ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಉಕ್ರೇನ್‌ ದ್ವಿಪಕ್ಷೀಯ ಸಭೆ

ಸಂಘರ್ಷ ಮತ್ತು ಅದರ ಪರಿಣಾಮಗಳ ಕುರಿತು ಚರ್ಚೆ
Published 29 ಮಾರ್ಚ್ 2024, 15:07 IST
Last Updated 29 ಮಾರ್ಚ್ 2024, 15:07 IST
ಅಕ್ಷರ ಗಾತ್ರ

ನವದೆಹಲಿ: ‘ಸಾಗುತ್ತಿರುವ ಸಂಘರ್ಷ ಮತ್ತು ಅದರ ವ್ಯಾಪಕ ಪರಿಣಾಮಗಳು’ ಎಂಬ ವಿಷಯವನ್ನು ಕೇಂದ್ರೀಕರಿಸಿ ಭಾರತ ಮತ್ತು ಉಕ್ರೇನ್‌ ಶುಕ್ರವಾರ ದೆಹಲಿಯಲ್ಲಿ ‘ಮುಕ್ತ ಮತ್ತು ವ್ಯಾಪಕ’ ದ್ವಿಪಕ್ಷೀಯ ಸಭೆ ನಡೆಸಿದವು. ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಈ ಸಭೆಯನ್ನು ನಡೆಸಿದರು. 

ಎರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಯುತ್ತಿರುವ ಉಕ್ರೇನ್‌– ರಷ್ಯಾ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಹುಡುಕುವ ಪ್ರಯತ್ನಗಳ ನಡುವೆ ಕುಲೇಬಾ ಅವರು ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದರು. ಭೇಟಿಯ ಎರಡನೇ ದಿನವಾದ ಶುಕ್ರವಾರ, ಜೈಶಂಕರ್‌ ಹಾಗೂ ಕುಲೇಬಾ ಹೈದರಾಬಾದ್‌ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. 

ಸಭೆ ಬಳಿಕ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಜೈಶಂಕರ್‌, ‘ಉಕ್ರೇನ್ ವಿದೇಶಾಂಗ ಸಚಿವರಾದ ಡೆಮೊಟ್ರಿ ಕುಲೇಬಾ ಅವರೊಂದಿಗೆ ಮುಕ್ತ ಮತ್ತು ವ್ಯಾಪಕವಾದ ಸಂಭಾಷಣೆ ನಡೆಯುತ್ತಿದೆ. ನಮ್ಮ ಚರ್ಚೆಗಳು ಸದ್ಯದ ಸಂಘರ್ಷ ಮತ್ತು ಅದರ ವ್ಯಾಪಕವಾದ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿವೆ. ಸಭೆಯಲ್ಲಿ ವಿವಿಧ ಉಪಕ್ರಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ನಮ್ಮಿಬ್ಬರ ಆಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಮಾತನಾಡಿದರು. ದ್ವಿಪಕ್ಷೀಯ ಸಹಕಾರ ಸೇರಿದಂತೆ ಒಟ್ಟಾರೆ ಸಂಬಂಧವನ್ನು ಬಲಪಡಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದಿದ್ದಾರೆ. 

‘ಎಸ್. ಜೈಶಂಕರ್‌ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಿದೆ. ಭಾರತ ಮತ್ತು ಉಕ್ರೇನ್‌ ಸಹಕಾರವು ಮುಖ್ಯವಾಗಿದೆ. ನಾವು ಪರಸ್ಪರ ಸಂಬಂಧಗಳನ್ನು ಪುನಶ್ಚೇತನಗೊಳಿಸುತ್ತೇವೆ. ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್ಸ್ಕಿಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸಂವಾದವನ್ನು ಆಧರಿಸಿ ಶಾಂತಿ ಸೂತ್ರಕ್ಕೆ ನಾವು ನಿರ್ದಿಷ್ಟವಾಗಿ ಗಮನ ನೀಡುತ್ತೇವೆ’ ಎಂದು ಕುಲೇಬಾ ‘ಎಕ್ಸ್‌’ ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT