ಮಂಡ್ಯ: ‘ಸುಮಲತಾ ಅವರು ಈಗ ಜಿಲ್ಲೆಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ರೈತರಿಗೆ ನೀರು ಬೇಕಾದಾಗ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಿಸಿಕೊಡುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಲಿ’ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಭಾನುವಾರ ವ್ಯಂಗ್ಯವಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನೀರು ನಿರ್ವಹಣಾ ಪ್ರಾಧಿಕಾರ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆ. ಸುಮಲತಾ ಅವರು ಕೇವಲ ಪಕ್ಷೇತರ ಅಭ್ಯರ್ಥಿಯಾಗಿ ಉಳಿಯಲಿಲ್ಲ. ಅವರಿಗೆ ಬಿಜೆಪಿ ಬೆಂಬಲವೂ ಇತ್ತು. ಹೀಗಾಗಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜನರು ಕೇಳಿದಾಗ ನೀರು ಬಿಡಿಸಿಕೊಡಲಿ. ಇನ್ನು ಮುಂದೆ ಜನರಿಗೆ ನ್ಯಾಯ ಸಿಗಲಿ. ನಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿದ್ದಕ್ಕೆ ನಾನು ಅವರಿಗೆ ಅಭಿನಂದಿಸುತ್ತೇನೆ’ ಎಂದು ಹೇಳಿದರು.
‘ರೈತರ ಪರ, ಸಾಮಾನ್ಯ ಜನರ ಪರ ಇರಿ ಎಂದು ಸುಮಲತಾ ಅವರಲ್ಲಿ ಕೇಳಿಕೊಳ್ಳುತ್ತೇನೆ. ಸದ್ಯ ಬೆಳೆಗಳು ಒಣಗುತ್ತಿದ್ದು ನೀರು ಹರಿಸಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ನೀರು ಹರಿಸಲು ಕ್ರಮ ಕೈಗೊಳ್ಳಬೇಕು’ ಎಂದರು.