ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್, ಚೀನಾ ಆಕ್ರಮಣದ ವಿರುದ್ಧ ಏಕೀಕೃತ ಸೇನಾ ವ್ಯವಸ್ಥೆ ಭಾರತದ ನೆರವಿಗೆ ಬರುವುದೇ?

Last Updated 22 ಮಾರ್ಚ್ 2022, 10:01 IST
ಅಕ್ಷರ ಗಾತ್ರ

ರಷ್ಯಾ ಮತ್ತು ಉಕ್ರೇನ್ ನಡುವೆ 26 ದಿನಗಳಿಂದ ನಡೆಯುತ್ತಿರುವ ಯುದ್ಧವು ಭಾರತಕ್ಕೂ ಆತ್ಮಾವಲೋಕನದ ಕಾಲವಾಗಿದೆ. ತನ್ನ ವೈರಿಗಳನ್ನು ಎದುರಿಸಲು ದೇಶವು ಸಿದ್ಧವಾಗಿದೆಯೇ ಎಂದು ಆಶ್ಚರ್ಯ ಹಾಗೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ. ಚೀನಾ ಮತ್ತು ಪಾಕಿಸ್ತಾನದಂತಹ ನೆರೆಹೊರೆಯ ಶತ್ರುಗಳು ಭಾರತವನ್ನು ಸದಾ ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿವೆ.

ಇತ್ತೀಚಿನ ವರ್ಷಗಳಲ್ಲಿ, ರಕ್ಷಣಾ ಪಡೆಗಳ ಅಭೇದ್ಯ ಕೋಟೆಗೆ ಭಾರತ ಸಾಕ್ಷಿಯಾಗಿದೆ. ಮೂರು ಸೇವೆಗಳ ಏಕೀಕರಣವು ಅಂತಹ ಒಂದು ಉಪಕ್ರಮವಾಗಿದೆ: ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ (ITC) ಅನ್ನು ಸ್ಥಾಪಿಸುತ್ತಿದೆ. ಚೀನಾ, ರಷ್ಯಾ, ಅಮೆರಿಕ, ಯುಕೆ ಮತ್ತು ಫ್ರಾನ್ಸ್‌ನಂತಹ ಪ್ರಮುಖ ದೇಶಗಳು ಥಿಯೇಟರ್ ಕಮಾಂಡ್ ಪರಿಕಲ್ಪನೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿವೆ. ಥಿಯೇಟರ್ ಕಮಾಂಡ್‌ಗಳು ಅಸ್ತಿತ್ವಕ್ಕೆ ಬಂದರೆ, ಭಾರತವು ಕನಿಷ್ಠ 15 ಲಕ್ಷ ಸೈನಿಕ ಬಲದ ಸಶಸ್ತ್ರ ಪಡೆಗಳನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

2021ರಲ್ಲಿ, ಭಾರತ-ಪಾಕಿಸ್ತಾನ ಯುದ್ಧದ 50ನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಮಾರಂಭದಲ್ಲಿ, ಭಾರತವು ಎಲ್ಲ ಮೂರು ಸೇನೆಗಳ ಏಕೀಕರಣ ಮತ್ತು ಸಮನ್ವಯವನ್ನು ತರಲು ಥಿಯೇಟರ್ ಕಮಾಂಡ್‌ನ ಬಾಹ್ಯರೇಖೆಗಳನ್ನು ರೂಪಿಸಿದ್ದು, ಯೋಜನೆಯು ಅಂತಿಮ ಹಂತದಲ್ಲಿದೆ ಎಂದು ಘೋಷಿಸಲಾಯಿತು. ಆ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ದಿವಂಗತ ಬಿಪಿನ್ ರಾವತ್ ಅವರು ಥಿಯೇಟರ್ ಪರವಾಗಿ ಬಲವಾದ ಪ್ರತಿಪಾದನೆಯನ್ನು ಮಾಡಿದ್ದರು. ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಾರತವು ಮುಂದುವರಿದ ದೇಶಗಳ ಥಿಯೇಟರ್ ಕಮಾಂಡ್ ಮಾದರಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದೆ ಎಂದು ಅವರು ಹೇಳಿದ್ದರು. ಸಾಗರ ಥಿಯೇಟರ್ ಕಮಾಂಡ್, ಜಂಟಿ ವಾಯು ರಕ್ಷಣಾ ರಚನೆ ಮತ್ತು ಭೂ-ಕೇಂದ್ರಿತ ಥಿಯೇಟರ್ ಕಮಾಂಡ್ ಅನ್ನು ಹೊಂದುವ ಯೋಜನೆ ಇದೆ. ಹೊಸ ವ್ಯವಸ್ಥೆಯು ಸೇನಾ ಮುಖ್ಯಸ್ಥರ ಅಧಿಕಾರವನ್ನು ಮೊಟಕುಗೊಳಿಸದೆ ಹೆಚ್ಚಿನ ಸಹಯೋಗವನ್ನು ತರಲು ಮತ್ತು ಪುನರಾವರ್ತನೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದ್ದರು. ಆದರೆ, ಈ ಕನಸನ್ನು ಸಾಕಾರಗೊಳಿಸುವ ಮೊದಲೇ ದುರದೃಷ್ಟವಶಾತ್ ರಾವತ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮಡಿದರು. ಆದರೂ, ಸುಧಾರಣೆಗಳು ಶಾಶ್ವತವಾಗಿರಬೇಕು ಎನ್ನುವ ದೃಷ್ಟಿಯಿಂದ ಅವರ ಯೋಜನೆಯು ಜೀವಂತವಾಗಿದೆ, ಅದಕ್ಕೆ ವೇಗವನ್ನೂ ಕೊಡಲಾಗಿದೆ. ಸಮಗ್ರ ವ್ಯವಸ್ಥೆ ರಚನೆಗೆ ಸರ್ಕಾರ ಇನ್ನೂ ಗಡುವು ಪ್ರಕಟಿಸಿಲ್ಲ. ಏಕೀಕರಣದ ಯೋಜನೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸರ್ಕಾರವೇ ರಾವತ್ ಅವರನ್ನು ಪ್ರಚೋದಿಸಿತ್ತು ಎಂದು ಹೇಳಲಾಗಿದೆ.

1999ರ ಕಾರ್ಗಿಲ್ ಯುದ್ಧದ ಬಳಿಕ ಏಕೀಕೃತ ವಿಧಾನದ ಅಗತ್ಯವು ಚಾಲ್ತಿಗೆ ಬಂತು. ತಜ್ಞರ ಎರಡು ಸಮಿತಿಗಳು ಸಿಡಿಎಸ್ (CDS) ಹುದ್ದೆ ಮತ್ತು ಥಿಯೇಟರ್ ಕಮಾಂಡ್‌ಗಳನ್ನು ಸ್ಥಾಪಿಸುವುದರ ಜತೆಗೆ, ರಕ್ಷಣಾ ನಿರ್ವಹಣೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ಶಿಫಾರಸು ಮಾಡಿದ್ದವು. ಭೂಸೇನೆ ಮತ್ತು ನೌಕಾಪಡೆ ಥಿಯೇಟರ್ ಕಮಾಂಡ್ ಅನ್ನು ಬೆಂಬಲಿಸುತ್ತಿರುವಾಗ, ವಾಯುಪಡೆ (IAF) ಹಲವು ಥಿಯೇಟರ್‌ಗಳ ಬದಲಿಗೆ ಒಂದೇ ಥಿಯೇಟರ್‌ಗೆ ಆದ್ಯತೆ ನೀಡಿದೆ ಎಂದು ತಿಳಿದುಬಂದಿದೆ. ಅದರ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ IAF ಅನ್ನು ವಿಭಜಿಸುವುದು ಅವಿವೇಕತನವಾಗಲಿದೆ ಎಂಬ ಅಭಿಪ್ರಾಯವೂ ಇದೆ. IAF ಥಿಯೇಟರ್ ರಚನೆಯ ಕಾರ್ಯ ಈಗಾಗಲೇ ಆರಂಭವಾಗಿದೆ. ಹೊಸ ಬಗೆಯ ಆಡಳಿತ ಅಲ್ಲೂ ಬರಲಿದೆ.

