಿ ಹಾಳಾಗಿದ್ದು, ದುರಸ್ತಿಗೆ ಅನುದಾನವೇ ಇಲ್ಲವಾಗಿದೆ. ವಿವಿಧೆಡೆ ಶೌಚಾಲಯಗಳ ಸಮಸ್ಯೆ ಇದೆ. ಶುದ್ಧ ಕುಡಿಯುವ ನೀರು ಪೂರೈಕೆಗೆ ಇಲಾಖೆಯಿಂದ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವಿವಿಧೆಡೆ ಶಾಶ್ವತ ಪರಿಹಾರ ಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೂ ಇದೀಗ ‘ಸಮಗ್ರ ಶಿಕ್ಷಾ’ ಎಂಬ ನೂತನ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದು, ಸರ್ವ ಶಿಕ್ಷಾ ಅಭಿಯಾನ ಈ ಯೋಜನೆಯಡಿ ವಿಲೀನಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಮೂರು ತಿಂಗಳಿಂದ ಎಸ್ಎಸ್ಎ ಯೋಜನೆಗೆ ಸಕಾಲಕ್ಕೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
*ವಾರ್ಷಿಕ ವೇತನ, ಮಕ್ಕಳ ಸಮವಸ್ತ್ರಕ್ಕೆ ಅವಶ್ಯವಿರುವ ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಈಚೆಗೆ ಪ್ರಸ್ತಾವ ಸಲ್ಲಿಸಿದ್ದೇವೆ
– ನಾಗೇಂದ್ರ ಮಧ್ಯಸ್ಥ, ಸರ್ವ ಶಿಕ್ಷಾ ಅಭಿಯಾನ ನಿರ್ದೇಶಕ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.