ನವದೆಹಲಿ, ಜುಲೈ 19 (ಪಿಟಿಐ)– ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ 69ರಷ್ಟು ಮೀಸಲಾತಿಯನ್ನು ಮುಂದುವರಿಸುವ ಮಸೂದೆಗೆ ರಾಷ್ಟ್ರಪತಿ ಶಂಕರ ದಯಾಳ ಶರ್ಮಾ ಅವರು ಇಂದು ತಮ್ಮ ಮಂಜೂರಾತಿ ನೀಡಿದರು.
ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲು ತೀರ್ಮಾನಿಸಲಾಗಿತ್ತು. ಈ ವಿಚಾರದ ಚರ್ಚೆಗೆ ನಡೆದ ಸರ್ವ ಪಕ್ಷಗಳ ಸಭೆಯೂ ಸಹಮತ ವ್ಯಕ್ತಪಡಿಸಿತ್ತು. ಮೀಸಲಾತಿಯ ಒಟ್ಟು ಪ್ರಮಾಣ ಶೇ 50ನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರವು ಈ ಮಸೂದೆ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ.
ಐದು ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕೆ ಸೇನೆ
ನವದೆಹಲಿ, ಜುಲೈ 19 (ಪಿಟಿಐ, ಯುಎನ್ಐ)– ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ಬಿಹಾರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸೇನೆಯ ತುಕಡಿಗಳನ್ನು ರವಾನಿಸಲಾಗಿದೆ.
ದೇಶದ ವಿವಿಧೆಡೆ ರೌದ್ರಾವತಾರ ತಾಳಿದ ಮುಂಗಾರು ಮಳೆಗೆ ಇದುವರೆಗೆ 410 ಜನ ಬಲಿಯಾಗಿದ್ದು, ಲಕ್ಷಾಂತರ ಮಂದಿ ಮನೆ ಮಾರು ಕಳೆದುಕೊಂಡಿದ್ದಾರೆ. ಕೋಟ್ಯಂತರ ಬೆಲೆಯ ಆಸ್ತಿಪಾಸ್ತಿಗೆ ನಷ್ಟವಾಗಿದೆ.