ಭವಿಷ್ಯದ ಯಾವುದೇ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತೀಯ ರಕ್ಷಣಾ ಪಡೆಯ ಮೂರು ವಿಭಾಗಗಳ ನಡುವೆ ಉತ್ತಮ ಸಮನ್ವಯಕ್ಕೆ ಸಹಾಯ ಮಾಡುವ ಐದು ಏಕೀಕೃತ ಅಥವಾ ಥಿಯೇಟರ್ ಕಮಾಂಡ್‌ಗಳನ್ನು ಹೊಂದಿರುವುದು ಪ್ರಸ್ತಾಪವಾಗಿದೆ. ಪ್ರಕ್ರಿಯೆಯು ಪೂರ್ಣಗೊಂಡಾಗ, ಅದು ಭಾರತೀಯ ಮಿಲಿಟರಿ ಸುಧಾರಣೆಗಳ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು ಆಗಲಿದೆ. ಏಕೆಂದರೆ, ನಿಘಂಟಿನ ಪ್ರಕಾರ, 'ಥಿಯೇಟ್ರಿಕಲೈಸೇಶನ್' ಎಂಬುದು ಸಂಪೂರ್ಣ ಭೂಮಿ, ಸಮುದ್ರ ಮತ್ತು ವಾಯುಪ್ರದೇಶವನ್ನು ಸೂಚಿಸುತ್ತದೆ. ಅದು ಪ್ರಸ್ತುತ ಅಥವಾ ಭವಿಷ್ಯದ ಯುದ್ಧ ಕಾರ್ಯಾಚರಣೆಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳಬಹುದು.

ಚೀನಾ ಈಗಾಗಲೇ ಥಿಯೇಟರ್ ಪರಿಕಲ್ಪನೆಯನ್ನು ಸಾಂಸ್ಥಿಕಗೊಳಿಸಿರುವಾಗ, ಭಾರತವು ತುಂಬ ಹಿಂದೆ ಉಳಿಯಲು ಸಾಧ್ಯವೇ?

ಭಾರತವು ಸದ್ಯ 19 ಮಿಲಿಟರಿ ಕಮಾಂಡ್‌ಗಳನ್ನು ಹೊಂದಿದೆ. ಅವುಗಳಲ್ಲಿ 17 ಸಿಂಗಲ್ ಕಮಾಂಡ್‌ಗಳು - ಭೂಸೇನೆ 7, ವಾಯುಪಡೆ 7 ಮತ್ತು ನೌಕಾಪಡೆ 3. ಸದ್ಯ ಅವೆಲ್ಲವೂ ಪ್ರತ್ಯೇಕ ಬೇಸ್‌ಗಳಲ್ಲಿ ನೆಲೆಗೊಂಡಿವೆ. ಭಾರತದ ಮೂರು ಸೇವೆಗಳ ಕಮಾಂಡ್‌ಗಳು 2001ರಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೆಲೆಗೊಂಡಿವೆ. ಪರಮಾಣು ದಾಸ್ತಾನುಗಳ ಮೇಲ್ವಿಚಾರಣೆಯ ಉಸ್ತುವಾರಿಗಾಗಿ 2003ರಲ್ಲಿ ಕಾರ್ಯತಂತ್ರದ ಪಡೆಗಳ ಕಮಾಂಡ್ (SFC) ಅನ್ನು ಸ್ಥಾಪಿಸಲಾಯಿತು. ತರಬೇತಿ ಮತ್ತು ಲಾಜಿಸ್ಟಿಕ್ಸ್‌ಗೆ ಕಮಾಂಡ್‌ಗಳನ್ನು ಹೊಂದುವುದರ ಜತೆಗೆ, ಈ ಎಲ್ಲ 17 ಕಮಾಂಡ್‌ಗಳನ್ನು ನಾಲ್ಕರಿಂದ ಐದು ಥಿಯೇಟರ್ ಕಮಾಂಡ್‌ಗಳ ಅಡಿಯಲ್ಲಿ ತರುವ ಗುರಿಯಿದೆ. ಇದು ಮಿಲಿಟರಿ ಉಪಕರಣಗಳ ಬಳಕೆಯನ್ನು ಗರಿಷ್ಠಗೊಳಿಸುವುದರ ಜತೆಗೆ, ಉತ್ತಮ ಯೋಜನೆಗಳಿಗೆ ಅನುಮತಿಸುವ ಮೂಲಕ ಕಾರ್ಯಾಚರಣೆಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಏಕೀಕರಣವನ್ನು ಬೆಂಬಲಿಸುವ ರಕ್ಷಣಾ ಅಧಿಕಾರಿಗಳು, ಚೀನಾವು ವೆಸ್ಟರ್ನ್ ಥಿಯೇಟರ್ ಕಮಾಂಡ್ ಅನ್ನು ಹೊಂದಿದ್ದು, ಅದು ಭಾರತದ ಸಂಪೂರ್ಣ ಗಡಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳುತ್ತಾರೆ. ಆದರೂ, ಚೀನಾದ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ಭಾರತವು ಹಲವು ಕಮಾಂಡ್‌ಗಳನ್ನು ಬಳಸುತ್ತದೆ.

