ಕೊಲಂಬೊ: ರನಿಲ್ ವಿಕ್ರಮಸಿಂಘೆ ಅವರನ್ನೇ ಪ್ರಧಾನಿಯನ್ನಾಗಿ ಸ್ಪೀಕರ್ ಕರು ಜಯಸೂರ್ಯ ಭಾನುವಾರ ಮಾನ್ಯತೆ ನೀಡಿದ್ದಾರೆ.
ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತಮ್ಮನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಹೋರಾಟಕ್ಕೆ ಸಜ್ಜಾಗಿದ್ದ ವಿಕ್ರಮಸಿಂಘೆ ಅವರು ಸ್ಪೀಕರ್ ಅವರ ಈ ನಡೆಯಿಂದ ನಿರಾಳರಾಗಿದ್ದಾರೆ.
ಸಂಸತ್ತನ್ನು ನ. 16ರ ವರೆಗೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿರುವ ಅಧ್ಯಕ್ಷ ಸಿರಿಸೇನ ಅವರ ಕ್ರಮವನ್ನು ಸಹ ಪ್ರಶ್ನಿಸಿರುವ ಸ್ಪೀಕರ್ ಜಯಸೂರ್ಯ, ‘ಸಂಸತ್ತನ್ನು ಅಮಾನತಿನಲ್ಲಿಡುವ ನಿರ್ಧಾರ ದೇಶದಲ್ಲಿ ಗಂಭೀರ ಹಾಗೂ ಅನಪೇಕ್ಷಿತ ಪರಿಣಾಮವನ್ನುಂಟು ಮಾಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಸಿರಿಸೇನ ಅವರಿಗೆ ಪತ್ರ ಬರೆದಿರುವ ಜಯಸೂರ್ಯ, ‘ಸ್ಪೀಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರಷ್ಟೇ ಸಂಸತ್ ಅಧಿವೇಶವನ್ನು ಮುಂದೂಡಬೇಕು’ ಎಂದು ವಿವರಿಸಿದ್ದಾರೆ.
‘ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಅವರು ಹೊಂದಿರಬೇಕಾದ ಅಧಿಕಾರಗಳನ್ನು ಮರುಸ್ಥಾಪನೆ ಮಾಡಬೇಕು. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಆಡಳಿತ ನಡೆಸುವ ಸಲುವಾಗಿ ಅವರು ಸಂಪೂರ್ಣ ಬಹುಮತ ಹೊಂದಿದ್ದಾರೆ’ ಎಂದೂ ಪ್ರತಿಪಾದಿಸಿದ್ದಾರೆ.
ವಿಕ್ರಮಸಿಂಘೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿರುವ ಕ್ರಮವನ್ನೂ ಸಹ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.