ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಜೊತೆ ನನ್ನ ಒಡನಾಟ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬರಹ

Last Updated 17 ಸೆಪ್ಟೆಂಬರ್ 2022, 8:32 IST
ಅಕ್ಷರ ಗಾತ್ರ

ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ವೇಳೆ, ನಮ್ಮ ಸಮಾಜದ ದುರ್ಬಲ ಮತ್ತು ಬಡ ವರ್ಗಗಳ ಜನರ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆ ನೀಡಿದ ನಮ್ಮ ಸಂವಿಧಾನದ ಪಿತಾಮಹ ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಸಮಯವೂ ಆಗಿದೆ. ಸ್ವಾತಂತ್ರ್ಯದ ಅನಂತರ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರಗಳು ಕೊಡುಗೆ ನೀಡಿದ್ದರೂ ಸಹ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸಿದ್ದು ನರೇಂದ್ರ ಮೋದಿ ಅವರ ಸರ್ಕಾರ.

ಇಂದು ನಮ್ಮ ಪ್ರೀತಿಯ ಪ್ರಧಾನಿ ಅವರ ಜನ್ಮದಿನವೂ ಆಗಿದೆ, ಅವರೊಂದಿಗೆ ನಾನು ಸುದೀರ್ಘ ಮತ್ತು ಸದಾ ನೆನಪಿನಲ್ಲಿ ಉಳಿಯುವಂತಹ ಒಡನಾಟ ಹೊಂದಿದ್ದೇನೆ. ನಾನು ಅವರನ್ನು ಸಂಘಟನಾತ್ಮಕ ವ್ಯಕ್ತಿಯಾಗಿ, ಮುಖ್ಯಮಂತ್ರಿಯಾಗಿ ಮತ್ತು ಈಗ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದ್ದೇನೆ. ಮೋದಿಜಿ ಅವರ ಉತ್ಸಾಹ ಮತ್ತು ನಮ್ಮ ಸಮಾಜದ ದೀನದಲಿತ ಮತ್ತು ದುರ್ಬಲ ವರ್ಗಗಳ ಉನ್ನತಿಗಾಗಿ ಅವರ ಸ್ಮರಣೀಯ ಕಾರ್ಯ; ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಬಗ್ಗೆ ಅವರ ಕಾಳಜಿಯು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಬಾಬಾಸಾಹೇಬರ ನಿಜವಾದ ಶಿಷ್ಯರಾಗಿ ನರೇಂದ್ರ ಮೋದಿಜಿ ಅವರು ಭಾರತವನ್ನು ಸಮಾನತೆಯ ಸಮಾಜವನ್ನಾಗಿ ಮಾಡಲು ಕಠಿಣ ಶ್ರಮ ವಹಿಸುತ್ತಿದ್ದಾರೆ.

ನರೇಂದ್ರ ಮೋದಿಜಿ ಅವರ ಮೇಲೆ ಬಾಬಾಸಾಹೇಬ್ ಅಂಬೇಡ್ಕರ ಅವರ ಪ್ರಭಾವವು ಅವರ ಎಲ್ಲಾ ಕೆಲಸ ಕಾರ್ಯಗಳು, ಅವರ ಕಾರ್ಯಕ್ರಮ ಮತ್ತು ನೀತಿಗಳಲ್ಲಿ ಸ್ಪಷ್ಟವಾಗಿ ಗೋಚರ ವಾಗುತ್ತದೆ. ಸಂಘಟನೆಯ ವ್ಯಕ್ತಿಯಾಗಿ, ಮುಖ್ಯಮಂತ್ರಿಯಾಗಿ ಮತ್ತು ಇದೀಗ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಜಿ ಯಾವಾಗಲೂ ಬಾಬಾಸಾಹೇಬರು ತೋರಿದ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. “ಪಂಚತೀರ್ಥ” ರೂಪದಲ್ಲಿ ಮೋದಿ ಜಿ ದೇಶಕ್ಕೆ ಮತ್ತು ಜಗತ್ತಿಗೆ ಜೀವನ ಪೋಷಣೆಗೆ ಉಡುಗೊರೆ ನೀಡಿದ್ದಾರೆ. ಮೋದಿ ಜಿ ಅವರು ಬಾಬಾಸಾಹೇಬರ ಜನ್ಮದಿನವನ್ನು “ಸಂಸ್ಮರಣಾ ದಿನ’’ವನ್ನಾಗಿ ಆಚರಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ನವೆಂಬರ್ 26ರಂದು ಭಾರತದ “ಸಂವಿಧಾನ ದಿನ”ವನ್ನಾಗಿ ನೀಡಿದ್ದು ಅವರೇ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಯತ್ನದ ಫಲವಾಗಿ ವಿಶ್ವಸಂಸ್ಥೆ ಬಾಬಾಸಾಹೇಬರ 125ನೇ ಜಯಂತಿಯನ್ನು ಆಚರಿಸಿತು.

ನರೇಂದ್ರ ಮೋದಿ ಸರ್ಕಾರದ ಎರಡು ಪ್ರಮುಖ ನಿರ್ಧಾರಗಳು, ಬಾಬಾಸಾಹೇಬ್ ಅಂಬೇಡ್ಕರ್ ಜಿ ಅವರ ಈಡೇರದ ಎರಡು ಉದ್ದೇಶಗಳು ಸಾಕಾರವಾದವು, ಅವೆಂದರೆ ಸಂವಿಧಾನದ ಕಲಂ 370 ರದ್ದತಿ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣ.

ಅಂಬೇಡ್ಕರ್ ಜಿ ಅವರ ಪ್ರಬಲ ವಿರೋಧದ ಹೊರತಾಗಿಯೂ, 370ನೇ ಕಲಂ ನಮ್ಮ ಸಂವಿಧಾನದ ಭಾಗವಾಯಿತು, ಇದು ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರ ಏಕೀಕರಣ ಆಗುವುದನ್ನು ತಪ್ಪಿಸಿತು. ಮೋದಿ ಜಿ ಯವರ ದೃಢ ಬದ್ಧತೆ ಮತ್ತು ಇಚ್ಛಾಶಕ್ತಿಯ ಕಾರಣದಿಂದ 370ನೇ ಕಲಂ ಅನ್ನು ರದ್ದುಗೊಳಿಸಲಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರ ಭಾರತದೊಂದಿಗೆ ಏಕೀಕರಣವಾಯಿತು.

ಅಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ, ಸ್ವಾವಲಂಬಿ ಭಾರತ ನಿರ್ಮಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಬೇಡ್ಕರ್ ಜಿ “ಆತ್ಮನಿರ್ಭರ ಭಾರತ’’ ಮಾತ್ರ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬಲ್ಲದು ಎಂದು ತಿಳಿದಿದ್ದರು. ಹಿಂದಿನ ಸರ್ಕಾರಗಳು ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ಯುವ ಇಚ್ಛಾಶಕ್ತಿ ಮತ್ತು ಬದ್ಧತೆಯ ಕೊರತೆ ಹೊಂದಿದ್ದವು. ನರೇಂದ್ರ ಮೋದಿ ಜಿ ಅವರು ಅದನ್ನು ಸರಿದಾರಿಗೆ ತಂದರು ಮತ್ತು ಭಾರತದ ಪರಾಕ್ರಮವನ್ನು ಜಗತ್ತಿಗೆ ತೋರಿಸಿದರು. ಹಾಗಾಗಿ ಇಂದು ಇಡೀ ವಿಶ್ವ ನಮ್ಮ ಶಕ್ತಿಯನ್ನು ಗುರುತಿಸುವಂತಾಗಿದೆ.

ರಾಷ್ಟ್ರಪತಿಯಾಗಿ ನಾನು ಸಾಮಾಜಿಕ ಸಮಸ್ಯೆಗಳು ಮತ್ತು ಆಡಳಿತದ ಕುರಿತು ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಸಂವಾದ ನಡೆಸಿದಾಗಲೆಲ್ಲಾ, ನಮ್ಮ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವು ಅವರನ್ನು ಹೆಚ್ಚು ಚಿಂತೆಗೀಡುಮಾಡುತ್ತಿದ್ದುದು ಅವರಲ್ಲಿ ಕಂಡುಬರುತ್ತಿತ್ತು. ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಬಡವರು ಎಂದು ಅವರು ನನಗೆ ಹೇಳುತ್ತಿದ್ದರು. ಕಳೆದ ಎಂಟು ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಸಮರ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಸರ್ಕಾರದ ಎಲ್ಲಾ ಯೋಜನೆಗಳ ಫಲವನ್ನು ಕಡು ಬಡವರಿಗೆ ತಲುಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳು ಇಂದು ತಮ್ಮ ಖಾತೆಗಳಿಗೆ ನೇರವಾಗಿ ಹಣ ಪಡೆಯುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಎಲ್ಲಾ ಯೋಜನೆಗಳು ಬಡವರ ಬಗೆಗಿನ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ.

ಮೋದಿಜಿ ಅವರ ಅತ್ಯಂತ ಕಾಳಜಿಯ ಮತ್ತೊಂದು ವಲಯವೆಂದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶವಾಹಿ ರಾಜಕಾರಣವನ್ನು ನಿಯಂತ್ರಿಸುವುದು. ವಂಶವಾಹಿ ರಾಜಕೀಯವು ನಿಜವಾದ ಮತ್ತು ಶ್ರಮವಹಿಸಿ ದುಡಿಯುವ ರಾಜಕೀಯ ಕಾರ್ಯಕರ್ತರ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳುತ್ತಿದೆ ಎಂಬುದರ ಕುರಿತು ಅವರು ಸದಾ ಧ್ವನಿ ಎತ್ತುತ್ತಿದ್ದಾರೆ. ಮೊದಲು ಸಂಘಟನೆಯ ವ್ಯಕ್ತಿಯಾಗಿ, ನಂತರ ಮುಖ್ಯಮಂತ್ರಿಯಾಗಿ ಮತ್ತು ಇದೀಗ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಸದಾ ನಾಯಕರು ಮತ್ತು ಕಾರ್ಯಕರ್ತರಿಗೆ ಅವರ ಅರ್ಹತೆಯ ಆಧಾರದ ಮೇಲೆ ಪದೋನ್ನತಿ ನೀಡುತ್ತಿದ್ದಾರೆ. ವಂಶವಾಹಿ ರಾಜಕಾರಣದ ವಿರುದ್ಧ ಮೋದಿ ಜಿ ನಡೆಸಿರುವ ಸಮರವು ಈಗಾಗಲೇ ತನ್ನ ಪರಿಣಾಮ ಗೋಚರಿಸಲು ಆರಂಭಿಸಿದೆ. ಡಿಎನ್‌ಎ ಆಧರಿತವಲ್ಲದ ಅರ್ಹತೆ ಆಧಾರಿತ ರಾಜಕೀಯವು ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಸಕ್ರಿಯ ಮತ್ತು ಸುದೃಢಗೊಳಿಸುತ್ತದೆ.

ಪದ್ಮ ಪ್ರಶಸ್ತಿಗಳು ಮೋದಿ ಆಡಳಿತ ಶೈಲಿ ಸೂಚಿಸುವ ಒಂದು ವಲಯವಾಗಿದೆ. ಪದ್ಮ ಪ್ರಶಸ್ತಿಗಳು “ಸಾಮಾನ್ಯ ಜನ"ರೊಂದಿಗೆ (ಆಮ್ ಆದ್ಮಿ)ಸಂಪರ್ಕ ಕಳೆದುಕೊಂಡು ಕೇವಲ ಶ್ರೀಮಂತ ವರ್ಗಕ್ಕೆ “ಬಾಹ್ಯ ಪರಿಗಣನೆ’’ ಆಗುತ್ತಿತ್ತು. ಆದರೆ ಈಗ ಆ ಪ್ರಶಸ್ತಿಗಳನ್ನು ನಿರ್ದಿಷ್ಟವಾಗಿ ಸಮಾಜದ ತಳವರ್ಗದಲ್ಲಿರುವ ನಿಜವಾದ ಸಾಧಕರಿಗೆ ಸಲ್ಲಿಕೆಯಾಗುತ್ತಿವೆ.

ನಾನು ಇಲ್ಲಿ ನರೇಂದ್ರ ಮೋದಿ ಸರ್ಕಾರದ ಎರಡು ಪ್ರಮುಖ ಉಪಕ್ರಮಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವು ಅತಿ ಹಿಂದುಳಿದ ಪ್ರದೇಶಗಳಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆದ ಮತ್ತು ಸಮಾಜದ ಕೆಳಸ್ಥರದಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರಿರುವ ಯೋಜನೆಗಳು. ಅವುಗಳೆಂದರೆ – ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಮತ್ತು ಆದರ್ಶ ಗ್ರಾಮ ಯೋಜನೆ. ಇದು ಮೋದಿ ಜಿ ಅವರ ಚೌಕಟ್ಟಿನಿಂದ ಹೊರಗೆ ಚಿಂತಿಸುವ ವಿಶಿಷ್ಟ ಗುಣ, ಅವರ ದೋಷರಹಿತ ಯೋಜನೆ ಮತ್ತು ಅಡೆತಡೆಯಿಲ್ಲದ ಜಾರಿಯು ಬಡವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿವೆ.

ಇದಕ್ಕೆ ಉತ್ತಮ ಉದಾಹರಣೆಗಳಾಗಿರುವ ಹಲವು ಸಮಾಜ ಕಲ್ಯಾಣ ಯೋಜನೆಗಳಿವೆ, ಅದಕ್ಕೆ ತಾಜಾ ಉದಾಹರಣೆಯೆಂದರೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಇದು ವಿಶ್ವದ ಅತಿದೊಡ್ಡ ಉಚಿತ ಪಡಿತರ ಯೋಜನೆಯಾಗಿದ್ದು, ಇದು ಸುಮಾರು 80 ಕೋಟಿ ಭಾರತೀಯರಿಗೆ ಕೊರೋನಾ ಸಾಂಕ್ರಾಮಿಕದ ವಿರುದ್ಧ ಧೈರ್ಯದಿಂದ ಹೋರಾಡಲು ನೆರವು ನೀಡಿತು.

ಮಾರಣಾಂತಿಕ ವೈರಾಣು ವಿರುದ್ಧದ ಭಾರತದ ಹೋರಾಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಗೆ ಮುನ್ನಡೆಸಿದರು ಎಂಬುದನ್ನು ನಾನು ಬಹಳ ಸನಿಹದಿಂದ ನೋಡಿದ್ದೇನೆ. ಅವರು ನಮ್ಮ ವಿಜ್ಞಾನಿಗಳು ಮತ್ತು ವೈದ್ಯರ ಕೈಹಿಡಿದು ಮತ್ತು ಪ್ರೋತ್ಸಾಹ ನೀಡಿದ್ದರಿಂದ ಒಂದಲ್ಲ, ಎರಡು “ಭಾರತದಲ್ಲಿ ತಯಾರಿಸಿದ” ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು. ಅದು ನಮಗೆ ರಕ್ಷಾ ಕವಚವನ್ನು ನೀಡಿತು ಮಾತ್ರವಲ್ಲದೆ ಇತರ ಹಲವು ರಾಷ್ಟ್ರಗಳ ಲಸಿಕೆ ಅಗತ್ಯವನ್ನು ಪೂರೈಸಿತು. ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ 100 ಕೋಟಿಗೂ ಅಧಿಕ ಭಾರತೀಯರಿಗೆ ಲಸಿಕೆ ಹಾಕುವ ಮಹತ್ವದ ಕಾರ್ಯವನ್ನು ಪ್ರಧಾನಿ ಅವರು ಕೈಗೊಂಡರು. ಆ ಮೂಲಕ ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್ ಅಭಿವೃದ್ಧಿ ಹೊಂದಿದ ದೇಶಗಳನ್ನು ನಿತ್ರಾಣಗೊಳಿಸಿದಾಗ, ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿದರು ಮತ್ತು ವಿಸ್ತರಣೆ ಮಾಡಿದರು. ತಮ್ಮ ಸಮಯೋಚಿತ ನೀತಿ ಉಪಕ್ರಮಗಳ ಮೂಲಕ, ಮೋದಿ ಜಿ ನಮ್ಮ ಆರ್ಥಿಕ ಬೆಳವಣಿಗೆ ಕುಂಠಿತವಾಗದಂತೆ ನೋಡಿಕೊಂಡರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಳೆದ 8 ವರ್ಷ ಗಮನಾರ್ಹವಾಗಿವೆ. ಮೋದಿ ಜಿ ಹಲವು ನಾಯಕರಿಂದ ಸ್ಫೂರ್ತಿ ಪಡೆದಿದ್ದಾರೆ, ಆದರೆ ಅವರ ಆಡಳಿತ ಶೈಲಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಛಾಪು ಸರ್ವವ್ಯಾಪಿಯಾಗಿದೆ. ಭಾರತೀಯತೆಯೇ ನಮ್ಮ ನಿಜವಾದ ಅಸ್ಮಿತೆ ಎಂದು ಹೇಳುತ್ತಿದ್ದ ಭಾರತ ರತ್ನ ಅಂಬೇಡ್ಕರ್ ಜಿ ಅವರ ನಿಜವಾದ ಅನುಯಾಯಿಯಾಗಿ ನಾನು ಮೋದಿ ಜಿಯನ್ನು ನೋಡುತ್ತಿದ್ದೇನೆ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಜಾತಿ, ಧರ್ಮ ಮತ್ತು ಮತವನ್ನು ಮೀರಿ ಬೆಳೆಯಬೇಕು. ಅಂಬೇಡ್ಕರ್ ಜಿ ಅವರ ಹೆಜ್ಜೆಗಳನ್ನು ಅನುಕರಿಸಿ ನಮ್ಮ ಪ್ರಧಾನಮಂತ್ರಿ “ರಾಷ್ಟ್ರ ಮೊದಲು’’ ಎನ್ನುವುದನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ, ಉತ್ತಮ ಆಡಳಿತ, ಸಾಮಾಜಿಕ ಒಗ್ಗಟ್ಟು ಮತ್ತು ಶಿಸ್ತು ಅವರ ಸರ್ಕಾರದ ಗುಣ ಲಕ್ಷಣಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT