ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಬಿರುಸಿನ ಮಳೆಯಾಗಿದೆ. ತಗ್ಗು ಪ್ರದೇಶದ ಮನೆಗಳು ಹಾಗೂ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದುಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಚಿಕ್ಕನಹಳ್ಳಿ ಗ್ರಾಮದ ನಂದಮ್ಮ ನಿಂಗಪ್ಪ ಸಂಗವಾರ (44) ಮತ್ತು ದೇವತ್ಕಲ್ ಗ್ರಾಮದ ರಾಜು ಮಲ್ಲಿಕಾರ್ಜುನ (33) ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ದಾನೇಶ್ವರಿ ಸಿದ್ದಪ್ಪ ಕ್ಯಾಸರ್ (18) ಎಂಬುವರ ಮೃತದೇಹ ಬೆಳಕೋಟಾ ಜಲಾಶಯದ ಬಳಿ ಪತ್ತೆಯಾಗಿದೆ.
ಸಿಡಿಲಿಗೆ ಬೆನಕನಹಳ್ಳಿ ಗ್ರಾಮದಲ್ಲಿ ಎರಡು ಮೇಕೆ ಹಾಗೂಔರಾದ್ ತಾಲ್ಲೂಕಿನ ಮಾನುರ ಗ್ರಾಮದಲ್ಲಿ ಎತ್ತು ಸಾವಿಗೀಡಾಗಿವೆ.
ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಮಳೆಯಾಗಿದೆ. ಬೀದರ್ನಲ್ಲಿ ಒಂದು ಮತ್ತು ಹುಮನಾಬಾದ್ ತಾಲ್ಲೂಕಿನಲ್ಲಿ ಮೂರು ಮನೆಗಳು ಭಾಗಶಃ ಕುಸಿದಿವೆ.
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಸಮೀಪದ ದಾಡಗಿ ಗ್ರಾಮದಲ್ಲಿ ಕಾರಂಜಾ ಜಲಾಶಯದ ಚಿಕ್ಕಕಾಲುವೆ ಒಡೆದು ಹೊಲಗಳಿಗೆ ನೀರು ನುಗ್ಗಿ, ಬೆಳೆ ಹಾನಿಯಾಗಿದೆ. ಬೀದರ್ ತಾಲ್ಲೂಕಿನ ಮರಕಲ್ ಹಾಗೂ ಚಿಕ್ಕಪೇಟೆಯಲ್ಲಿ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ, ಆಹಾರಧಾನ್ಯಗಳು ನೀರು ಪಾಲಾಗಿವೆ.
ಕೊಡಗು ಜಿಲ್ಲೆಯ ಗೋಣಿ ಕೊಪ್ಪಲು ಭಾಗದಲ್ಲಿ ತೊರೆ ತೋಡುಗಳು ತುಂಬಿ ಹರಿಯುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆಯಾಯಿತು. ಶಿಖಾರಖಾನೆ ಪ್ರದೇಶದಲ್ಲಿ ಗಟಾರ ಉಕ್ಕಿ ಹರಿಯಿತು. ಹಲವು ಮನೆಗಳಿಗೂ ನೀರು ನುಗ್ಗಿ ದವಸಧಾನ್ಯ, ಪೀಠೋಪಕರಣಗಳು ಮುಳುಗಿವೆ. ಹತ್ತಾರು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದವು.
ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆ.11ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಿಗೆ ಹಾಗೂ ಸೆ.12ರಂದು ಬೆಳಗಾವಿ, ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.