ಬೆಂಗಳೂರು: ರಾಜ್ಯಗಳ ಅಧಿಕಾರವನ್ನು ಕಿತ್ತು, ಕೇವಲ ಆಡಳಿತ ಘಟಕಗಳನ್ನಾಗಿ ಮಾಡಲಾಗುತ್ತಿದೆ ಎಂದು ‘ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್’ ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೊ ಆರೋಪಿಸಿದರು.
ರಾಜ್ಯಗಳು ಒಕ್ಕೂಟ ಸರ್ಕಾರದ ಕೆಳಗೆ ಕೆಲಸ ಮಾಡುವುದಿಲ್ಲ. ಎರಡು ಸರ್ಕಾರಗಳು ಸ್ವತಂತ್ರವಾಗಿರುತ್ತವೆ. ರಾಜ್ಯಗಳು ಆಡಳಿತ ಘಟಕಗಳಲ್ಲ ಎಂದು ಅಂಬೇಡ್ಕರ್ ತಿಳಿಸಿದ್ದರು. ಈಗ ರಾಜ್ಯಗಳ ಅಧಿಕಾರವನ್ನು ಕಿತ್ತು ಸ್ವಂತ ಅಸ್ತಿತ್ವವಿಲ್ಲದ ಘಟಕಗಳನ್ನಾಗಿ ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ, ಏಕತೆಗೆ ಅಪಾಯ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಹುತ್ವ ಕರ್ನಾಟಕದ ಸದಸ್ಯೆ ಜಾನಕಿ ನಾಯರ್ ಮಾತನಾಡಿ, ‘ಬಹುಭಾಷೆ, ಬಹು ಸಂಸ್ಕೃತಿ ಭಾರತದ ಒಗ್ಗಟ್ಟಿಗೆ ಮುಖ್ಯ. ಒಕ್ಕೂಟ ಸರ್ಕಾರವು ಭಾಷೆಗಳ ಮೇಲೆ ದಾಳಿ ಮಾಡುತ್ತಿದೆ. ರಾಜ್ಯಗಳ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದರು.
‘ಎದ್ದೇಳು ಕರ್ನಾಟಕ’ದ ವೆಂಕಟ್ ಶ್ರೀನಿವಾಸನ್ ಮಾತನಾಡಿ, ‘ಕೇಂದ್ರ ಸರ್ಕಾರವು ತೆರಿಗೆಯ ಆದಾಯದ ಹೆಚ್ಚಿನ ಭಾಗವನ್ನು ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳ ರೂಪದಲ್ಲಿ ಸಂಗ್ರಹಿಸುತ್ತಿದೆ. ಅವುಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. ಹಾಗಾಗಿ ರಾಜ್ಯಗಳಿಗೆ ಸಿಗಬೇಕಾದ ಪಾಲನ್ನು ಕಡಿತಗೊಳಿಸಿದ್ದಾರೆ’ ಎಂದು ತಿಳಿಸಿದರು.