ನವದೆಹಲಿ, ಮೇ 5 (ಪಿಟಿಐ)– ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾನೂನೊಂದರ ಅವಶ್ಯಕತೆ ಇದೆ ಎಂದು ಸರ್ಕಾರ ಇಂದು ಹೇಳಿತು. ವಿವಾದಾತ್ಮಕ ಟಾಡಾ ಕಾಯ್ದೆಗೆ ಮೂರು ಪರ್ಯಾಯಗಳನ್ನೂ ಅದು ಸೂಚಿಸಿತು.
ಟಾಡಾ ವಿವಾದವನ್ನು ಬಗೆಹರಿಸಲು ಗೃಹ ಸಚಿವ ಎಸ್.ಬಿ.ಚವಾಣ್ ಅವರು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ, ಈ ಕಾಯ್ದೆ ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಕ್ಕೆ ಕಡಿಮೆಯಾದ ಕಾಳಜಿ: ಸಾಹಿತಿಗಳ ಕಳಕಳಿ
ಬೆಂಗಳೂರು, ಮೇ 5– ಕನ್ನಡದ ಬಗೆಗಿನ ಕಾಳಜಿ, ಕರ್ನಾಟಕದಲ್ಲಿ ಕನ್ನಡ ಇಂದು ತಲುಪಿರುವ ದುರವಸ್ಥೆ, ಕನ್ನಡದ ಬಗ್ಗೆ ಸರ್ಕಾರಕ್ಕಿರುವ ದಿವ್ಯ ನಿರ್ಲಕ್ಷ್ಯ, ಗಡಿನಾಡ ಕನ್ನಡಿಗರ ನೋವು, ಸಂಕಟಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಇಂದು ನಡೆದ ಕನ್ನಡ ಸಂಘಟನೆಗಳ ಸಮಾವೇಶದಲ್ಲಿ ತೀವ್ರ ಕಳಕಳಿ ವ್ಯಕ್ತವಾಯಿತು.
‘ಕನ್ನಡ ಕನ್ನಡ ಅನ್ನುತ್ತಲೇ ನಾವು ತಾರುಣ್ಯ ಕಳೆದು ಮುದುಕರಾದೆವು. ನಾವು ಹೋದಮೇಲೂ ಕನ್ನಡದ ಸ್ಥಿತಿ ಬದಲಾಗುವ ನಂಬಿಕೆ ಇಲ್ಲ. ನಮ್ಮ ತಾರುಣ್ಯದ ಕಾಲದಲ್ಲಿ ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಅಗತ್ಯವನ್ನು ಕುರಿತು ನಾವು ಮಾತನಾಡುತ್ತಿದ್ದೆವು. ಈಗ ಇಪ್ಪತ್ತು ವರ್ಷಗಳ ನಂತರ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಹೋರಾಟ ಮಾಡುವ ಸ್ಥಿತಿಯೊದಗಿದೆ’ ಎಂದು ಸಮಾವೇಶವನ್ನು ಉದ್ಘಾಟಿಸಿದ ಲೇಖಕ ಹಾ.ಮಾ.ನಾಯಕ್ ವ್ಯಥೆಪಟ್ಟರು.
ಪಾಟೀಲ ಪುಟ್ಟಪ್ಪ, ಗೊ.ರು.ಚನ್ನಬಸಪ್ಪ, ಡಾ. ಚಿದಾನಂದಮೂರ್ತಿ ಮೊದಲಾದವರು ಭಾಗವಹಿಸಿದ್ದರು.