ಬೆಳಗಾವಿ/ಗದಗ: ಶನಿವಾರ ನಡೆದ ಪ್ರತ್ಯೇಕ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದರೆ, ಕೊಲ್ಲಾಪುರ ಜಿಲ್ಲೆಯ ಬಸ್ತವಾಡೆ ಬಳಿ ನದಿಯಲ್ಲಿ ಮುಳುಗಿ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿ ನಾಲ್ವರು ಸತ್ತಿದ್ದಾರೆ.
ರೋಣ ವರದಿ (ಗದಗ ಜಿಲ್ಲೆ): ಇಲ್ಲಿನ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶನಿವಾರ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರೋಣ ನಿವಾಸಿ ಮಲ್ಲನಗೌಡ ಬಸವಂತಗೌಡ ಲಿಂಗನಗೌಡ್ರ (51) ಎಂಬುವರು ಮೃತಪಟ್ಟಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
‘ಜಾತ್ರೆಗೆ ನಿರೀಕ್ಷೆಗೂ ಮೀರಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ರಥ ಸಾಗುವಾಗ ಅದರ ಚಕ್ರಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ’ ಎಂದು ರೋಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಾಲ್ವರ ಸಾವು
ಬೆಳಗಾವಿ ವರದಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಬಸ್ತವಾಡೆ ಬಳಿ ಶುಕ್ರವಾರ ವೇದಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.
ಜಾತ್ರೆಗೆ ಬಂದಿದ್ದ ನಾಲ್ವರು ಈಜಲೆಂದು ವೇದಗಂಗಾ ನದಿಯಲ್ಲಿ ಇಳಿದಿದ್ದರು. ಮುಳುಗುತ್ತಿದ್ದ ಹರ್ಷ ದಿಲೀಪ ರಕ್ಷಣೆಗೆ ಮೂವರು ಮುಂದಾದಾಗ, ದುರ್ಘಟನೆ ನಡೆದಿದೆ. ಶುಕ್ರವಾರ ಮೂವರು, ಶನಿವಾರ ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.