ಬೆಂಗಳೂರು: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರು ತರುವ ಪ್ರಯತ್ನದ ಜತೆಗೇ ಈಗ ತುಂಗಾ ಮತ್ತು ಭದ್ರಾ ನದಿಯಿಂದಲೂ ನೀರು ಹರಿಸುವ ಮತ್ತೊಂದು ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರಿಗೆ ತುಂಗಾ, ಭದ್ರಾ ನದಿಯಿಂದ 18 ಟಿಎಂಸಿ ಅಡಿಗಳಷ್ಟು ನೀರು ತರುವ ಸಾಧ್ಯತೆಗಳ ಬಗ್ಗೆ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜತೆ ಮಂಗಳವಾರ ನಡೆದ ಸಭೆಯಲ್ಲಿ ತುಂಗಾ, ಭದ್ರಾ ನದಿಗಳ ಪಾತ್ರದಿಂದ ನೀರು ತರುವ ವಿಚಾರವನ್ನು ಎಂಜಿನಿಯರುಗಳು ಪ್ರಸ್ತಾಪಿಸಿದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಯೋಜನೆ ಸಿದ್ಧಪಡಿಸುವಂತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಿಂಗನಮಕ್ಕಿ ಜಲಾಶಯದಿಂದ 30 ಟಿಎಂಟಿ ಅಡಿಗಳಷ್ಟು ನೀರನ್ನು ಬೆಂಗಳೂರಿಗೆ ತರುವ ಸಂಬಂಧ ಹಿಂದಿನ ಸರ್ಕಾರದಲ್ಲಿ ಯೋಜನೆ ರೂಪಿಸಲಾಗಿದ್ದು, ಅದಕ್ಕೂ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆಸಲಹೆ ಮಾಡಿದ್ದಾರೆ.
ಲಿಂಗನಮಕ್ಕಿಯಿಂದ ನೀರು ತಂದರೆ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೂ ಕುಡಿಯಲು ಕೊಡಬಹುದು. ನೀರು ತರಲು ಯಾವ ಯೋಜನೆ ಸಹಕಾರಿಯಾಗಲಿದೆ ಎಂಬ ಬಗ್ಗೆ ಚಿಂತನೆ ನಡೆಸುವಂತೆಯೂ ಮುಖ್ಯಮಂತ್ರಿ ತಿಳಿಸಿದರು.
ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು₹6 ಸಾವಿರ ಕೋಟಿ ಹಣದ ಅಗತ್ಯವಿದ್ದು, ಆ ಕಡೆಗೂ ಆದ್ಯತೆ ಮೇಲೆಗಮನ ಹರಿಸುವಂತೆಯೂತಿಳಿಸಿದ್ದಾರೆ.