ನವದೆಹಲಿ, ಸೆ. 17 (ಪಿಟಿಐ, ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಾಸ್ವಾಮಿಯನ್ನು ತಕ್ಷಣಕ್ಕೆ ಬಂಧಿಸುವ ಸಂಭವವಿಲ್ಲ ಎಂದು ಉನ್ನತ ಮೂಲಗಳು ಇಂದು ರಾತ್ರಿ ತಿಳಿಸಿವೆ.
ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತಿತರ ಅಪರಾಧಿಗಳ ಜೊತೆ ಚಂದ್ರಾಸ್ವಾಮಿ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.
ತಾವು ರಾಜಕಾರಣಿಗಳಿಂದ ಕೆಲಸ ಮಾಡಿಸಿಕೊಡುವ ಏಜೆಂಟ್ ಅಲ್ಲ. ಪಿ.ವಿ. ನರಸಿಂಹ ರಾವ್ ಅವರಂತಹ ಗಣ್ಯರು ‘ಆಧ್ಯಾತ್ಮಿಕ’ ಕಾರಣಗಳಿಗಾಗಿ ತಮ್ಮ ಬಳಿ ಬರುತ್ತಾರೆ ಎಂದು ಚಂದ್ರಾಸ್ವಾಮಿ ಹೇಳಿದ್ದಾರೆ.
ತಾವು ‘ಮಂತ್ರವಾದಿ’ ಅಲ್ಲ. ಬದಲಾಗಿ ಮಂತ್ರ, ಯಂತ್ರ ಹಾಗೂ ತಂತ್ರಗಳ ‘ಉಪಾಸಕ’ ಎಂದು ವಾರ್ತಾಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಧುನಿಕ ಯುಗದ ಈ ಜೆಟ್ ಸಂಚಾರಿ ಸ್ವಾಮಿ ಸ್ಪಷ್ಟಪಡಿಸಿದರು.
ವಾಸುದೇವನ್ಗೆ ಬೆಂಬಲ ಪ್ರಶ್ನೆ: ಐಎಎಸ್ ಅಧಿಕಾರಿ ಸಂಘದಲ್ಲಿ ಒಡಕು
ಬೆಂಗಳೂರು, ಸೆ. 17– ನ್ಯಾಯಾಲಯ ನಿಂದನೆಗಾಗಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸುವ ವಿಷಯದಲ್ಲಿ ರಾಜ್ಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಒಡಕು ಉಂಟಾಗಿದೆ.
ಸಂಘ ಕೈಗೊಂಡ ತೀರ್ಮಾನವನ್ನು ಧಿಕ್ಕರಿಸಿ 80ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ವಾಸುದೇವನ್ ಅವರಿಗೆ ಬೆಂಬಲ ಸೂಚಿಸಿ ಇಂದು ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಸಿಸಿಲ್ ನರೋನ್ಹ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳು ಧರಣಿಯಲ್ಲಿ ಭಾಗವಹಿಸಲಿಲ್ಲ.