ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಗಂಭೀರ ಪರಿಸ್ಥಿತಿ ಬೆಂಗಳೂರು, ಜುಲೈ 12– ಧಾರಾಕಾರವಾಗಿ ಮಳೆ ಸುರಿಯುತ್ತಿರುವುದಾಗಿ ವರದಿಗಳು ಬಂದಿರುವ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ, ಕೊಡಗು ಮುಂತಾದ ಕೆಲವು ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ 12 ಜಿಲ್ಲೆಗಳಲ್ಲಿ ಮಳೆಯೇ ಇಲ್ಲದೆ ಬಹುತೇಕ ತಾಲ್ಲೂಕುಗಳಲ್ಲಿ ಒಣಹವೆ ಮುಂದುವರಿದು ಗಂಭೀರ ಪರಿಸ್ಥಿತಿ ಉಂಟಾಗುತ್ತಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಬೀದರ್, ಬೆಳಗಾವಿ, ವಿಜಾಪುರ ಜಿಲ್ಲೆಗಳ ಸುಮಾರು 49 ತಾಲ್ಲೂಕುಗಳಲ್ಲಿ ಹನಿ ಮಳೆಯೂ ಆಗದೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಜುಲೈ 8ಕ್ಕೆ ಅಂತ್ಯಗೊಂಡ ವಾರದ ಅವಧಿಯ ಅಧಿಕೃತ ವರದಿ ವಿವರಿಸಿದೆ.
ಅಂಗವಿಕಲ ಮಕ್ಕಳಿಗೆ ಇತರರಜತೆ ಶಿಕ್ಷಣ ಕಡ್ಡಾಯ ಬೆಂಗಳೂರು, ಜುಲೈ 12– ಈಗ ‘ಅಸ್ಪೃಶ್ಯರಂತೆ’ ಕಾಣುತ್ತಿರುವ ಅಂಗವಿಕಲ ಮಕ್ಕಳನ್ನೂ ಇತರ ಮಕ್ಕಳ ಜತೆಯಲ್ಲಿ ಶಾಲೆಗೆ ಕಡ್ಡಾಯವಾಗಿ ಸೇರಿಸಿಕೊಳ್ಳುವಂತೆ ಮಾಡುವ ನಿಯಮವನ್ನು ಸರ್ಕಾರ ಇನ್ನೊಂದು ತಿಂಗಳಲ್ಲಿ ಜಾರಿಗೆ ತರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ಇಂದು ಇಲ್ಲಿ ತಿಳಿಸಿದರು.
ಇಂಥ ನಿಯಮವೊಂದು ಈಗ ಇಲ್ಲವಾದ್ದರಿಂದ ಸರ್ಕಾರದ ಅನುದಾನ ಪಡೆಯುವ ಶಾಲಾ ಆಡಳಿತ ವರ್ಗದವರು ಈ ನತದೃಷ್ಟ ಮಕ್ಕಳನ್ನು ತರಗತಿಗೆ ಸೇರಿಸಿಕೊಳ್ಳುವುದಕ್ಕೆ ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.