ವಿಶ್ವಸಂಸ್ಥೆ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಾಯಕರೊಂದಿಗೆ ಭಾರತ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಮಾತನಾಡಿರುವ ರುಚಿರಾ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವು ಮಹಿಳೆಯರು, ಮಕ್ಕಳು ಸೇರಿದಂತೆ ಬಹಳಷ್ಟು ನಾಗರಿಕರ ಪ್ರಾಣಹಾನಿಗೆ ಮತ್ತು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಖಂಡಿತವಾಗಿಯೂ ಒಪ್ಪುವಂತಹದಲ್ಲ. ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಇಸ್ರೇಲ್ನಲ್ಲಿ ಅಕ್ಟೋಬರ್ 7 ರಂದು ನಡೆದ ಭಯೋತ್ಪಾದಕ ದಾಳಿಯು ಸಂಘರ್ಷಕ್ಕೆ ತಕ್ಷಣದ ಕಾರಣವಾಗಿದೆ ಎಂಬುದು ಭಾರತಕ್ಕೆ ತಿಳಿದಿದೆ ಎಂದು ಒತ್ತಿಹೇಳಿದ ಅವರು, ಇದು ಆಘಾತಕಾರಿ ಬೆಳವಣಿಗೆ. ಇದನ್ನು ಯಾವುದೇ ಮುಲಾಜಿಲ್ಲದೆ ಖಂಡಿಸುತ್ತೇವೆ. ಭಾರತವು ಭಯೋತ್ಪಾದನೆ ಚಟುವಟಿಕೆಯನ್ನು ಸಹಿಸುವುದಿಲ್ಲ. ಉಗ್ರ ಕೃತ್ಯಗಳನ್ನು ಹಾಗೂ ದಾಳಿ ಸಂತ್ರಸ್ತರನ್ನು ಒತ್ತೆ ಇರಿಸಿಕೊಳ್ಳುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಒತ್ತೆಯಾಳುಗಳನ್ನು ಬೇಷರತ್ ಆಗಿ ಕೂಡಲೇ ಬಿಡುಗಡೆ ಮಾಡುವಂತೆ ಭಾರತ ಒತ್ತಾಯಿಸುತ್ತದೆ ಎಂದಿರುವ ರುಚಿರಾ, 'ಭಾರತದ ನಾಯಕತ್ವವು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಸೇರಿದಂತೆ ಸಂಘರ್ಷಪೀಡಿತ ಪ್ರದೇಶದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ' ಎಂದು ಇದೇ ವೇಳೆ ಹೇಳಿದ್ದಾರೆ.