ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯವು 11 ರಿಂದ 6 ನೇ ಸ್ಥಾನಕ್ಕೇರಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು,‘ ಈ ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದೆ. ₹6,448 ಕೋಟಿ ಮೊತ್ತದ ಯೋಜನೆಯಲ್ಲಿ ₹4,411.9 ಕೋಟಿ ಮೊತ್ತದ ಕಾಮಗಾರಿ ಆರಂಭವಾಗಿದೆ.
ಇನ್ನು ಉಳಿದ₹ 2,500 ಕೋಟಿ ಮೊತ್ತ ಕಾಮಗಾರಿಗೆ ಟೆಂಡರ್ ಕರೆದು ಯೋಜನೆ ಅಂತಿಮಗೊಳಿಸಲಾಗುವುದು ಎಂದರು. ಕೇಂದ್ರ ಸರ್ಕಾರ ಪ್ರತಿ ಸ್ಮಾರ್ಟ್ ಸಿಟಿಗೆ ತಲಾ ₹100 ಕೋಟಿ ನೀಡಿದರೆ, ರಾಜ್ಯ ಸರ್ಕಾರ ₹100 ಕೋಟಿ ನೀಡುತ್ತದೆ’ ಎಂದರು.
ಬೆಂಗಳೂರು, ಶಿವಮೊಗ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ, ತುಮಕೂರು, ಹುಬ್ಬಳ್ಳಿ– ಧಾರವಾಡ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಯಾವುದೇ ನಗರದಲ್ಲೂ ಕಾಮಗಾರಿ ಕುಂಠಿತವಾಗಿಲ್ಲ ಎಂದು ಅವರು ಹೇಳಿದರು..
‘ಸ್ಮಾರ್ಟ್ ಸಿಟಿ’ ರ್ಯಾಂಕಿಂಗ್: ಬೆಳಗಾವಿ 45 ರಿಂದ 38 , ದಾವಣಗೆರೆ 12 ರಿಂದ 15, ಹುಬ್ಬಳ್ಳಿ– ಧಾರವಾಡ 47 ರಿಂದ 28, ಮಂಗಳೂರು 52 ರಿಂದ 40, ಶಿವಮೊಗ್ಗ 38 ರಿಂದ 33, ತುಮಕೂರು 28 ರಿಂದ 22 ಮತ್ತು ಬೆಂಗಳೂರು 55 ರಿಂದ 31ನೇ ರ್ಯಾಂಕಿಂಗ್ ತಲುಪಿದೆ ಎಂದು ಅವರು ವಿವರ ನೀಡಿದರು.