ಬೆಂಗಳೂರು: ಬಿಜೆಪಿ ಸದಸ್ಯರ ವಿರೋಧ, ಸಭಾತ್ಯಾಗದ ನಡುವೆ ‘ಪ್ರೀಮಿಯಂ ಎಫ್ಎಆರ್’ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ’ಗೆ ಗುರುವಾರ ವಿಧಾನ ಪರಿಷತ್ನಲ್ಲಿ ಅಂಗೀಕಾರ ನೀಡಲಾಯಿತು.
ಮಸೂದೆ ಮಂಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾರ್ಗಸೂಚಿ ದರದ ಶೇ 40ರಷ್ಟು ಶುಲ್ಕವನ್ನು ಸ್ಥಳೀಯ ಯೋಜನಾ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಿ, ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಎಫ್ಎಆರ್ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಅವಕಾಶವಿದೆ. ಮಸೂದೆ ಅಂಗೀಕಾರವಾದರೆ ಬೆಂಗಳೂರು, ಮಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಪ್ರದೇಶಗಳಲ್ಲೂ ಬಹುಮಹಡಿ ಕಟ್ಟಗಳ ನಿರ್ಮಾಣಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಬಿಜೆಪಿಯ ಕೆ.ಎಸ್.ನವೀನ್ ಮಾತನಾಡಿ, ಸಣ್ಣ ರಸ್ತೆಗಳು ಇರುವ ಕಡೆ ಜನದಟ್ಟಣೆ ಉಂಟಾಗುತ್ತದೆ. ಅಗ್ನಿ ಅವಘಡಗಳು ಎದುರಾದಾಗ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ಈ ಕುರಿತು ಸರ್ಕಾರ ಆಲೋಚಿಸಬೇಕು’ ಎಂದು ಸಲಹೆ ನೀಡಿದರು
‘ಮಸೂದೆ ಜಾರಿಯಾದರೆ ಎಲ್ಲ ಅಧಿಕಾರ ಅಧಿಕಾರಿಗಳ ಬಳಿ ಕೇಂದ್ರೀಕೃತವಾಗುತ್ತದೆ. ಹಾಗಾಗಿ, ಮಸೂದೆ ಹಿಂಪಡೆಯಬೇಕು. ಎಲ್ಲರ ಜತೆ ಇನ್ನಷ್ಟು ಚರ್ಚಿಸಿದ ಬಳಿಕ ಮತ್ತೊಮ್ಮೆ ಮಂಡನೆ ಮಾಡಬೇಕು’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಬಿಜೆಪಿಯ ಕೆಲ ಸದಸ್ಯರು ಮಸೂದೆ ಬೆಂಬಲಿಸಿ ಮಾತನಾಡಿದರೆ, ಹಲವರು ವಿರೋಧಿಸಿದರು. ಅವರಲ್ಲೇ ಭಿನ್ನಾಭಿಪ್ರಾಯ ಮೂಡದ ಕಾರಣ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಜತೆ ಚರ್ಚಿಸಿದ ಶ್ರೀನಿವಾಸ ಪೂಜಾರಿ ಸಭಾತ್ಯಾಗ ಮಾಡುವ ನಿರ್ಧಾರ ತೆಗೆದುಕೊಂಡರು. ಆದರೆ, ಮಿತ್ರಪಕ್ಷ ಜೆಡಿಎಸ್ ಸಾಥ್ ನೀಡಲಿಲ್ಲ. ಗದ್ದಲದ ನಡುವೆ ಸಭಾಪತಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದರು. ಅಂಗೀಕಾರವಾಗಿದೆ ಎಂದು ಘೋಷಿಸಿದರು.
ಇದಕ್ಕೂ ಮೊದಲು ವಿಧಾನಸಭೆಯಿಂದ ಅಂಗೀಕಾರವಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಮಸೂದೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗಳ ಕುರಿತು ವಿಸ್ತೃತ ಚರ್ಚೆ ನಡೆದ ನಂತರ ಅಂಗೀಕಾರ ದೊರೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.