<p><strong>ಮಾಸ್ಕೊ</strong>: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾದರೆ ಅಥವಾ ಬೆಲೆ ಹೆಚ್ಚಳವಾದರೆ ಭಾರತಕ್ಕೆ ಇಂಧನ ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾ ಹೇಳಿದೆ.</p><p>‘ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಭಾರತಕ್ಕೆ ಇಂಧನ ಪೂರೈಕೆ ಸಿದ್ಧರಿದ್ದೇವೆ’ಎಂದು ರಷ್ಯಾದ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.</p><p>ಅಮೆರಿಕ ಮತ್ತು ಇರಾನ್ ನಡುವಿನ ಹಗೆತನ ತೀವ್ರಗೊಂಡಿದ್ದು, ವ್ಯಾಪಾರ, ಹಡಗು ಮಾರ್ಗಗಳು ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ, ಭಾರತವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತೆಯೇ ರಷ್ಯಾದಿಂದ ಹೇಳಿಕೆ ಬಂದಿದೆ.</p><p>ಇರಾನ್ ತನ್ನ ಪ್ರತೀಕಾರದ ದಾಳಿಯಲ್ಲಿ ತೈಲ ಸಂಸ್ಕರಣಾಗಾರಗಳು ಮತ್ತು ಉತ್ಪಾದನಾ ತಾಣಗಳು ಸೇರಿದಂತೆ ಗಲ್ಫ್ ದೇಶಗಳ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದರ ಜೊತೆಗೆ, ಎಲ್ಲ ವಾಣಿಜ್ಯ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದ ಹೊರ್ಮುಜ್ ಜಲಸಂಧಿಯನ್ನು ಸಹ ಮುಚ್ಚಿದೆ. ಆದರ ಮೂಲಕ ಹಾದುಹೋಗಲು ಯತ್ನಿಸುವ ಯಾವುದೇ ಹಡಗಿಗೆ ಬೆಂಕಿ ಹಚ್ಚಲಾಗುವುದು ಎಂದು ಇರಾನ್ ರೆವಲ್ಯೂಶನರಿ ಗಾರ್ಡ್ಸ್(ಐಆರ್ಜಿಸಿ) ಎಚ್ಚರಿಸಿದೆ.</p><p>ಭಾರತದಲ್ಲಿ ಅಲ್ಪಾವಧಿಯ ಅಡೆತಡೆಗಳನ್ನು ನಿರ್ವಹಿಸಲು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದರು. </p><p>ಇಂಧನ ಲಭ್ಯತೆ, ಕೈಗೆಟುಕುವ ದರ ಮತ್ತು ಸುಸ್ಥಿರತೆಯಲ್ಲಿ ಭಾರತ ಮುಂದುವರಿಯುತ್ತದೆ. ನಮ್ಮ ನಾಗರಿಕರ ಇಂಧನ ಅವಶ್ಯಕತೆಗಳನ್ನು ಪೂರೈಸುವತ್ತ ಗಮನಹರಿಸಿದ್ದೇವೆ ಎಂದು ಪುರಿ ಮಾಧ್ಯಮಗಳಿಗೆ ತಿಳಿಸಿದ್ದರು.</p><p>ಭಾರತವು ಸುಮಾರು 25 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು 25 ದಿನಗಳಿಗೆ ಆಗುವಷ್ಟು ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನುಗಳನ್ನು ಹೊಂದಿದೆ. ದೇಶದ ಕಚ್ಚಾ ತೈಲ ಆಮದುಗಳಲ್ಲಿ ಕೇವಲ ಶೇ 40ರಷ್ಟು ಮಾತ್ರ ಹೊರ್ಮುಜ್ ಜಲಸಂಧಿಯ ಮೂಲಕ ಆಮದಾಗುತ್ತದೆ. ಉಳಿದ ಶೇ 60ರಷ್ಟು ಇತರ ಮೂಲಗಳಿಂದ ಬರುತ್ತದೆ. ಭಾರತದ ತೈಲ ಕಂಪನಿಗಳು ಅಸ್ತಿತ್ವದಲ್ಲಿರುವ ಒಪ್ಪಂದಗಳ ಅಡಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿವೆ ಎಂದು ಎಎನ್ಐ ವರದಿ ಮಾಡಿದೆ.</p><p>ಪ್ರಾದೇಶಿಕ ಅಡೆತಡೆಗಳಿಂದ ದೇಶದಲ್ಲಿ ಇಂಧನ ಪೂರೈಕೆಗೆ ತೊಡಕಾಗದಂತೆ ತಡೆಯಲು ಭಾರತ ಕಳೆದ ಕೆಲವು ವರ್ಷಗಳಿಂದ ತನ್ನ ಕಚ್ಚಾ ತೈಲ ದಾಸ್ತಾನನ್ನು ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಸಾಕಷ್ಟು ಇಂಧನ ದಾಸ್ತಾನುಗಳನ್ನು ನಿರ್ವಹಿಸುತ್ತಿದ್ದು, ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳು ಸಂಭಾವ್ಯ ಪೂರೈಕೆ ಅಡೆತಡೆಗಳ ಸಂದರ್ಭದಲ್ಲಿ ನೆರವಿಗೆ ಬರುತ್ತವೆ ಎಂದೂ ಸಚಿವರು ಹೇಳಿದ್ದಾರೆ.</p><p>ತೈಲ ದಾಸ್ತಾನು ಮತ್ತು ಪೂರೈಕೆ ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 24×7ಗಂಟೆ ನಿಯಂತ್ರಣ ಕೊಠಡಿ ಆರಂಭಿಸಿದೆ.</p><p>ನಿರಂತರ ಇಂಧನ ಲಭ್ಯತೆ, ಗ್ರಾಹಕರ ಹಿತಾಸಕ್ತಿಗಳ ರಕ್ಷಣೆ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುವ ಹಾಗೂ ಕೆಲಸ ಮಾಡುವ ಸುಮಾರು ಒಂದು ಕೋಟಿ ಭಾರತೀಯರ ಕ್ಷೇಮ ಭಾರತ ಸರ್ಕಾರದ ಪ್ರಮುಖ ಆದ್ಯತೆಗಳು ಎಂದು ಸರ್ಕಾರಿ ಮೂಲಗಳು ಒತ್ತಿ ಹೇಳಿವೆ.</p><p>ಸರ್ಕಾರವು ಅತ್ಯಂತ ಜಾಗರೂಕವಾಗಿದ್ದು, ಯಾವುದೇ ಸಂಭಾವ್ಯ ಅಡಚಣೆಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.</p>
<p><strong>ಮಾಸ್ಕೊ</strong>: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾದರೆ ಅಥವಾ ಬೆಲೆ ಹೆಚ್ಚಳವಾದರೆ ಭಾರತಕ್ಕೆ ಇಂಧನ ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾ ಹೇಳಿದೆ.</p><p>‘ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಭಾರತಕ್ಕೆ ಇಂಧನ ಪೂರೈಕೆ ಸಿದ್ಧರಿದ್ದೇವೆ’ಎಂದು ರಷ್ಯಾದ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.</p><p>ಅಮೆರಿಕ ಮತ್ತು ಇರಾನ್ ನಡುವಿನ ಹಗೆತನ ತೀವ್ರಗೊಂಡಿದ್ದು, ವ್ಯಾಪಾರ, ಹಡಗು ಮಾರ್ಗಗಳು ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ, ಭಾರತವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತೆಯೇ ರಷ್ಯಾದಿಂದ ಹೇಳಿಕೆ ಬಂದಿದೆ.</p><p>ಇರಾನ್ ತನ್ನ ಪ್ರತೀಕಾರದ ದಾಳಿಯಲ್ಲಿ ತೈಲ ಸಂಸ್ಕರಣಾಗಾರಗಳು ಮತ್ತು ಉತ್ಪಾದನಾ ತಾಣಗಳು ಸೇರಿದಂತೆ ಗಲ್ಫ್ ದೇಶಗಳ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದರ ಜೊತೆಗೆ, ಎಲ್ಲ ವಾಣಿಜ್ಯ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದ ಹೊರ್ಮುಜ್ ಜಲಸಂಧಿಯನ್ನು ಸಹ ಮುಚ್ಚಿದೆ. ಆದರ ಮೂಲಕ ಹಾದುಹೋಗಲು ಯತ್ನಿಸುವ ಯಾವುದೇ ಹಡಗಿಗೆ ಬೆಂಕಿ ಹಚ್ಚಲಾಗುವುದು ಎಂದು ಇರಾನ್ ರೆವಲ್ಯೂಶನರಿ ಗಾರ್ಡ್ಸ್(ಐಆರ್ಜಿಸಿ) ಎಚ್ಚರಿಸಿದೆ.</p><p>ಭಾರತದಲ್ಲಿ ಅಲ್ಪಾವಧಿಯ ಅಡೆತಡೆಗಳನ್ನು ನಿರ್ವಹಿಸಲು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದರು. </p><p>ಇಂಧನ ಲಭ್ಯತೆ, ಕೈಗೆಟುಕುವ ದರ ಮತ್ತು ಸುಸ್ಥಿರತೆಯಲ್ಲಿ ಭಾರತ ಮುಂದುವರಿಯುತ್ತದೆ. ನಮ್ಮ ನಾಗರಿಕರ ಇಂಧನ ಅವಶ್ಯಕತೆಗಳನ್ನು ಪೂರೈಸುವತ್ತ ಗಮನಹರಿಸಿದ್ದೇವೆ ಎಂದು ಪುರಿ ಮಾಧ್ಯಮಗಳಿಗೆ ತಿಳಿಸಿದ್ದರು.</p><p>ಭಾರತವು ಸುಮಾರು 25 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು 25 ದಿನಗಳಿಗೆ ಆಗುವಷ್ಟು ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನುಗಳನ್ನು ಹೊಂದಿದೆ. ದೇಶದ ಕಚ್ಚಾ ತೈಲ ಆಮದುಗಳಲ್ಲಿ ಕೇವಲ ಶೇ 40ರಷ್ಟು ಮಾತ್ರ ಹೊರ್ಮುಜ್ ಜಲಸಂಧಿಯ ಮೂಲಕ ಆಮದಾಗುತ್ತದೆ. ಉಳಿದ ಶೇ 60ರಷ್ಟು ಇತರ ಮೂಲಗಳಿಂದ ಬರುತ್ತದೆ. ಭಾರತದ ತೈಲ ಕಂಪನಿಗಳು ಅಸ್ತಿತ್ವದಲ್ಲಿರುವ ಒಪ್ಪಂದಗಳ ಅಡಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿವೆ ಎಂದು ಎಎನ್ಐ ವರದಿ ಮಾಡಿದೆ.</p><p>ಪ್ರಾದೇಶಿಕ ಅಡೆತಡೆಗಳಿಂದ ದೇಶದಲ್ಲಿ ಇಂಧನ ಪೂರೈಕೆಗೆ ತೊಡಕಾಗದಂತೆ ತಡೆಯಲು ಭಾರತ ಕಳೆದ ಕೆಲವು ವರ್ಷಗಳಿಂದ ತನ್ನ ಕಚ್ಚಾ ತೈಲ ದಾಸ್ತಾನನ್ನು ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಸಾಕಷ್ಟು ಇಂಧನ ದಾಸ್ತಾನುಗಳನ್ನು ನಿರ್ವಹಿಸುತ್ತಿದ್ದು, ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳು ಸಂಭಾವ್ಯ ಪೂರೈಕೆ ಅಡೆತಡೆಗಳ ಸಂದರ್ಭದಲ್ಲಿ ನೆರವಿಗೆ ಬರುತ್ತವೆ ಎಂದೂ ಸಚಿವರು ಹೇಳಿದ್ದಾರೆ.</p><p>ತೈಲ ದಾಸ್ತಾನು ಮತ್ತು ಪೂರೈಕೆ ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 24×7ಗಂಟೆ ನಿಯಂತ್ರಣ ಕೊಠಡಿ ಆರಂಭಿಸಿದೆ.</p><p>ನಿರಂತರ ಇಂಧನ ಲಭ್ಯತೆ, ಗ್ರಾಹಕರ ಹಿತಾಸಕ್ತಿಗಳ ರಕ್ಷಣೆ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುವ ಹಾಗೂ ಕೆಲಸ ಮಾಡುವ ಸುಮಾರು ಒಂದು ಕೋಟಿ ಭಾರತೀಯರ ಕ್ಷೇಮ ಭಾರತ ಸರ್ಕಾರದ ಪ್ರಮುಖ ಆದ್ಯತೆಗಳು ಎಂದು ಸರ್ಕಾರಿ ಮೂಲಗಳು ಒತ್ತಿ ಹೇಳಿವೆ.</p><p>ಸರ್ಕಾರವು ಅತ್ಯಂತ ಜಾಗರೂಕವಾಗಿದ್ದು, ಯಾವುದೇ ಸಂಭಾವ್ಯ ಅಡಚಣೆಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.</p>