ವಾಷಿಂಗ್ಟನ್:ಕೊರೊನಾ ಸೋಂಕು ಎಂಬ ಜಾಗತಿಕ ಪಿಡುಗು ನಮ್ಮೆಲ್ಲರ ಇತಿಮಿತಿಗಳನ್ನು ತೋರಿಸಿಕೊಟ್ಟಿದ್ದು, ಕೋವಿಡ್ ನಂತರದ ಜಗತ್ತಿಗೆ ನ್ಯಾಯಸಮ್ಮತವಾದ, ಸಮಾನತೆ ಹೊಂದಿದ ಮತ್ತು ಮಾನವತೆ ಆಧಾರದ ಮೇಲೆ ರೂಪಿಸಲ್ಪಟ್ಟ ಜಾಗತೀಕರಣದ ಅಗತ್ಯವಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಬೆಳವಣಿಗೆ ಮತ್ತು ಮಾನವ ಕಲ್ಯಾಣವು ಒಂದಕ್ಕೊಂದು ಪೂರಕವಾಗಿ ಸಾಗಬೇಕಿರುವ ಅವಶ್ಯಕತೆ ಇದೆ. ಎಲ್ಲರಿಗೂ ಆರೋಗ್ಯ ಮತ್ತು ತಂತ್ರಜ್ಞಾನದ ಉತ್ಪನ್ನಗಳು ಸಮನಾಗಿ ಕೈಗೆಟುಕುವ ಮತ್ತು ಸಮಯೋಚಿತವಾಗಿ ದೊರಕುವ ನಿಟ್ಟಿನಲ್ಲಿ ನಾವು ಯೋಚಿಸಬೇಕಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಪ್ರತಿಪಾದಿಸಿದ್ದಾರೆ.
ಭಾರತದ ಮಾಜಿ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಅವರು ಸೋಮವಾರ ಆಯೋಜಿಸಿದ್ದ ಏಷ್ಯಾ ಗ್ರೂಪ್ನೊಂದಿಗಿನ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
'ಕೊರೊನಾ ಸೋಂಕು ಈಗ ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ವ್ಯವಸ್ಥೆಯ ಮಿತಿಗಳನ್ನು ತೋರಿಸಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ನ್ಯಾಯಸಮ್ಮತವಾದ, ಸಮಾನತೆ ಹೊಂದಿದ ಮತ್ತು ಮಾನವೀಯತೆಯ ಆಧಾರದ ಮೇಲೆ ರೂಪಿಸಲ್ಪಟ್ಟ ಜಾಗತೀಕರಣದ ಅವಶ್ಯಕತೆ ಇದೆ' ಎಂದು ತರಂಜಿತ್ ಹೇಳಿದ್ದಾರೆ.
'ಆರೋಗ್ಯ ಮತ್ತು ವೈಜ್ಞಾನಿಕ ಸಂಶೋಧನೆ ಕ್ಷೇತ್ರದಲ್ಲಿ ಅಮೆರಿಕ ಜೊತೆಗಿನ ನಮ್ಮ ದೀರ್ಘಕಾಲದ ಸಹಭಾಗಿತ್ವವು ಈ ಸಮಯದಲ್ಲಿ ಮತ್ತಷ್ಟು ಗಾಢವಾಯಿತು' ಎಂದು ಅವರು ತಿಳಿಸಿದ್ದಾರೆ.