ಬೆಂಗಳೂರು, ಜುಲೈ 22– ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಪೂರೈಸಲು ಕಾವೇರಿ ನೀರನ್ನು ತರುವ ನಾಲ್ಕನೇ ಹಂತದ ರೂ. 1,072 ಕೋಟಿ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಇದಕ್ಕೆ ಜಪಾನ್ ಸರ್ಕಾರ 804 ಕೋಟಿ ರೂಪಾಯಿ ಸುಲಭ ಬಡ್ಡಿ ದರದ ಸಾಲ, ನೆರವು ನೀಡಲು ಒಪ್ಪಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿವರವನ್ನು ನೀಡಿದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು, ಜಪಾನ್ (ಓವರ್ಸೀಸ್ ಎಕನಾಮಿಕ್ ಫಂಡ್ ಆಫ್ ಜಪಾನ್) ತಾನು ಕೊಡುವ ಹಣದಲ್ಲಿ ಶೇಕಡ 70ರಷ್ಟು ಹಣವನ್ನು ಸಾಲವಾಗಿ ಮತ್ತು ಉಳಿದ 30ರಷ್ಟು ಹಣವನ್ನು ನೆರವಿನ ರೂಪದಲ್ಲಿ ಕೊಡಲು ಮುಂದೆ ಬಂದಿದೆ ಎಂದರು.
ತಾಲ್ಲೂಕು ಪಂಚಾಯಿತಿಗಳಿಗೆ ಸಚಿವೆ ಎಚ್ಚರಿಕೆ
ಕಲ್ಬುರ್ಗಿ, ಜುಲೈ 22– ಕರ್ನಾಟಕದ ಯಾವುದೇ ಪ್ರದೇಶವನ್ನು ಇತರ ರಾಜ್ಯಗಳಿಗೆ ಸೇರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಾಲ್ಲೂಕು ಪಂಚಾಯಿತಿಗಳು ಅಂಗೀಕರಿಸುವ ಅಧಿಕಪ್ರಸಂಗತನ ಪ್ರದರ್ಶಿಸಿದರೆ ಕೂಡಲೇ ಇವುಗಳನ್ನು ರದ್ದುಪಡಿಸಲು ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಎಚ್ಚರಿಕೆ ನೀಡಿದರು.