ಬೆಂಗಳೂರು, ಏ. 7– ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಕೆಲವು ಉತ್ತರ ಪತ್ರಿಕೆಗಳಲ್ಲಿ ‘ಯದ್ವಾತದ್ವ’ ಅಂಕ ನೀಡಿರುವುದು ಬೆಳಕಿಗೆ ಬಂದಿದೆ.
1993ರ ಜುಲೈ– ಆಗಸ್ಟ್ನಲ್ಲಿ ನಡೆದ ಈ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸರಿಯಾಗಿ ನಡೆದಿಲ್ಲ ಎಂಬುದು ಪೂರ್ವಭಾವಿ ಪರಿಶೀಲನೆಯಿಂದ ವ್ಯಕ್ತವಾಗಿರುವ ಕಾರಣ ಫಲಿತಾಂಶ ತಡೆಹಿಡಿದು ಎಲ್ಲ ಉತ್ತರ ಪತ್ರಿಕೆಗಳ ಪುನರ್ ಮೌಲ್ಯಮಾಪನ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧಾರ ಕೈಗೊಂಡಿರುವುದು ಸಮರ್ಥನೀಯ ಎಂದುಕರ್ನಾಟಕ ಆಡಳಿತ ನ್ಯಾಯಮಂಡಲಿ ತೀರ್ಪು ನೀಡಿದೆ.
ಆಯೋಗದ ನಿರ್ಧಾರದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಆಡಳಿತ ನ್ಯಾಯಮಂಡಳಿಗೆ ಮನವಿ ಸಲ್ಲಿಸಿದ್ದರು.
ಪರಿಶಿಷ್ಟರಿಗೆ ದೌರ್ಜನ್ಯದ ವಿರುದ್ಧ ಸಂವಿಧಾನ ರಕ್ಷಣೆ
ಬೆಂಗಳೂರು, ಏ. 7– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ವಿಧಿಯಲ್ಲಿ ಸೇರಿಸುವ ವಿಷಯವನ್ನು ಪರಿಶೀಲಿಸ ಲಾಗುತ್ತಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ಸೀತಾರಾಂ ಕೇಸರಿ ಇಂದು ಇಲ್ಲಿ ಪ್ರಕಟಿಸಿದರು.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮಾಜ ಕಲ್ಯಾಣ ಸಚಿವರ ಸಮ್ಮೇಳನವನ್ನು ಉದ್ಘಾಟಿಸಿದ ಸಚಿವರು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟಿನ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಅನಗತ್ಯ ವ್ಯಾಜ್ಯಗಳಿಂದ ಸಂರಕ್ಷಿಸಲು ಸಂವಿಧಾನದ ವಿಧಿಯಲ್ಲಿ ಸೇರಿಸಲಾಗುತ್ತಿದೆ ಎಂದರು.