ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದಲ್ಲಿ ₹87 ಕೋಟಿ ಅವ್ಯವಹಾರ : ಐ.ಟಿ ಕಂಪನಿ ಖಾತೆಗೆ ಹಣ

Published 28 ಮೇ 2024, 23:32 IST
Last Updated 28 ಮೇ 2024, 23:32 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿದ್ದ ₹87 ಕೋಟಿಯನ್ನು ಸಾಫ್ಟ್‌ವೇರ್‌ ಕಂಪನಿಯೊಂದರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಕಂಡುಬಂದಿದೆ.

ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆಯ ಶಾಖೆಯಲ್ಲಿ ನಿಗಮದ ಬ್ಯಾಂಕ್‌ ಖಾತೆ ಇದೆ. ಆ ಖಾತೆಯಲ್ಲಿ ನಿಗಮವು ₹187 ಕೋಟಿ ಇರಿಸಿತ್ತು. ಮಾರ್ಚ್‌ 1 ರಿಂದ ಮಾರ್ಚ್‌ 31ರ ಅವಧಿಯಲ್ಲಿ ₹ 87 ಕೋಟಿ ಮೊತ್ತವನ್ನು ಯೂನಿಯನ್‌ ಬ್ಯಾಂಕ್‌ನ ಬೇರೆ ಶಾಖೆಗಳ ಕೆಲವು ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಸಾಫ್ಟ್‌ವೇರ್‌ ಕಂಪನಿಯೊಂದರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರಿಗೆ ನಿಗಮದ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿದೆ.

ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಮೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರು, ಯೂನಿಯನ್‌ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೆದಿದ್ದ ಪತ್ರದ ಸಮೇತ ಕಿರು ವರದಿಯೊಂದನ್ನು ಮಂಗಳವಾರ ಸಲ್ಲಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಮ್ಮ ಸಹಿಯನ್ನು ಫೋರ್ಜರಿ ಮಾಡಿ ಬ್ಯಾಂಕ್‌ಗೆ ಪತ್ರವೊಂದನ್ನು ಸಲ್ಲಿಸಿ, ನಿಗಮದ ಹೆಸರಿನಲ್ಲಿ ಚೆಕ್‌ ಪುಸ್ತಕ ಪಡೆಯಲಾಗಿದೆ. ಚೆಕ್‌ಗಳಿಗೂ ಫೋರ್ಜರಿ ಸಹಿ ಮಾಡಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇನ್ನೂ ₹100 ಕೋಟಿ ವರ್ಗಾವಣೆ ಯತ್ನ:

ನಿಗಮದ ಖಾತೆಯಲ್ಲಿರುವ ಇನ್ನೂ ₹100 ಕೋಟಿಯನ್ನು ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಆ ಹಂತದಲ್ಲಿ ನಿಗಮದ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು. ಇದರಿಂದಾಗಿ ₹100 ಕೋಟಿ ವರ್ಗಾವಣೆ ಯತ್ನಕ್ಕೆ ಹಿನ್ನಡೆ ಆಗಿತ್ತು ಎಂಬ ಮಾಹಿತಿ ಇಲಾಖೆಯೊಳಗೆ ಚರ್ಚೆಗೆ ಕಾರಣವಾಗಿದೆ.

‘ಖಾತೆ ಇರುವುದೇ ಗೊತ್ತಿರಲಿಲ್ಲ’

‘ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಕೆಲವು ದಿನಗಳ ಮೊದಲು ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ನೀತಿಸಂಹಿತೆ ಜಾರಿಯಾದ ಬಳಿಕ ನಾನು ಕಚೇರಿಗೆ ಹೋಗಿಲ್ಲ. ಯೂನಿಯನ್ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಇರುವುದು ಮತ್ತು ಅದರಲ್ಲಿ ಹಣ ಇರಿಸಿರುವ ವಿಚಾರವನ್ನೇ ಅಧಿಕಾರಿಗಳು ನನಗೆ ತಿಳಿಸಿರಲಿಲ್ಲ’ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ತಿಳಿಸಿದರು.

ಪ್ರಕರಣ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣದ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಸಿಐಡಿ ತನಿಖೆಯಲ್ಲಿ ಎಲ್ಲವೂ ಹೊರಬರಲಿದೆ’ ಎಂದರು.

ಆದರೆ, ‘ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗುತ್ತಿರುವ ಕುರಿತು ನಿಗಮದ ಅಧ್ಯಕ್ಷರಿಗೆ ಶನಿವಾರ (ಮೇ25) ಮಾಹಿತಿ ನೀಡಿದ್ದೆ’ ಎಂಬ ಉಲ್ಲೇಖ ಚಂದ್ರಶೇಖರನ್ ಅವರ ಮರಣ ಪೂರ್ವ ಪತ್ರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT