ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web exclusive: ಹತ್ತಿಕ್ಕಿದಷ್ಟು ಬಲಗೊಳ್ಳುವ ಪ್ರತಿರೋಧ

ರೈತರ ಹೋರಾಟವನ್ನು ದಮನಿಸುವ ಬದಲು, ಬೇಡಿಕೆಯನ್ನು ಪರಿಶೀಲಿಸಬೇಕು
Last Updated 7 ಫೆಬ್ರುವರಿ 2021, 5:11 IST
ಅಕ್ಷರ ಗಾತ್ರ

"Injustice anywhere is a threat to justice everywhere" – ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟದ ದನಿಯಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ 1963 ಏಪ್ರಿಲ್ 16ರಂದು ಬರ್ಮಿಂಗ್‌ಹ್ಯಾಮ್ ಜೈಲಿನಿಂದ ಬರೆದಿದ್ದ ಪತ್ರದಲ್ಲಿದ್ದ ಸಾಲು ಇದು.

ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯುವ ಗಮನಾರ್ಹ ಬೆಳವಣಿಗೆ ನಮ್ಮನ್ನು ತಲುಪಲು ಹೆಚ್ಚು ಸಮಯ ಬೇಕಿಲ್ಲ. ಕೈಲಿರುವ ಮೊಬೈಲ್‌ ಎಂಬ ಮಿನಿ ಲೋಕದಲ್ಲೇ ಎಲ್ಲಾ ವಿಷಯಗಳ ದರ್ಶನವಾಗುತ್ತದೆ. ಇದರಲ್ಲಿ ಸತ್ಯದಷ್ಟೇ ಸುಳ್ಳೂ ಇದೆ. ಅದನ್ನು ವಿವೇಚಿಸಿ, ವಿಶ್ಲೇಷಿಸಿ ಬೇಕಾದ್ದನ್ನು ಹೆಕ್ಕಿಕೊಳ್ಳುವ ಜಾಣ್ಮೆ ಇರಬೇಕಷ್ಟೇ. ಇಲ್ಲದಿದ್ದರೆ, ಅನುಕೂಲಕ್ಕಿಂತ ಅನಾಹುತವೇ ಜಾಸ್ತಿ.

ಸ್ವಾತಂತ್ರ್ಯ ನಂತರದ ಅತಿ ದೊಡ್ಡ ರೈತ ಚಳವಳಿಗೆ ಭಾರತ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ 2020ರ ನವೆಂಬರ್ 26ರಲ್ಲಿ ಆರಂಭಗೊಂಡ ಪ್ರತಿಭಟನೆ, ಚಳವಳಿಯ ರೂಪ ಪಡೆದು ಇಂದು 73ನೇ ದಿನಕ್ಕೆ ಕಾಲಿಟ್ಟಿದೆ. ಭಿನ್ನಾಭಿಪ್ರಾಯ ಮತ್ತು ಪ್ರತಿರೋಧ ಪ್ರಜಾಪ್ರಭುತ್ವದ ಪ್ರಮುಖ ಭಾಗ. ಪ್ರಭುತ್ವ ಅದನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಅತಿ ಮುಖ್ಯ. ಚಳವಳಿನಿರತ ರೈತರ ದನಿಯನ್ನು ಭಾರತ ಸರ್ಕಾರ ಆಲಿಸುವುದಕ್ಕಿಂತ ಹೆಚ್ಚಾಗಿ, ತನ್ನೆಲ್ಲಾ ಶಕ್ತಿಗಳನ್ನು ಬಳಸಿಕೊಂಡು ಹತ್ತಿಕ್ಕಲು ಯತ್ನಿಸಿದ್ದೇ ಹೆಚ್ಚು.

ಸರ್ಕಾರದ ಪ್ರತಿ ದಮನಕಾರಿ ಪ್ರಯತ್ನಗಳು ಹೋರಾಟದ ಬಾಹುಗಳನ್ನು ದೇಶದ ಮೂಲೆ ಮೂಲೆಗೂ ಚಾಚುವಂತೆ ಮಾಡಿವೆ. ಹೋರಾಟದ ಸಾಗರಕ್ಕೆ ನೂರಾರು ನದಿಗಳು ಸೇರಿಕೊಳ್ಳುತ್ತಲೇ ಇವೆ. ಅನ್ನ ನೀಡುವವನ ಬದುಕಿನ ಅಸ್ತಿತ್ವದ ಪ್ರಶ್ನೆಯಾಗಿ ಬದಲಾಗಿರುವ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಸ್ಥಳೀಯ ಮಾಧ್ಯಮಗಳಿಂದಿಡಿದು ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಪ್ರಮುಖ ಸುದ್ದಿಯಾಗುತ್ತಿದೆ.ಇಷ್ಟಾದರೂ ಪ್ರಭುತ್ವ ತನ್ನ ಮೊಂಡುತನ ನಿಲ್ಲಿಸಿಲ್ಲ. ಪ್ರಜೆಗಳ ಪ್ರತಿರೋಧವನ್ನು ಅದುಮಿದಷ್ಟೂ ಬಲಗೊಳ್ಳುತ್ತದೆ ಎಂಬುದನ್ನು ಪ್ರಭುತ್ವ ಮರೆತಿರುವಂತಿದೆ. ದಮನಕಾರಿ ಕ್ರಮಗಳಿಂದಾಗಿ, ಜಗತ್ತಿನೆದುರು ಬೆತ್ತಲಾಗುತ್ತಲೇ ಇದೆ.

ಇಷ್ಟಕ್ಕೂ ರೈತ ಚಳವಳಿಗೆ ಜಾಗತಿಕ ಮಟ್ಟದಲ್ಲಿ ಯಾಕೆ ದಿನೇ ದಿನೇ ಬೆಂಬಲ ವ್ಯಕ್ತವಾಗುತ್ತಿದೆ? ವಿಶ್ವದ 167 ದೇಶಗಳ ಪೈಕಿ, ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಸರ್ಕಾರ, ಅದರ ಸಾಧನೆ, ಆಳುವ ಪಕ್ಷ, ನಾಯಕರು, ಕಾಯ್ದೆ– ಕಾನೂನುಗಳಿಗೆ ಜನ ತೋರುವ ಪರ– ವಿರೋಧವೂ ಅಂತರರಾಷ್ಟ್ರೀಯ ಮಟ್ಟದ ವಿದ್ಯಮಾನ. ಪಕ್ಕದ ಮ್ಯಾನ್ಮಾರ್‌ನಲ್ಲಿ ನಾಲ್ಕೈದು ದಿನಗಳ ಹಿಂದೆ ಕ್ಷಿಪ್ರ ಕ್ರಾಂತಿ ನಡೆದಿದೆ. ಭಾರತ ಸೇರಿದಂತೆ ಅದರ ನೆರೆಯ ರಾಷ್ಟ್ರಗಳ ಮೇಲೂ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ, ಅಕ್ಕಪಕ್ಕದ ದೇಶಗಳ ಬೆಳವಣಿಗೆಗಳತ್ತ ಯಾವುದೇ ಒಂದು ರಾಷ್ಟ್ರ ತನ್ನ ದೃಷ್ಟಿ ನೆಟ್ಟಿರುತ್ತದೆ.

ಪ್ರಜಾಪ್ರಭುತ್ವದ ದೊಡ್ಡಣ್ಣನಾದ ಭಾರತದಲ್ಲಿ ನಡೆಯುತ್ತಿರುವ ರೈತ‌ ಚಳವಳಿಯೂ, ಜನಾಧಿಕಾರದ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ದೇಶಗಳ ಗಮನ ಸೆಳೆದಿದೆ. ಪ್ರಜಾಪ್ರಭುತ್ವದ ಜೊತೆಗೆ, ಮಾನವ ಹಕ್ಕುಗಳ ಪರ ಇರುವ ವಿಶ್ವವ್ಯಾಪಿ ಅಭಿಮಾನಿಗಳನ್ನು ಹೊಂದಿರುವ ಕಲಾವಿದರು, ಕ್ರೀಡಾಪಟುಗಳು, ಪರಿಸರ–ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವು ರೀತಿಯ ಸೆಲಿಬ್ರಿಟಿಗಳ ಗಮನವನ್ನು ರೈತ ಚಳವಳಿ ಸೆಳೆದಿರುವುದರಲ್ಲಿ ವಿಶೇಷವೇನಿಲ್ಲ.

ಇದೇ ಹಿನ್ನೆಲೆಯಲ್ಲಿ ರೈತ ಚಳವಳಿ ಕುರಿತು ಖ್ಯಾತ ಗಾಯಕಿ ರಾಬಿನ್ ರಿಯಾನ ಫೆಂಟಿ, ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥರ್ನ್‌ಬರ್ಗ್, ನಟಿ ಮಿಯಾ ಖಲೀಫಾ ಮಾನವ ಹಕ್ಕುಗಳ ಕಾಳಜಿಯ ನೆಲೆಯಲ್ಲಿ ರೈತ ಚಳವಳಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರಷ್ಟೇ. ಕಾಯ್ದೆಗಳ ವಿರುದ್ಧದ ಅಹಿಂಸಾತ್ಮಕ ಚಳವಳಿ ಹತ್ತಿಕ್ಕಲು ಸರ್ಕಾರ ಹಿಡಿದ ಅಡ್ಡದಾರಿಗಳೇ ಇದಕ್ಕೆ ಕಾರಣ.

ಇಷ್ಟಕ್ಕೂ, ‘ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂಬ ಟ್ವೀಟ್‌ನಲ್ಲಿ ಸರ್ಕಾರದ ಬುಡ ಅಲ್ಲಾಡುವಂತಹದ್ದು ಏನೂ ಇಲ್ಲ. ಜಗತ್ತಿನ ಗಮನ ಸೆಳೆಯಬಲ್ಲವರು ಬೆಂಬಲ ನೀಡುವ ಮಟ್ಟಿಗೆ, ರೈತ ಚಳವಳಿಯನ್ನು ನಿರ್ವಹಿಸುವಲ್ಲಿ ನಾವು ವಿಫಲರಾಗಿದ್ದೇವೆಯೆ ಎಂಬ ಆತ್ಮಾವಲೋಕನಕ್ಕೆ ಸರ್ಕಾರ ಮುಂದಾಗಬೇಕಿತ್ತು. ರೈತರ ಜತೆಗಿನ ಮಾತುಕತೆಯನ್ನು ಫಲಪ್ರದಗೊಳಿಸುವತ್ತ ಚಿತ್ತ ಹರಿಸಬೇಕಿತ್ತು. ಆದರೆ, ಟ್ವೀಟ್ ಬೆಂಬಲ ದೇಶದ ಸಾರ್ವಭೌಮತ್ವದ ವಿರುದ್ಧದ ಪಿತೂರಿ, ಅಪಪ್ರಚಾರ ಎಂದು ಭಾವಿಸಿ ತಿರುಗೇಟು ನೀಡಲು ಮುಂದಾಯಿತು. ಇದರಿಂದ ಸರ್ಕಾರವಷ್ಟೇ ಅಲ್ಲದೆ, ಈ ಆಕ್ರಮಣಶೀಲ ನಡೆಯ ಭಾಗವಾದ ದೇಶದ ಸೆಲೆಬ್ರಿಟಿಗಳ ಕಾಳಜಿಯೂ ಬಟಾಬಯಲಾಯಿತು. ಆದರೂ, ಚಳವಳಿ ಬೆಂಬಲಿಸುವವರ ಸಂಖ್ಯೆ ಏರುತ್ತಲೇ ಇದೆ.

ಜಾತಿ–ಧರ್ಮಗಳ ಗಡಿ ಮೀರಿ, ಮೈ ಮರಗಟ್ಟುವ ಚಳಿ ಲೆಕ್ಕಿಸದೆ ರೈತರು ಎರಡು ತಿಂಗಳಿಂದ ರಸ್ತೆಯಲ್ಲೇ ಬೀಡು ಬಿಟ್ಟು ಚಳವಳಿ ನಡೆಸುತ್ತಿದ್ದಾರೆ. ಕಾಯ್ದೆಗಳನ್ನು ಹಿಂಪಡೆಯಿರಿ ಎಂದು ಸರ್ಕಾರವನ್ನು ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡವರೂ ಸೇರಿದಂತೆ, ಇದುವರೆಗೆ 120 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅನ್ನದಾತರ ದನಿ ಆಲಿಸಬೇಕಾದ ಪ್ರಭುತ್ವ, ಆ ದನಿಯನ್ನು ಹೇಗೆ ಅಡಗಿಸಬೇಕು ಎಂಬ ಆಲೋಚನೆಯಲ್ಲಿ ಮುಳುಗಿದೆ. ಸರ್ಕಾರದ ಮುಖ್ಯಸ್ಥರು ರೈತರ ಜತೆ ಖುದ್ದು ಮಾತುಕತೆ ನಡೆಸಿದರೆ, ಕೆಲವೇ ಗಂಟೆಗಳಲ್ಲಿ ಬಗೆಹರಿಯುವ ಸಮಸ್ಯೆ ಇದು. ಪ್ರತಿರೋಧವನ್ನುಸರ್ಕಾರ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೋರಾಟದ ಕಾವು ದಿನೇ ದಿನೇ ಹೆಚ್ಚುತ್ತಿದೆ. ಮುಂದೆ ಯಾವ ರೀತಿಯ ತಾರ್ಕಿಕ ಅಂತ್ಯ ಕಾಣುತ್ತದೆಯೊ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT