ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಬರಹ: ಕತ್ತರಿಸಿ ಹೋಗಲಿದೆ ಒಕ್ಕೂಟದ ಎಳೆ

ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಕ್ಕೆ ತಿದ್ದುಪಡಿ ತರುವ ಕೇಂದ್ರದ ಪ್ರಸ್ತಾವ ಸರಿಯೇ?
Last Updated 28 ಜನವರಿ 2022, 19:31 IST
ಅಕ್ಷರ ಗಾತ್ರ

ಈಗಿನ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಶತ 40ರ ಮೀಸಲು ಪಟ್ಟಿಯಿಂದ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪ್ರಮಾಣ ಪ್ರತಿಶತ 18ಕ್ಕೆ ಇಳಿದಿದೆ. ಹಾಗಾದರೆ ಐಎಎಸ್ ಅಧಿಕಾರಿಗಳ ಕೊರತೆ ಎಲ್ಲಿ ಉಂಟಾಗಿದೆ? ಅದಕ್ಕೆ ಯಾರು ಕಾರಣ? ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಹೋಗಲು ಏಕೆ ಇಚ್ಛೆಪಡುವುದಿಲ್ಲ? – ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕಂಡುಕೊಳ್ಳಬೇಕು

ಎಸ್.ಎಂ. ಜಾಮದಾರ
ಎಸ್.ಎಂ. ಜಾಮದಾರ

ಕೇಂದ್ರ ಸರ್ಕಾರದ ಪ್ರಸ್ತಾವಿತ ಐಎಎಸ್ ಕೇಡರ್‌ ನಿಯಮಗಳ ತಿದ್ದುಪಡಿಯುಮೇಲ್ನೋಟಕ್ಕೆ ವಿವಾದಿತವಲ್ಲದಂತೆ ಕಂಡರೂ ಅದರ ಹಿನ್ನೆಲೆ, ಉದ್ದೇಶ ಮತ್ತು ಅದರ ದೀರ್ಘಕಾಲಿನಪರಿಣಾಮಗಳನ್ನು ಗಮನಿಸಿದರೆ ಅದೊಂದು ಅನವಶ್ಯಕ ಪ್ರಯತ್ನವೆಂಬುದು ಸ್ಪಷ್ಟವಾಗುತ್ತದೆ.

ಐಎಎಸ್ ಮತ್ತು ಐಪಿಎಸ್ ಇವೆರಡೂ ನಮ್ಮ ಸಂವಿಧಾನದ ವಿಧಿ 312(2)ರಲ್ಲಿ ಸೃಷ್ಟಿಸಿದ ಸೇವೆಗಳಾಗಿವೆ. ನಂತರ 1951ರ ಎಐಎಸ್ ಕಾಯ್ದೆಯ ಮೂಲಕ ಭಾರತೀಯ ಅರಣ್ಯ ಸೇವೆಯನ್ನೂ (ಐಎಫ್ಎಸ್) ಅವೆರಡರ ಜೊತೆ ಅಖಿಲ ಭಾರತ ಸೇವೆಯಾಗಿ ಸೇರಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉನ್ನತ ಹುದ್ದೆಗಳಲ್ಲಿ ಈ ಮೂರೂ ಸೇವೆಯ ಅಧಿಕಾರಿಗಳು ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಇದು ಬ್ರಿಟಿಷರ ಕಾಲದಿಂದಲೂ ನಡೆದು ಬಂದ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ಅಧಿಕಾರಿಗಳನ್ನು ಆಯ್ಕೆಮಾಡಿ, ಪ್ರತಿಯೊಂದು ರಾಜ್ಯಕ್ಕೆ ಅದರ ಗಾತ್ರ ಮತ್ತು ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡುತ್ತದೆ. ಆದ್ದರಿಂದ ಮೂಲತಃ ಇವರು ಕೇಂದ್ರ ಸರ್ಕಾರದ ಅಧಿಕಾರಿಗಳು. ಆಯಾ ರಾಜ್ಯಕ್ಕೆ ನೀಡಿದ ಒಟ್ಟು ಅಧಿಕಾರಿಗಳಲ್ಲಿ ಪ್ರತಿಶತ 40ರಷ್ಟು ಅಧಿಕಾರಿಗಳನ್ನು ಕೇಂದ್ರ ಸರ್ಕಾರದ ಉನ್ನತ ಸೇವೆಗೆ ಪ್ರತಿಯೊಂದು ರಾಜ್ಯ ಸರ್ಕಾರವೂ ಮೀಸಲಿಡಬೇಕು.

ಶೇ 40ರ ಮೀಸಲು ಪಟ್ಟಿಯನ್ನು ತಯಾರಿಸುವಾಗ ಆಯಾ ಅಧಿಕಾರಿಗಳ ಇಚ್ಛೆ, ರಾಜ್ಯ ಸರ್ಕಾರದಲ್ಲಿ ಆಯಾ ಅಧಿಕಾರಿಯ ಸೇವೆಯ ಅಗತ್ಯವನ್ನು ಪರಿಗಣಿಸಿ ಆ ಪಟ್ಟಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಪ್ರತಿ ವರ್ಷ ನೀಡಬೇಕು. ಇದು 1951ರಿಂದ ಈವರೆಗೆ ಸರಳವಾಗಿ, ಸುಲಭವಾಗಿ ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿದೆ. ಇದು ಒಕ್ಕೂಟದ ಸಹಕಾರಿ ತತ್ವಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ದೇಶದ ಐಕ್ಯತೆ, ಭದ್ರತೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮತೋಲಿತ ನಿರ್ವಹಣೆಗಾಗಿ ನಮ್ಮ ಹಿರಿಯರು ಸಂವಿಧಾನದಲ್ಲಿ ಮಾಡಿದ ವ್ಯವಸ್ಥೆ ಇದಾಗಿದೆ. ಇದರ ಅವಶ್ಯಕತೆಯನ್ನು ಕುರಿತು ಸರ್ದಾರ್‌ ವಲ್ಲಭಭಾಯಿ ಪಟೇಲರು ಸಂವಿಧಾನ ರಚನಾ ಪರಿಷತ್ತಿನ ಚರ್ಚೆಯಲ್ಲಿ ಹೀಗೆ ಹೇಳಿದ್ದಾರೆ: ‘ಈ ವ್ಯವಸ್ಥೆಗೆ ಬೇರೆ ಪರ್ಯಾಯವಿಲ್ಲ. ಇದು ನಿಮಗೆ ಬೇಡವಾದರೆ ಈ ಸಂವಿಧಾನವನ್ನು ಬಿಟ್ಟು ಬಿಡಿ. ಇದನ್ನು ರದ್ದುಪಡಿಸಿದರೆ ನನಗೆ ದೇಶದಾದ್ಯಂತ ಅರಾಜಕತೆಯೇ ಎದ್ದು ಕಾಣುತ್ತದೆ.’

ಭಾರತದ ಪ್ರಥಮ ಉಪ ಪ್ರಧಾನ ಮಂತ್ರಿಯಾಗಿದ್ದ ಅಂದಿನ ಗೃಹ ಸಚಿವ ಸರ್ದಾರ್‌ ಪಟೇಲರು ಅಖಿಲ ಭಾರತ ಸೇವೆಗಳಿಗೆ ಭದ್ರಬುನಾದಿ ಹಾಕಿ ಅದನ್ನು ನಿಜ ಅರ್ಥದಲ್ಲಿ ದೇಶದ ಆಡಳಿತದ ‘ಸ್ಟೀಲ್‌ ಫ್ರೇಮ್‌’ (ಆಡಳಿತ ವ್ಯವಸ್ಥೆಯ ಬೆನ್ನೆಲುಬು) ಆಗಿ ಬೆಳೆಸಿದರು. ಅವರಲ್ಲಿ ಪಕ್ಷಾತೀತ, ಕಾನೂನುಬದ್ಧ, ನಿಸ್ವಾರ್ಥ, ಪ್ರಾಮಾಣಿಕ ಸೇವಾಪರತೆಯೊಂದಿಗೆ ವೃತ್ತಿಯ ಶ್ರೇಷ್ಠತೆಯನ್ನೂ ಶ್ರೇಣಿಯನ್ನೂ ತುಂಬಿದರು. ಅವರೊಂದಿಗೆ ಕೆಲಸ ಮಾಡಿದ ಧರ್ಮವೀರರ ಆತ್ಮಚರಿತ್ರೆಯಲ್ಲಿ ಈ ವಿವರಗಳನ್ನು ನಾವು ಕಾಣಬಹುದು.

ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಅವರಂಥ ಬಹುತೇಕ ಕಾಂಗ್ರೆಸ್ ನಾಯಕರು ಐಸಿಎಸ್ ಅಧಿಕಾರಿಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದರು. ‘ಇಂಡಿಯನ್ ಸಿವಿಲ್ ಸರ್ವಿಸ್‌ ಅಂದರೆ ಇಂಡಿಯನ್ ಅಲ್ಲ, ಸಿವಿಲ್ ಅಲ್ಲ, ಸರ್ವಿಸೂ ಅಲ್ಲ’ ಎಂದು ನೆಹರೂ ಅವರೇ ಹೇಳಿದ್ದರು. ಆದರೆ ಅದೇ ಸೇವೆಯಿಂದ ಬಂದಿದ್ದ ಸಿ.ಡಿ.ದೇಶಮುಖರನ್ನು ಅವರೇ ಅರ್ಥ ಸಚಿವರನ್ನಾಗಿ ಮಾಡಬೇಕಾಯಿತು. ಎಚ್.ಎಂ.ಪಟೇಲ್‌, ಕೆಪಿಎಸ್ ಮೆನನ್ ಅವರು ದೇಶದ ಆಡಳಿತ ವ್ಯವಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಇದನ್ನು ಚೆನ್ನಾಗಿ ಅರಿತ ಸರ್ದಾರ್‌ ಪಟೇಲರು ಈ ಸೇವೆಗಳು ಸ್ವತಂತ್ರ ಭಾರತದಲ್ಲಿ ಮುಂದುವರಿಯಲು ಕಾರಣರಾದರು. ಅವರು ಕಟ್ಟಿದ ಈ ಸ್ಟೀಲ್‌ ಫ್ರೇಮ್‌ಅನ್ನು ಈಗ ಅಶಕ್ತಗೊಳಿಸಲಾಗುತ್ತಿದೆ ಎನ್ನುವುದು ದುರ್ದೈವದ ಸಂಗತಿ.

ಒಕ್ಕೂಟ ಧರ್ಮ ಪರಿಪಾಲನೆಗೆಹೇಳಿಮಾಡಿಸಿದಂತಿದ್ದ ಇಂತಹ ವ್ಯವಸ್ಥೆಯನ್ನು ತಿದ್ದಿ ‘ಇದರಲ್ಲಿ ಭಿನ್ನಾಭಿಪ್ರಾಯ ಬಂದರೆಕೇಂದ್ರ ಸರ್ಕಾರದ ನಿರ್ಣಯವೇ ಅಂತಿಮಮತ್ತು ರಾಜ್ಯ ಸರ್ಕಾರಗಳು ಅದನ್ನು ಪಾಲಿಸಲೇಬೇಕು’ ಎಂಬುದು ಎಷ್ಟು ಸರಿ? ಇದರಿಂದಾಗಿ ರಾಜ್ಯಗಳ ಆದ್ಯತೆಗಳನ್ನು, ಅಭಿಪ್ರಾಯವನ್ನು ಹಾಗೂಸ್ವಾತಂತ್ರ್ಯವನ್ನು ಕೇಂದ್ರ ತಿರಸ್ಕರಿಸಿದಂತಾಗುವುದಿಲ್ಲವೇ? ಇದು ಒಕ್ಕೂಟ ತತ್ವದ ಉಲ್ಲಂಘನೆಯಲ್ಲವೇ? ಕೇಂದ್ರ ಸರ್ಕಾರವನ್ನು ನಡೆಸುವವರ ಸರ್ವಾಧಿಕಾರಿ ಧೋರಣೆಯೂ ಇದಲ್ಲವೇ?

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿಯನ್ನು ಮಮತಾ ಬ್ಯಾನರ್ಜಿಯವರು ಕೇಂದ್ರ ಸೇವೆಗೆ ಬಿಟ್ಟು ಕೊಡಲಿಲ್ಲ ಎಂಬುದಕ್ಕೆ ಅಥವಾ ಜಯಲಲಿತಾ ಅವರು ಒಬ್ಬ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸೇವೆಗೆ ಸೇರಿದಾಗ ನಿಲಂಬನೆಯಲ್ಲಿ ಇಟ್ಟರೆಂದು ಸೇಡು ತೀರಿಸಿಕೊಳ್ಳುವ ಕಾರಣಕ್ಕಾಗಿ ಈ ತರಹದ ಸಣ್ಣತನವೇ? ವಲ್ಲಭಭಾಯಿ ಪಟೇಲರ ಲೋಹದ ನಿರ್ಜೀವ ಬೃಹತ್ ಪ್ರತಿಮೆ ನಿಲ್ಲಿಸಿ ವಿಜೃಂಭಿಸುತ್ತ ಅವರೇ ನಿರ್ಮಿಸಿದ ಅಖಿಲ ಭಾರತ ಸೇವೆಗಳನ್ನು ಈ ರೀತಿ ಭಗ್ನಗೊಳಿಸುವುದು ಎಷ್ಟು ಸರಿ?

ಅಷ್ಟಾಗಿಯೂ ಈಗಿನ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಶತ 40ರ ಮೀಸಲು ಪಟ್ಟಿಯಿಂದ ಐಎಎಸ್ ಅಧಿಕಾರಿ
ಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪ್ರಮಾಣ ಪ್ರತಿಶತ 18ಕ್ಕೆ ಇಳಿದಿದೆ. ಹಾಗಾದರೆ ಐಎಎಸ್ ಅಧಿಕಾರಿಗಳ ಕೊರತೆ ಎಲ್ಲಿ ಉಂಟಾಗಿದೆ? ಅದಕ್ಕೆ ಯಾರು ಕಾರಣ? ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಹೋಗಲು ಏಕೆ ಇಚ್ಛೆಪಡುವುದಿಲ್ಲ? – ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕಂಡುಕೊಳ್ಳಬೇಕು. ಕಳೆದ ಕೆಲವು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಆತ್ಮಾವಲೋಕನ ಮಾಡಿಕೊಂಡರೆ ಅಲ್ಲಿಯೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಕೆಲವೇ ಕೆಲವು ಬಾಲಬಡುಕ ಅಧಿಕಾರಿಗಳಿಗೆ ಮಾತ್ರ ಅಲ್ಲಿ ಅವಕಾಶವಿದೆ. ಕಾನೂನು, ಸೂಕ್ತ ಪರಿಕ್ರಮ, ಬದ್ಧತೆ, ನಿಷ್ಪಕ್ಷಪಾತ, ನೇರ ಅಭಿಪ್ರಾಯ ಗಳಿಗೆ ಅವಕಾಶವಿಲ್ಲದ ಕಡೆ ಯಾವ ಒಳ್ಳೆಯ ಅಧಿಕಾರಿ ಕೆಲಸ ಮಾಡಲು ಇಚ್ಛಿಸುತ್ತಾನೆ?

ಕೇಂದ್ರ ಸೇವೆಗೆ ಹೋಗಲು ಅಧಿಕಾರಿಗಳಲ್ಲಿ ನಿರಾಸಕ್ತಿ ಇರುವುದು ನಿಜವಾದರೂ ಕೇಂದ್ರ ಸೇವೆಗೆ ಆಯ್ಕೆಯಾಗಲು ಐಎಎಸ್ ಅಧಿಕಾರಿಗಳು ಬಿಜೆಪಿ/ಸಂಘ ಪರಿವಾರ/ ಆ ಪಕ್ಷದ ಶಾಸಕ/ ಸಂಸದ/ಮಂತ್ರಿಗಳ ಮೂಲಕ ಒತ್ತಡ ತರಬೇಕು. ಇಲ್ಲವೆ ಅವರಕ್ರೋನಿಗಳಾಗಬೇಕು, ಗಾಡ್‌ ಫಾದರ್‌ಗಳನ್ನು ಹೊಂದಿರಬೇಕು ಎನ್ನುವುದು ಕೂಡ ಅಷ್ಟೇ ನಿಜ. ಇದು ಪ್ರಾಮಾಣಿಕ ಅಧಿಕಾರಿಗಳಿಂದ ಸಾಧ್ಯವಿಲ್ಲ. ಒಂದು ವೇಳೆ ಆಯ್ಕೆಯಾದರೂ ಯಾವಾಗ, ಯಾವ ಕಾರಣಕ್ಕಾಗಿ ಅವರನ್ನು ಮೂಲ ಕೇಡರ್‌ ರಾಜ್ಯಕ್ಕೆ ಹಿಂದಿರುಗಿಸಲಾಗುವುದು ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಅದಲ್ಲದೆ ಮದ್ರಾಸ್‌ ಅಯ್ಯಂಗಾರ್‌ ಲಾಬಿ, ಉತ್ತರ ಪ್ರದೇಶ ಅಧಿಕಾರಿಗಳ ಲಾಬಿಗಳು ಇಂಥ ಕೆಲಸಗಳಲ್ಲಿ ನಿಷ್ಣಾತ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈ ಎಲ್ಲ ಕಾರಣಗಳಿಂದ ಬಹುತೇಕ ಐಎಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ಹೋಗಲು ಒಪ್ಪುವುದಿಲ್ಲ.

ಅಲ್ಲದೆ, ಪ್ರಧಾನ ಮಂತ್ರಿಯವರೇ ಅನೇಕ ಸಂದರ್ಭಗಳಲ್ಲಿ ಐಎಎಸ್‌ಗೆ ಅವಹೇಳನಕರವಾಗಿ ಮಾತನಾಡಿದ್ದು ಗುಪ್ತವೇನಲ್ಲ. ಪ್ರಧಾನಿಯವರು ಐಎಎಸ್ ಬಗ್ಗೆ ಅಸಂತೋಷಗೊಂಡಿದ್ದರೆ, ಅವರು ಬಹಳ ಇಷ್ಟಪಡುವ ಗುಜರಾತ್‌ ಕೇಡರ್‌ನ ಐಎಎಸ್ ಅಧಿಕಾರಿಗಳೂ ಅದೇ ಸೇವೆಯಿಂದ ಬಂದವರಲ್ಲವೇ? ಅವರಲ್ಲಿ ಯಾವ ವಿಶೇಷ ಇದೆ? ಅದನ್ನು ಬಲ್ಲವರು ಗ್ರಹಿಸಬಹುದು. ಹಾಗೂ ಐಎಎಸ್ ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ನೂರಾರು ಸಹಮತಿಗಳನ್ನು ತಂದು ಕೂರಿಸಲಾಗಿದೆ. ಅವರ ಮೂಲಕವೇ ಸರ್ಕಾರವನ್ನು ನಡೆಸಿಕೊಂಡು ಹೋಗಬಹುದು. ಮತ್ತೇಕೆ ಬೇಕು ಹೆಚ್ಚೆಚ್ಚು ಐಎಎಸ್ ಅಧಿಕಾರಿಗಳು? ಅದಕ್ಕೇಕೆ ಅಗತ್ಯವಿದೆ ಈ ನಿಯಮಗಳ ತಿದ್ದುಪಡಿ?

ಲೇಖಕ: ನಿವೃತ್ತ ಐಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT