ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ದಿಟ್ಟ ದನಿಯಾಗಿ ಬೆಳೆದ ಜನಸಂಘದ ಕಾರ್ಯಕರ್ತ ಶ್ರೀನಿವಾಸ ಪ್ರಸಾದ್

Published 29 ಏಪ್ರಿಲ್ 2024, 3:26 IST
Last Updated 29 ಏಪ್ರಿಲ್ 2024, 3:26 IST
ಅಕ್ಷರ ಗಾತ್ರ

ಮೈಸೂರು: ಶ್ರೀನಿವಾಸ ಪ್ರಸಾದ್ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಮೂಲತಃ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ರಾಜಕೀಯದಲ್ಲಿ ದೊಡ್ಡ ನಾಯಕನಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದವರು.

‘ನಾನು ಯುವಕನಾಗಿದ್ದಾಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಜನ ಸಂಘದ ದೀನದಯಾಳ್ ಉಪಾಧ್ಯಾಯ ಹಾಗೂ ಜಗನ್ನಾಥ ಜೋಶಿ ಅಚ್ಚುಮೆಚ್ಚಿನ ನಾಯಕರಾಗಿದ್ದರು’ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ಜಗನ್ನಾಥರಾವ್ ಜೋಶಿ ಅವರ ಸಭೆ–ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿ ಚರ್ಚಿಸಿದ ವಿಚಾರಗಳನ್ನು ಹಂಚುವುದು ಅವರ ಇಷ್ಟದ ಕೆಲಸವಾಗಿತ್ತು.

ಜನಸಂಘದ ಸಭೆ, ಮೆರವಣಿಗೆ ಮತ್ತು ಚುನಾವಣಾ ಪ್ರಚಾರದಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಚುನಾವಣೆಯಲ್ಲಿ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತಿದ್ದರು. 1972ರವರೆಗೂ ಅವರು ಸಂಘದ ಸಕ್ರಿಯ ಕಾರ್ಯಕರಾಗಿದ್ದರು.

ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಆ ಪರಿಷತ್ತಿನಿಂದ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ವಿವಿಧ ಕ್ಷೇತ್ರದ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ‘ನನ್ನ ವೃತ್ತಿ ಶ್ರೇಷ್ಠ’ ಎಂಬುದು ಅಂದಿನ ಚರ್ಚೆಯ ವಿಷಯವಾಗಿತ್ತು. ಅಲ್ಲಿ ಮಾತನಾಡಿದವರು ಅವರವರ ವೃತ್ತಿಯ ಶ್ರೇಷ್ಠತೆ ಬಗ್ಗೆ ವಾದ ಮಂಡಿಸಿದ್ದರು. ಅದು ಪ್ರಸಾದ್ ಅವರ ಮೇಲೆ ಪರಿಣಾಮ ಬೀರಿತ್ತು. ನಾನು ಯಾವುದೇ ಕ್ಷೇತ್ರದಲ್ಲಿದ್ದರೂ ವೃತ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದು ನಿರ್ಧರಿಸಿದ್ದರು. ಈ ಘಟನೆಯನ್ನು ನೆನಯುತ್ತಿದ್ದ ಅವರು, ‘ನನಗೆ ರಾಜಕೀಯವು ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯ ಕ್ಷೇತ್ರವಾಗಿದೆ’ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು.

ಚುನಾವಣಾ ರಾಜಕಾರಣ ಪ್ರವೇಶ

1973ರಲ್ಲಿ ಮೈಸೂರಿನಲ್ಲಿ ನಡೆದ ‘ಬೂಸಾ’ ಚಳವಳಿಯ ನೇತೃತ್ವ ವಹಿಸುವ ಮೂಲಕ ಮುಂಚೂಣಿಯಲ್ಲಿದ್ದರು. ಹೀಗೆ ಹೋರಾಟದ ಮೂಲಕ 1974ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣಾ ರಾಜಕಾರಣ ಪ್ರವೇಶ ಮಾಡಿದ್ದರು. ಆಗ, ಅವರಿಗೆ ಅಶೋಕಪುರಂನ ಅವರ ಗೆಳೆಯರು ಮತ್ತು ಆಪ್ತರು ಧನಸಹಾಯ ಮಾಡಿ ಬೆಂಬಲವನ್ನೂ ನೀಡಿದ್ದರು. ಆಕಸ್ಮಿಕವಾಗಿ ಚುನಾವಣೆ ಎದುರಿಸಿದ ಅವರು ಆಗ ಸೋಲನುಭವಿಸಿದ್ದರು.

ಆ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ ಗೆದ್ದಿತ್ತು. ಆಗ ಆ ಪಕ್ಷದ ಪ್ರಮುಖ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಸಂಪರ್ಕಿಸಿದ್ದರಂತೆ. ನೀವು ಯಾವುದೇ ಆಮಿಷಗಳಿಗೆ ಬಲಿಯಾಗದೇ ನಮ್ಮ ಜಯಕ್ಕೆ ನೀವೂ ಮುಖ್ಯ ಕಾರಣವಾಗಿದ್ದೀರಿ ಎಂದು ತಿಳಿಸಿದ್ದರಂತೆ. ನೀವು ರಾಜಕೀಯದಲ್ಲಿ ಮುಂದುವರಿಯುವುದಾದರೆ ಆಡಳಿತ ಪಕ್ಷಕ್ಕೆ ಸೇರಬೇಡಿ, ವಿರೋಧ ಪಕ್ಷಕ್ಕೆ ಸೇರಿ. ಆಗ ನಿಮ್ಮ ಹೋರಾಟದ ಮನೋಭಾವ, ಸಂಘಟನಾ ಶಕ್ತಿ ಸಾರ್ಥಕವಾಗುತ್ತದೆ. ಸಂಸ್ಥಾ ಕಾಂಗ್ರೆಸ್‌ಗೆ ಬರುವುದಾದರೆ ನಿಮ್ಮ ಭವಿಷ್ಯದ ರಾಜಕೀಯದ ಬಗ್ಗೆ ನಾನೇ ಆಸಕ್ತಿ ವಹಿಸುತ್ತೇನೆ ಎಂದು ತಿಳಿಸಿದ್ದರಂತೆ. ಈ ಕಾರಣದಿಂದ ಸಂಸ್ಥಾ ಕಾಂಗ್ರೆಸ್ ಸೇರಿದ ಅವರಿಗೆ ಪಕ್ಷದಲ್ಲಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನ ದೊರೆತಿತ್ತು.

ಕಾರ್ಯಕಾರಿ ಸಮಿತಿಗೆ ಆಯ್ಕೆ

1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವದಲ್ಲಿ ಇತರ ವಿರೋಧ ಪಕ್ಷಗಳಾಗಿದ್ದ ಭಾರತೀಯ ಜನಸಂಘ, ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸ್ವತಂತ್ರ ಪಕ್ಷ ಹಾಗೂ ಭಾರತೀಯ ಲೋಕದಳ ವಿಲೀನಗೊಂಡು 1977ರಲ್ಲಿ ಜನತಾ ಪಕ್ಷ ಉದಯವಾಯಿತು. ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಯಿತು. ಕರ್ನಾಟಕ ರಾಜ್ಯದ ಜನತಾ ಪಕ್ಷದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ‍ಪಾಟೀಲ ನೇಮಕಗೊಂಡರು. ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಶ್ರೀನಿವಾಸ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿತ್ತು.

1977ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಮುಂದೆ ಜನತಾ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಯುವ ಜನತಾ ಘಟಕ ರಚನೆಯಾಯಿತು. ಅದರ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಸಾದ್ ನೇಮಕಗೊಂಡರು, ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದರು.

1978ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಿ. ನರಸೀಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಆದರೆ, ಜಯ ದೊರೆತಿರಲಿಲ್ಲ. ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳ ನಂತರ ಆಂತರಿಕ ಕಲಹದಿಂದ ಬಿಕ್ಕಟ್ಟು ತಲೆದೋರಿ ಪಕ್ಷ ಛಿದ್ರವಾಯಿತು. ಆದ್ದರಿಂದ, ವಿಲೀನಗೊಂಡಿದ್ದ ಪಕ್ಷಗಳು ಮತ್ತೆ ಬೇರೆ ಬೇರೆ ಪಕ್ಷಗಳಾಗಿ ರಚನೆಯಾದವು. ಈ ಬೆಳವಣಿಗೆಯಿಂದ ಪ್ರಸಾದ್ ಬಹಳ ನಿರಾಸೆಗೆ ಒಳಗಾಗಿದ್ದರು. ಬಳಿಕ ಆರ್‌.ಗುಂಡೂರಾವ್ ಅವರ ಸಲಹೆಯಂತೆ ಇಂದಿರಾ ಕಾಂಗ್ರೆಸ್‌ ಸೇರಿದರು.

1980ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದಿದ್ದರು. ಅಲ್ಲಿಂದ ಅವರ ರಾಜಕೀಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದದ್ದು ಇತಿಹಾಸ.

ಒಟ್ಟು 14 ಚುನಾವಣೆಗಳನ್ನು ಎದುರಿಸಿದ ಅವರು, ಸೋಲು–ಗೆಲುವುಗಳನ್ನು ಕಂಡಿದ್ದರು. ಇದರಲ್ಲಿ 9 ಬಾರಿ ಲೋಕಸಭೆಗೆ ಸ್ಪರ್ಧಿಸಿ 6 ಬಾರಿ ಗೆಲುವು ಸಾಧಿಸಿದ್ದರು. ಒಮ್ಮೆ ಕೇಂದ್ರದಲ್ಲಿ ರಾಜ್ಯ ಸಚಿವನಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 5 ಬಾರಿ ಸ್ಪರ್ಧಿಸಿ 2 ಬಾರಿ ಗೆಲುವು ಸಾಧಿಸಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಜಕಾರಣಕ್ಕೆ ವಿದಾಯ

ಚಾಮರಾಜಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ನಡುವೆ,  ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ವನ್ನು ಮಾರ್ಚ್‌ನಲ್ಲಿ ಆಚರಿಸಿಕೊಂಡಿದ್ದ ಅವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರು. ಅದಾದ ನಂತರ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮೈಸೂರಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸ ‘ಭೀಮಸದನ’ದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯರಾಗಿರಲಿಲ್ಲ. ಆದರೆ, ಅವರನ್ನು ರಾಜಕೀಯ ಪಕ್ಷದವರು ಭೇಟಿಯಾಗಿ ಬೆಂಬಲ ಕೋರುವುದನ್ನು ನಿಲ್ಲಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುನಿಸು ಮರೆತು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಕಾಂಗ್ರೆಸ್‌ಗೆ ಬೆಂಬಲವನ್ನೂ ಕೋರಿದ್ದರು. ಬಳಿಕ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕೂಡ ಭೇಟಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ಅದನ್ನು ನಯವಾಗಿ ತಿರಸ್ಕರಿಸಿದ್ದ ಪ್ರಸಾದ್ ತಮ್ಮ ಆರೋಗ್ಯ ಹದಗೆಟ್ಟಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT