ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ರಾಜ್ಯಪಾಲ: ಕೇಂದ್ರವೇ ನೇಮಿಸಬೇಕೆ?

ಸಂವಿಧಾನದ ವೇಷ ತೊಟ್ಟು ರಾಜ್ಯ ಸರ್ಕಾರಗಳಿಗೆ ಕಿರಿಕಿರಿ ಮಾಡುವುದನ್ನು ತಪ್ಪಿಸುವುದು ಹೇಗೆ?
Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಲ್ಲಿನ ವಿಶ್ವವಿದ್ಯಾಲಯಗಳ ಕುಲಾಧಿಪತಿಯನ್ನಾಗಿ ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ನೇಮಕ ಮಾಡುವ ಕಾನೂನು ಜಾರಿಗೆ ತರಲು ತೀರ್ಮಾನಿಸಿದೆ. ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಕೂಡ ಎರಡು ತಿಂಗಳ ಹಿಂದೆ ಇದೇ ಬಗೆಯ ತೀರ್ಮಾನ ಕೈಗೊಂಡಿತು. ಹೀಗೆ ಮಾಡಿರುವುದಕ್ಕೆ ಸಕಾರಣಗಳು ಇವೆ.

ರಾಜ್ಯಪಾಲರು ರಾಜ್ಯ ಸರ್ಕಾರಗಳ ಜೊತೆ ವರ್ತಿಸುತ್ತಿರುವ ರೀತಿಯಲ್ಲಿ ವಿಶಿಷ್ಟವಾದ ವಿಧಾನವೊಂದು ಇದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ರಾಜ್ಯಪಾಲರು ಅಲ್ಲಿನ ಸರ್ಕಾರಗಳ ಜೊತೆ ಲವ್ವಿ–ಡವ್ವಿ ಸಂಬಂಧ ಹೊಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ರಾಜ್ಯ ಸರ್ಕಾರಗಳ ಜೊತೆ ಅಲ್ಲಿನ ರಾಜ್ಯಪಾಲರು ಹೊಂದಾಣಿಕೆಯ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅಲ್ಲಿ ಸರ್ಕಾರಗಳನ್ನುಅವರು ಸಾರ್ವಜನಿಕವಾಗಿ ಪ್ರಶಂಸಿಸುವುದೂ ಇದೆ.

ಆದರೆ, ಇತರ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತು ಆಡುವುದಿಲ್ಲ. ಅಲ್ಲಿ ಅವರಿಗೆ ಕರಾಳ ಮುಖಗಳು ಮಾತ್ರ ಕಾಣುತ್ತಿವೆ. ಅವರಿಗೆ ಅಲ್ಲಿ ಹಾಡಹಗಲೇ ನಿಯಮಗಳನ್ನು ಹತ್ಯೆ ಮಾಡುವುದು ಕಾಣುತ್ತಿದೆ. ಅಲ್ಲಿ ಅವರು ಬಹುತೇಕ ಸಂದರ್ಭಗಳಲ್ಲಿ ವಿರೋಧ ಪಕ್ಷದ (ಅಂದರೆ ಬಿಜೆಪಿಯ) ಭಾಷೆಯಲ್ಲಿ ಮಾತನಾಡುತ್ತಾರೆ. ಮಹಾರಾಷ್ಟ್ರದಲ್ಲಿ ಒಂದು ಅತ್ಯಾಚಾರ, ಕೊಲೆ ಪ್ರಕರಣ ನಡೆಯಿತು. ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಬಿಜೆಪಿ ಆಗ್ರಹಿಸಿತು. ಎರಡು ದಿನಗಳ ವಿಶೇಷ ಅಧಿವೇಶನ ಕರೆಯುವಂತೆ ಕೋರಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದರು. ಇದಕ್ಕೆ ಜಾಣ ಪ್ರತಿಕ್ರಿಯೆ ನೀಡಿದ ಠಾಕ್ರೆ, ಈ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಕೇಂದ್ರಕ್ಕೆ ತಾವು ಪತ್ರ ಬರೆಯಬೇಕು, ವಿಷಯವು ನಿರ್ದಿಷ್ಟ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಅದು ರಾಷ್ಟ್ರೀಯ ವಿಚಾರ ಎಂದು ಹೇಳಿದರು.

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರೂ ಬಿಜೆಪಿ ಬಯಸುವ ರೀತಿಯಲ್ಲಿಯೇ ವರ್ತಿಸುತ್ತಿದ್ದಾರೆ. ವೈದ್ಯಕೀಯ ಪ್ರವೇಶ ಮತ್ತು ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ವಿಶಿಷ್ಟವಾದ ನೀತಿಗಳನ್ನು ಹೊಂದಿರುವ ತಮಿಳುನಾಡು ಬಲಿಷ್ಠ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಟ್ಟಿದೆ. ಹೀಗಾಗಿ, ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡು ರಾಜ್ಯವನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ‌್) ವ್ಯಾಪ್ತಿಯಿಂದ ಹೊರತರಲು ಯತ್ನಿಸುತ್ತಿದ್ದಾರೆ. ಆದರೆ, ಎಲ್ಲವನ್ನೂ ಏಕರೂಪದ ವ್ಯವಸ್ಥೆಯ ಅಡಿ ತರುವುದರಲ್ಲಿ ನಂಬಿಕೆ ಹೊಂದಿರುವ ಬಿಜೆಪಿಗೆ, ವೈದ್ಯಕೀಯ ಪ್ರವೇಶಾತಿ ವಿಚಾರದಲ್ಲಿ ತಮಿಳುನಾಡಿಗೆ ವಿಶೇಷ ಸ್ಥಾನ ಸಿಗುವುದು ಇಷ್ಟವಿಲ್ಲ. ರವಿ ಅವರು ಆ ನಿಲುವಿನ ಪರ ಇದ್ದಾರೆ. ತಮಿಳುನಾಡು ವಿಧಾನಸಭೆ ಅನುಮೋದಿಸಿದ್ದ ಮಸೂದೆಯನ್ನು ಅವರು ಕೆಲವು ಆಕ್ಷೇಪಣೆಗಳೊಂದಿಗೆ ಹಿಂದಕ್ಕೆ ಕಳುಹಿಸಿದರು. ತಿದ್ದುಪಡಿ ಮಸೂದೆಯನ್ನೂ ದೀರ್ಘಾವಧಿಗೆ ಹಾಗೇ ಇರಿಸಿಕೊಂಡ ರವಿ, ನಂತರ ಅದನ್ನು ರಾಷ್ಟ್ರಪತಿಗೆ ಕಳುಹಿಸಿದರು. ಈಗ ಅದು ರಾಷ್ಟ್ರಪತಿಯವರ ಮುಂದಿದೆ.

ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲ ಜಗದೀಪ್ ಧನಕರ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಘರ್ಷವನ್ನು ಗಮನಿಸಿದರೆ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಮುಖ್ಯಮಂತ್ರಿ–ರಾಜ್ಯಪಾಲರ ನಡುವೆ ನಡೆದಿರುವುದು ಸಂಭಾವಿತರ ಸಂಘರ್ಷ ಎನ್ನಬಹುದು. ಬಂಗಾಳದಲ್ಲಿ ಪ್ರತಿದಿನವೂ ವಾಗ್ದಾಳಿಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳವು ಪ್ರಜಾತಂತ್ರದ ಪಾಲಿಗೆ ವಿಷಾನಿಲದ ಛೇಂಬರ್ ಆಗಿದೆ ಎಂದು ರಾಜ್ಯಪಾಲರು ಪ್ರತಿದಿನವೂ ಹೇಳುತ್ತಾರೆ. ‘ರಾಜಭವನದಲ್ಲಿ ಒಬ್ಬ ರಾಜ ಇದ್ದಾನೆ. ಆತನದ್ದು ಸಡಿಲ ನಾಲಿಗೆ. ಆತ ಬಿಜೆಪಿಯ ಅಧ್ಯಕ್ಷನಂತೆ ಮಾತನಾಡುತ್ತಾನೆ’ ಎಂದು ಮಮತಾ ಪ್ರತಿದಾಳಿ ನಡೆಸುತ್ತಾರೆ.

ಬಿಜೆಪಿಗೆ ಸಡ್ಡು ಹೊಡೆದು ನಿಂತಿರುವ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಂಘರ್ಷವು ಕೊನೆಗೊಳ್ಳುವುದೇ? ಇದಕ್ಕೆ ಉತ್ತರ ‘ಇಲ್ಲ’. ಅಲ್ಲಿನ ಸರ್ಕಾರಗಳ ಬಗ್ಗೆ ರಾಜ್ಯಪಾಲರು ಸಾಧ್ಯವಾದಷ್ಟೂ ಕೆಟ್ಟ ಮಾತು ಆಡುತ್ತಿರಲಿ ಎಂದು ಬಿಜೆಪಿಯ ನಾಯಕರು ಬಯಸುತ್ತಿದ್ದಾರೆ ಎಂಬ ಕಾರಣಕ್ಕೆ ಹೀಗೆ ಹೇಳುತ್ತಿಲ್ಲ. ಈ ರೀತಿ ಮಾಡುವುದು ಬಿಜೆಪಿಯೇ ಮೊದಲಿಗೆ ಕಂಡುಕೊಂಡ ಮಾರ್ಗವಲ್ಲ. ಕಾಂಗ್ರೆಸ್ಸು ಉಚ್ಛ್ರಾಯದಲ್ಲಿದ್ದಾಗ ರಾಜ್ಯಪಾಲರನ್ನು ತನ್ನ ಏಜೆಂಟರಂತೆ ಬಳಸಿಕೊಂಡಿತು. ತನ್ನ ವಿರೋಧಿ ಪಕ್ಷಗಳ ಆಡಳಿತ ಇರುವ ರಾಜ್ಯಗಳು ರಾವಣನ ಆಡಳಿತವಿರುವ ಲಂಕೆ ಎಂಬಂತೆ ಬಿಂಬಿಸಲು ಅವರೂ ಯತ್ನಿಸಿದ್ದರು. ಮುಂದೊಂದು ದಿನ ಕಾಂಗ್ರೆಸ್, ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದರೆ ಅದು ಕೂಡ ಮತ್ತೆ ಇದೇ ಕೆಲಸ ಮಾಡುತ್ತದೆ.ಬ್ರಿಟಿ

ಷರ ಕಾಲದ ಗವರ್ನರ್‌ಗಳಿಗೆ ಇದ್ದಂತಹ ಅಧಿಕಾರವೇ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ರಾಜ್ಯ‍ಪಾಲರಿಗೂ ಇದೆ. ರಾಜ್ಯಪಾಲರ ಅಧಿಕಾರ ಏನೆಂಬುದನ್ನು ಸಂವಿಧಾನದ 163ನೇ ವಿಧಿ ಹೇಳುತ್ತದೆ. ಇದು 1935ರ ಭಾರತ ಸರ್ಕಾರ ಕಾಯ್ದೆಯ ಸೆಕ್ಷನ್‌ 50ರ ನಕಲು. ಅದರಲ್ಲಿ ಬ್ರಿಟಿಷರು ನೇಮಕ ಮಾಡಿದ ಗವರ್ನರ್‌ಗಳ ಪಾತ್ರ ಏನು ಎಂಬುದನ್ನು ವಿವರಿಸಲಾಗಿತ್ತು. ವಸಾಹತು ಕಾಲದ ಗವರ್ನರ್‌ಗಳ ಮಾದರಿಯಲ್ಲೇ, ಇಂದಿನ ರಾಜ್ಯಪಾಲರಿಗೆ ವಿವೇಚನಾ ಅಧಿಕಾರ ನೀಡಲಾಗಿದೆ. ಇಂತಹ ವಿವೇಚನಾ ಅಧಿಕಾರಕ್ಕೆ ಮಿತಿ ಇಲ್ಲ. ಯಾವೆಲ್ಲ ವಿಚಾರಗಳಲ್ಲಿ ರಾಜ್ಯಪಾಲರು ವಿವೇಚನಾ ಅಧಿಕಾರ ಬಳಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದರ ಸ್ಪಷ್ಟ ವ್ಯಾಖ್ಯಾನ ಇಲ್ಲ. ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರ ಬಳಸಿ ಕೈಗೊಂಡ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ, ಅದನ್ನು ಸಚಿವ ಸಂಪುಟವೂ ಪ್ರಶ್ನೆ ಮಾಡಲಾಗದು.

ಅವರು ವಿಧಾನಸಭೆ ಅನುಮೋದಿಸಿದ ಮಸೂದೆಗೆ ಸಹಿ ಹಾಕದೆ ಅನಿರ್ದಿಷ್ಟಾವಧಿಗೆ ಹಾಗೇ ಇರಿಸಿಕೊಳ್ಳಬಹುದು. ಸಂವಿಧಾನದ 163ನೇ ವಿಧಿಗೆ ತಿದ್ದುಪಡಿ ತಂದು, ರಾಜ್ಯಪಾಲರ ವಿವೇಚನಾ ಅಧಿಕಾರವನ್ನು ಹಿಂಪಡೆಯಬೇಕು. ಆದರೆ ಹೀಗೆ ಮಾಡುವುದರಲ್ಲಿಯೂ ಅಪಾಯವಿದೆ, ಈ ರೀತಿ ಮಾಡುವುದು ಪ್ರಜಾತಾಂತ್ರಿಕ ಮೌಲ್ಯಗಳಿಗೆ ಸರಿಹೊಂದುವುದೂ ಇಲ್ಲ. ರಾಜ್ಯ ಸರ್ಕಾರವು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ರಾಜ್ಯಪಾಲರು ನೋಡಿಕೊಳ್ಳಲಿ ಎಂಬ ಕಾರಣಕ್ಕೇ ಸಂವಿಧಾನ ರೂಪಿಸಿದವರು ಅವರಿಗೆ ವಿವೇಚನಾ ಅಧಿಕಾರ ನೀಡಿದರು. ಆದರೆ ಆ ಆಶಯ ಈಡೇರುತ್ತಿಲ್ಲ. ಸಂವಿಧಾನದ ರಕ್ಷಕರಾಗಿ ಕೆಲಸ ಮಾಡುವ ಬದಲು ರಾಜ್ಯಪಾಲರು ಕೇಂದ್ರ ಸರ್ಕಾರದ ಕಾವಲು ನಾಯಿಯಂತೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯಪಾಲರನ್ನು ನೇಮಿಸುವ ಬಗೆಯಲ್ಲಿ ಬದಲಾವಣೆ ತಂದರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ತೋರಿದ ನಿಷ್ಠೆಯ ಆಧಾರದಲ್ಲಿ ರಾಜ್ಯಪಾಲರನ್ನು ನೇಮಕ ಮಾಡುವುದಾದರೆ, ಅವರು ಸಂವಿಧಾನದ ವೇಷ ತೊಟ್ಟು ರಾಜ್ಯ ಸರ್ಕಾರಗಳನ್ನು ಪೀಡಿಸುವುದು ಮುಂದುವರಿಯುತ್ತದೆ. ಹೀಗಾಗಿ, ರಾಜ್ಯಪಾಲರ ಹುದ್ದೆಯನ್ನು ರದ್ದು ಮಾಡಬೇಕಿಲ್ಲ. ಅವರ ವಿವೇಚನಾ ಅಧಿಕಾರವನ್ನೂ ಹಿಂದಕ್ಕೆ ಪಡೆಯಬೇಕಿಲ್ಲ. ಆದರೆ, ರಾಜ್ಯಪಾಲರನ್ನು ನೇಮಕ ಮಾಡುವ ಕೇಂದ್ರದ ಅಧಿಕಾರವನ್ನು ಕಿತ್ತುಕೊಳ್ಳ
ಬೇಕು. ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ, ರಾಜ್ಯದ ಮುಖ್ಯಮಂತ್ರಿ, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಸಂವಿಧಾನದ ಬಗ್ಗೆ ಅಪಾರ ಪರಿಣತಿ ಹೊಂದಿರುವ ವಕೀಲ ಮತ್ತು ಇತರ ಸ್ವತಂತ್ರ ಸದಸ್ಯರು ಇರುವ ಸಮಿತಿಯೊಂದು ರಾಜ್ಯಪಾಲರನ್ನು ನೇಮಕ ಮಾಡಲಿ.

ಸ್ವತಂತ್ರ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳು ಆಗ ಜನರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಬಲ್ಲವು. ಒಬ್ಬರಿಗೊಬ್ಬರು ಪೂರಕ ಸಲಹೆಗಳನ್ನು ನೀಡುತ್ತ ಕೆಲಸ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT