ರಾಮನಗರ: ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪ್ರತಿ ಸಭೆ ಸಮಾರಂಭವೂ ಶುಭ ಮುಹೂರ್ತ, ಗಳಿಗೆ ನೋಡಿಯೇ ನಿರ್ಧಾರವಾಗುತ್ತದೆ ಎಂಬ ಮಾತಿದೆ. ಸ್ಥಳೀಯ ಸಂಸ್ಥೆಗಳ ಜನಪ್ರನಿಧಿಗಳಿಗೂ ಇದರ ಪ್ರಭಾವ ತಟ್ಟಿದಂತೆ ಇದೆ. ಈಗ ಅವರೂ ಒಳ್ಳೆಯ ಕಾಲ, ಗಳಿಗೆ ನೋಡಿ ಮುಂದಡಿ ಇಡತೊಡಗಿದ್ದಾರೆ.
ಶುಕ್ರವಾರ (ಜುಲೈ 13) ರಾಮನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಇಂತಹದ್ದೊಂದು ಚರ್ಚೆ ನಡೆಯಿತು. ಇಲ್ಲಿನ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರ ಅವಧಿಯು ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಈ ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು.
ಆದರೆ ಆಷಾಢ ಆರಂಭದ ಅಮಾವಾಸ್ಯೆಯ ದಿನವೇ ಈ ಸಭೆ ಹಮ್ಮಿಕೊಂಡಿದ್ದಕ್ಕೆ ಜಿಲ್ಲಾ ಪಂಚಾಯಿತಿಯ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯನ್ನು ಮುಂದೂಡುವ ಸಲಹೆಯನ್ನೂ ನೀಡಿದರು. ಆದರೆ ಅದಾಗಲೇ ಎಲ್ಲರೂ ಬಂದು ಸೇರಿದ್ದ ಕಾರಣ ಸಭೆ ಮುಂದೂಡಲು ಆಗಲಿಲ್ಲ. ಕಡೆಗೆ ಸದಸ್ಯರ ಸಲಹೆಯಂತೆ ಆಷಾಢ ಮಾಸ ಮುಗಿದ ಬಳಿಕವೇ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸುವ ತೀರ್ಮಾನಕ್ಕೆ ಬರಲಾಯಿತು.