ನಾಲ್ಕು ಥಿಯೇಟರ್ ಕಮಾಂಡ್‌ಗಳನ್ನು ರಚಿಸುವ ಕೆಲಸ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ - ಜೈಪುರದಲ್ಲಿ ಪ್ರಧಾನ ಕಚೇರಿಯೊಂದಿಗೆ ಪಶ್ಚಿಮ ಥಿಯೇಟರ್ ಕಮಾಂಡ್ (WTC); ಕಾರವಾರದಲ್ಲಿ ಮಾರಿಟೈಮ್ ಥಿಯೇಟರ್ ಕಮಾಂಡ್ (MTC); ಗಾಂಧಿನಗರ ಅಥವಾ ಪ್ರಯಾಗ್‌ರಾಜ್‌ನಿಂದ ಕಾರ್ಯನಿರ್ವಹಿಸುವ ವಾಯು ರಕ್ಷಣಾ ಕಮಾಂಡ್ (ADC); ಕೋಲ್ಕತ್ತಾ ಅಥವಾ ಲಕ್ನೋದಿಂದ ಕೆಲಸ ಮಾಡುವ ಈಸ್ಟರ್ನ್ ಥಿಯೇಟರ್ ಕಮಾಂಡ್ (ETC); ಹಾಗೂ ಪಾಕಿಸ್ತಾನ ಮತ್ತು ಚೀನಾದ ಆಕ್ರಮಣಗಳಿಗೆ ಉತ್ತರಿಸಲು ಎರಡು ಭೂ-ಆಧಾರಿತ ಕಮಾಂಡ್‌ಗಳು.

ಸ್ಥಾಪನೆಯ ಬಳಿಕ ಅವು ತಮ್ಮ ಅಡಿಯಲ್ಲಿ 17 ಸಿಂಗಲ್ ಸರ್ವಿಸ್ ಕಮಾಂಡ್‍ಗಳ ಕಾರ್ಯಾಚರಣೆಯ ಪಾತ್ರವನ್ನು ವಹಿಸಿಕೊಳ್ಳುತ್ತವೆ. ಅವುಗಳನ್ನು ಹಂತಹಂತವಾಗಿ ರದ್ದುಪಡಿಸಲಾಗುವುದು ಅಥವಾ ಅವುಗಳ ಪಾತ್ರಗಳು ಬದಲಾಗಬಹುದು. ಅದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಉಸ್ತುವಾರಿ ಹೊಂದಿರುವ ಉಧಮ್‌ಪುರ ಮೂಲದ ನಾರ್ತನ್ ಕಮಾಂಡ್‌ ಲಡಾಖ್‌ನಲ್ಲಿ ಚೀನಾ ಮತ್ತು ಕಾರ್ಗಿಲ್‌ನಲ್ಲಿ ಪಾಕಿಸ್ತಾನಕ್ಕೆ ಸನಿಹದಲ್ಲಿರುವ ಮುಂಚೂಣಿ ನೆಲೆಗಳಲ್ಲಿ ಮುಂದುವರಿಯುತ್ತದೆ.

ಏಕೀಕೃತ ರಕ್ಷಣಾ ಪಡೆ ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವೇ?

2020ರಲ್ಲಿ ಲಡಾಖ್‌ನಲ್ಲಿ ಭಾರತವನ್ನು ಎದುರಿಸುವ ಸಂದರ್ಭದಲ್ಲಿ ಚೀನಾದ ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯುಟಿಸಿ) ಅಂತಹ ಪ್ರಭಾವಶಾಲಿ ಪ್ರದರ್ಶನ ನೀಡದಿರುವುದನ್ನು ನೋಡಿದ ಮೇಲೆ ಈ ಪ್ರಶ್ನೆ ಮೂಡಿದೆ. ಗಾಲ್ವಾನ್ ಘರ್ಷಣೆಯಲ್ಲಿ, ಚೀನಾ ಭಾರೀ ನಷ್ಟ ಹಾಗೂ ಮುಖಭಂಗವನ್ನು ಅನುಭವಿಸಿತು. ಭಾರತೀಯ ಸೇನೆಯನ್ನು ಎದುರಿಸಿ ರೆಜಾಂಗ್ ಮತ್ತು ಸುತ್ತಮುತ್ತಲಿನ ಎತ್ತರದ ಪರ್ವತ ಶ್ರೇಣಿಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ಪಡೆಗಳು ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಸೇವೆಯಲ್ಲಿ ಸಾಕಷ್ಟು ಬಡ್ತಿಗಳಿಲ್ಲದಿರುವುದು, ಪಡೆಗಳ ನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪ, ಅವುಗಳ ಸೈನಿಕರು ಒಗ್ಗಿಕೊಳ್ಳಲು ಹಿಂಜರಿಯುತ್ತಿರುವುದು, ಉನ್ನತ ಮಟ್ಟದ ಯುದ್ಧ ಸಲಕರಣೆಗಳನ್ನು ನಿರ್ವಹಿಸುವಲ್ಲಿ ತೊಂದರೆಗಳು, ತಂತ್ರಜ್ಞಾನವನ್ನು ಬಳಸಿಕೊಂಡು ಅಮೆರಿಕದ ಯುದ್ಧ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಇನ್ನೂ ಹೆಚ್ಚಿನ ಗಂಭೀರ ಸವಾಲುಗಳಿಂದಾಗಿ ಚೀನೀ ಸೇನೆಯ ಅಧಿಕಾರಿಗಳಲ್ಲಿ ಮತ್ತು ಸೈನಿಕರಲ್ಲೂ ನೈತಿಕತೆಯ ಮಟ್ಟ ಕುಸಿದಿತ್ತು. ಥಿಯೇಟರ್ ಕಮಾಂಡ್‌ಗಳನ್ನು ಹೊಂದಿದ್ದರೂ, ಉಕ್ರೇನ್‌ನಲ್ಲಿ ಮೂರು ವಾರಗಳಿಂದ ತೀವ್ರ ತರದ ಯುದ್ಧವನ್ನು ನಡೆಸುತ್ತಿದ್ದರೂ ರಷ್ಯಾ ತನ್ನ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.

ಕಳೆದ ವರ್ಷ ನವದೆಹಲಿಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ, ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಮಿಲಿಟರಿ ಅಧಿಕಾರಿಗಳು ಹಾಗೂ ರಕ್ಷಣಾ ವಿಶ್ಲೇಷಕರು ಐಟಿಸಿಗಳ ವಿರುದ್ಧ ಗಂಭೀರವಾದ ಆಕ್ಷೇಪಗಳನ್ನು ಮಾಡಿದ್ದರು. ಐಟಿಸಿಯ ವಿಚಾರದಲ್ಲಿ ಮೂರು ವಿಭಾಗಗಳಲ್ಲಿ ಸ್ವೀಕಾರಾರ್ಹವಾದ ಯಾವುದೇ ನೀಲನಕ್ಷೆ ಇಲ್ಲ ಎಂಬುದು ಇದಕ್ಕೆ ಕಾರಣವಾಗಿತ್ತು. ಕಾರ್ಯಾಚರಣೆಯ ವಿನ್ಯಾಸವು ಇನ್ನೂ ಸ್ಪಷ್ಟವಾಗಿಲ್ಲದ ಹೊತ್ತಿನಲ್ಲಿ ಅದನ್ನು ರೂಪಿಸಲು ಅವಸರ ಮಾಡಬಾರದು. ಉತ್ತರ ಕಮಾಂಡ್ ಮುಂದುವರಿಯುವುದಿದ್ದರೆ, ಪ್ರಸ್ತಾವಿತ ಐಟಿಸಿಗಳು ಏಕೆ? ಎಂಬ ಪ್ರಶ್ನೆಯನ್ನು ವಿಚಾರ ಸಂಕಿರಣದಲ್ಲಿ ಎತ್ತಲಾಗಿತ್ತು.

ಮಿಶ್ರ ವೇದಿಕೆಯಲ್ಲಿ ಒಂದೇ ರೀತಿಯ ಪಾತ್ರವನ್ನು ವಹಿಸಲು ಎಲ್ಲ ಮೂರು ರಕ್ಷಣಾ ವಿಭಾಗಗಳು ಸಮಾನವಾಗಿ ಸಜ್ಜುಗೊಂಡಿಲ್ಲ. ರಕ್ಷಣಾ ವಿಭಾಗಗಳು ಮತ್ತು ಅವುಗಳ ಮುಖ್ಯಸ್ಥರು ಅಹಂಕಾರದ ಗಂಭೀರವಾದ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮನಸ್ಸುಗಳ ಸಂಯೋಗವು ಅಷ್ಟು ಸುಲಭವಾಗಿ ಆಗುವುದಿಲ್ಲ. ಸೇನೆಗಳ ನಡುವೆ ಇರುವ ವ್ಯತ್ಯಾಸಗಳನ್ನು ಸರಿಪಡಿಸದ ಹೊರತು ಐಟಿಸಿಯು ತನ್ನ ಉದ್ದೇಶಗಳನ್ನು ಪೂರೈಸಲು ವಿಫಲವಾಗುತ್ತವೆ.

ಇಷ್ಟು ಹೇಳಿದ ಮೇಲೆ, ಚೀನಾ ಸಾಂಪ್ರದಾಯಿಕ ಯುದ್ಧಕ್ಕಿಂತ ಸೈಬರ್‌ ಸ್ಪೇಸ್‌ನಲ್ಲಿ ಮಾಹಿತಿಯನ್ನು ಕದಿಯುವುದಕ್ಕೆ ಆದ್ಯತೆ ನೀಡಬಹುದು ಎನ್ನಿಸುತ್ತದೆ. ಚೀನಾದ ಅಸಾಂಪ್ರದಾಯಿಕ ಯುದ್ಧವನ್ನು ವಿಫಲಗೊಳಿಸಲು ಭಾರತವು ಸೈನಿಕರು ಮತ್ತು ಯಂತ್ರಗಳೊಂದಿಗೆ ಮಿಲಿಟರಿಯನ್ನು ಸಜ್ಜುಗೊಳಿಸುವುದು ಮುಖ್ಯವಾಗಿದೆ.

________

ಲೇಖಕ:ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT