ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೃಷಿಗೆ ಇನ್ನೇನು ಉಳಿದೀತು ‘ಮಣ್ಣು’!

ತೀವ್ರವಾಗಿ ಸವೆಯುತ್ತಿದೆ ಮೇಲ್ಮಣ್ಣು; ಕರಗುತ್ತಿದೆ ಕಾಡು, ಕಲ್ಲು, ಮರಳಿನ ನೈಸರ್ಗಿಕ ಸಂಪತ್ತು
Last Updated 10 ಜೂನ್ 2022, 19:31 IST
ಅಕ್ಷರ ಗಾತ್ರ

ಮಣ್ಣು ಸಂರಕ್ಷಣೆಯ ಜಾಗೃತಿಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರು ಕಳೆದ ಬೇಸಿಗೆಯಲ್ಲಿ ಕೈಗೊಂಡ ಜಾಗತಿಕ ಬೈಕ್ ಯಾತ್ರೆಯಿಂದಾಗಿ, ಈ ಸಂಗತಿಯು ಮತ್ತೊಮ್ಮೆ ಸಾರ್ವಜನಿಕ ಚಿಂತನೆಯ ಮುನ್ನೆಲೆಗೆ ಬರು ವಂತಾಯಿತು. ಸುಮಾರು ಈ ಸಮಯದಲ್ಲಿಯೇ, ಉತ್ತರ ಕನ್ನಡದ ಅರೆಮಲೆನಾಡು ಪ್ರದೇಶವಾದ ಮುಂಡ ಗೋಡು ಸೀಮೆಯಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳುವ ಸಂದರ್ಭ ನನಗೆ ಒದಗಿಬಂತು. ಭತ್ತದ ಬೇಸಾಯ ತೊರೆದು, ಜೋಳ, ಶುಂಠಿ, ಅಡಿಕೆಯನ್ನು ಒಮ್ಮೆಲೇ ರೈತರು ಅಪ್ಪಿಕೊಳ್ಳುತ್ತಿರುವುದು ಎಲ್ಲೆಡೆ ತೋರುತ್ತಿತ್ತು.

ಕಾಡಿನ ಹಸಿರುಹೊದಿಕೆ ನಾಶ, ಕೃಷಿ ಭೂಮಿಯಲ್ಲಿ ನೆಲಮುಚ್ಚಿಗೆ ಬೆಳೆಗಳು ಮಾಯವಾಗುತ್ತಿರುವುದು, ಅಕಾಲಿಕ ಅತಿವೃಷ್ಟಿ ತರುವ ನೆರೆ, ವಿವೇಕರಹಿತ ನೆಲಬಳಕೆ ವಿಧಾನಗಳು- ಇವೆಲ್ಲವುಗಳಿಂದಾಗಿ, ಎಲ್ಲೆಡೆ ಮೇಲ್ಮಣ್ಣಿನ ಸಾರ ತೀವ್ರವಾಗಿ ಕುಸಿಯುತ್ತಿದೆ. ಹಟ್ಟಿಗೊಬ್ಬರ ಹಾಗೂ ಕೃಷಿ ತ್ಯಾಜ್ಯಗಳ ಕಂಪೋಸ್ಟ್ ಕೊರತೆಯಿಂದಾಗಿ, ರಾಸಾಯನಿಕ ಗೊಬ್ಬರದ ಅಂಗಡಿ ಎದುರು ರೈತರು ಸಾಲುಗಟ್ಟುತ್ತಿದ್ದಾರೆ. ಅರಣ್ಯದಿಂದ ಹಿತಮಿತವಾಗಿ ಸೊಪ್ಪು- ತರಗೆಲೆ ತಂದು ಹೊಲದ ಮಣ್ಣಿಗೆ ಸಾರ ತುಂಬುವ ಸಂಪ್ರದಾಯಗಳೆಲ್ಲ ಹಿನ್ನೆಲೆಗೆ ಸರಿಯುತ್ತಿವೆ. ಬದಲಾಗಿ, ಸಮೀಪದ ಕಾಡಿನಲ್ಲಿ ಜೆಸಿಬಿಯಿಂದ ಮೇಲ್ಮಣ್ಣನ್ನು ಎತ್ತಿ, ಟ್ರ್ಯಾಕ್ಟರಿನಲ್ಲಿ ಹೊಲಕ್ಕೆ ಸಾಗಿಸುವ ದೃಶ್ಯಗಳೇ ಹಲವೆಡೆ ಕಂಡವು!

ಒಳನಾಡು, ಮಲೆನಾಡು ಹಾಗೂ ಕರಾವಳಿಯ ಬಹುತೇಕ ಪ್ರದೇಶಗಳ ಕೃಷಿಭೂಮಿಯಲ್ಲಿ, ಮೇಲ್ಮಣ್ಣು ಸವಕಳಿಯು ಇದೇ ಬಗೆಯ ಗಂಭೀರ ಹಂತ ತಲುಪುತ್ತಿದೆ. ಕಾಡುನಾಶ, ನೆರೆ, ಏಕಜಾತಿ ನೆಡುತೋಪು, ನೀರು ಹಾಗೂ ಮಣ್ಣಿನ ನಿರ್ವಹಣೆಯಲ್ಲಿ ಅಶಿಸ್ತು, ಕೃಷಿಯ ಕೃತಕ ಒಳಸುರಿಗಳ ಬಳಕೆಯಲ್ಲಿ ಲಂಗುಲಗಾಮು ಇರದಿರು ವುದು ಎಲ್ಲವೂ ಇದಕ್ಕೆ ಕಾರಣಗಳೇ.

ಮಣ್ಣಿನ ಕನಿಷ್ಠ ಫಲವತ್ತತೆ ಉಳಿಸಿಕೊಳ್ಳುವುದೂ ರೈತರಿಗೆ ದೊಡ್ಡ ಸವಾಲು. ಅವರ ಮೂರನೇ ಎರಡರಷ್ಟು ಕೃಷಿವೆಚ್ಚ ಇದಕ್ಕೇ ವ್ಯಯವಾಗುತ್ತಿರುವುದನ್ನು ಅಧ್ಯಯನಗಳು ದಾಖಲಿಸುತ್ತಿವೆ.

ಹೊಲದಿಂದ ಹೆದ್ದಾರಿಗೆ ಕಾಲಿಟ್ಟರೆ, ಮಲೆನಾಡಿನ ಕಾಡು-ಗುಡ್ಡಗಳನ್ನು ಬಗೆದು ಕ್ವಾರಿಗಳಿಂದ ಮೇಲೆತ್ತಿ ತಂದ ಗ್ರಾನೈಟ್ ಹಾಗೂ ನದಿತಪ್ಪಲುಗಳಿಂದ ಅಗೆದುತಂದ ಮರಳು ಸಾಗಿಸುವ ಲಾರಿಗಳು! ಪ್ರಕೃತಿಯ ಶಕ್ತಿಗೆ ಮೈಯೊಡ್ಡಿ ಪುಡಿಯಾಗಿ ಭವಿಷ್ಯದ ಮಣ್ಣಾಗಬೇಕಿದ್ದ ಈ ಬಂಡೆ-ಕಲ್ಲುಗಳು, ವರ್ತಮಾನದ ಅಭಿವೃದ್ಧಿ ಉನ್ಮಾದಕ್ಕೆ ಬಲಿಯಾಗುತ್ತಿವೆ. ಇಲ್ಲವಾದಲ್ಲಿ, ಭೂಕುಸಿತಗಳಂಥ ಅವಘಡಗಳ ಹೊರತಾಗಿಯೂ ಮಲೆನಾಡಿನ ಕಾಡು ಸೀಳುವ, ಪರ್ವತಮಾಲೆಗಳನ್ನು ಕತ್ತರಿಸುವ, ಭೂಗರ್ಭ ಬಿರಿದು ನಿರ್ಮಿಸುವ ಗಣಿ, ಜಲವಿದ್ಯುತ್, ಬೃಹತ್ ಹೆದ್ದಾರಿಗಳಂಥ ‘ಮೆಗಾ ಅಭಿವೃದ್ಧಿ ಯೋಜನೆ’ಗಳು ನಮ್ಮ ಆದ್ಯತೆಯಾಗುತ್ತಿದ್ದವೇ? ಹೊಲ-ತೋಟ, ಗೋಮಾಳ, ಕಾಡು, ನದಿತಪ್ಪಲುಗಳ ಮೇಲ್ಮಣ್ಣು ನಾಶವಾಗಿ, ಕೃಷಿ ಅಪಾಯದಂಚಿಗೆ ತಲುಪಲು ಹೆದ್ದಾರಿ ನಿರ್ಮಿಸುತ್ತಿವೆ ಅವು!

ಫಲವತ್ತಾದ ಮೇಲ್ಮಣ್ಣು ತಯಾರಾಗುವುದೇ ಒಂದು ದೀರ್ಘ ಹಾಗೂ ಸಂಕೀರ್ಣ ಪ್ರಕ್ರಿಯೆ. ಪ್ರಕೃತಿ ಒದಗಿಸುವ ಬೆಳಕು, ಉಷ್ಣತೆ, ಗಾಳಿ, ಮಳೆನೀರಿನ ಒತ್ತಡ ಹಾಗೂ ರಾಸಾಯನಿಕ ಕ್ರಿಯೆಗಳಿಂದಾಗಿ, ಕಾಲಾಂತರದಲ್ಲಿ ಬಂಡೆ ಕಲ್ಲುಗಳು ಬಿರಿದು ಮಣ್ಣಿನ ಕಣಗಳು ರೂಪುಗೊಳ್ಳುತ್ತವೆ. ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಝಿಂಕ್ ಇತ್ಯಾದಿ ಖನಿಜಾಂಶಗಳೆಲ್ಲ ಈ ಕಲ್ಲುಗಳಿಂದಲೇ ಬರಬೇಕು. ಇದಕ್ಕೆ ಸಸ್ಯ-ಪ್ರಾಣಿಜನ್ಯ ಸಾವಯವ ವಸ್ತುಗಳು ಬೆರೆತು ಅಂತಿಮವಾಗಿ ಮಣ್ಣು ನಿರ್ಮಾಣವಾಗಲು, ಸಾವಿರಾರು ಬಗೆಯ ಶತಕೋಟಿ ಪ್ರಮಾಣದ ಸೂಕ್ಷ್ಮಾಣುಜೀವಿಗಳ ಸಾಂಗತ್ಯ ಬೇಕು. ಹೀಗೆ, ಒಂದಡಿ ಸಮೃದ್ಧ ಮೇಲ್ಮಣ್ಣು ವಿಕಾಸವಾಗುವುದೆಂದರೆ, ಹಲವು ಸಹಸ್ರ ವರ್ಷಗಳ ನಿಸರ್ಗದ ತಪಸ್ಸೇ ಸರಿ. ಬಸವನಹುಳುವಿನ ಚಲನೆಯ ರೀತಿಯಲ್ಲಿ ನಿಸರ್ಗವು ಮೇಲ್ಮಣ್ಣು ತಯಾರಿಸುತ್ತಿ
ದ್ದರೆ, ಜೆಟ್ ವಿಮಾನದ ವೇಗದಲ್ಲಿ ನಾವು ಮಣ್ಣು ನಾಶ ಮಾಡುತ್ತಿದ್ದೇವೆ!

ಮಣ್ಣನ್ನು ಕೃತಕವಾಗಿ ತಯಾರಿಸುವ ಪ್ರಯತ್ನಗಳನ್ನೂ ವಿಜ್ಞಾನಲೋಕ ಮಾಡಿದೆ. ಕೈತೋಟಗಳು ಅಥವಾ ಹೂಕುಂಡಗಳಲ್ಲಿ ಅಂಥ ಕೃತಕಮಣ್ಣಿನ ಮಿಶ್ರಣಗಳನ್ನು ಇಂದು ಬಳಸುವುದಿದೆ. ಆದರೆ ಅದು ದುಬಾರಿ. ಇಷ್ಟಕ್ಕೂ, ಪ್ರಕೃತಿ ನೀಡುವ ತ್ಯಾಜ್ಯಗಳಿಂದಲೇ ಅದನ್ನು ತಯಾರಿಸಬೇಕು. ಹೀಗಾಗಿ, ಭೂಮಿಯಾದ್ಯಂತ ಪ್ರಕೃತಿಯೇ ಉಚಿತವಾಗಿ ನೀಡುತ್ತಿರುವ ಫಲವತ್ತಾದ ಮಣ್ಣಿಗೆ ಬದಲಿ ಎಂಬುದಿಲ್ಲ ಎಂಬುದು ವಿಜ್ಞಾನವೇ ಒಪ್ಪಿಕೊಂಡಿರುವ ಸತ್ಯ.

ಮೇಲ್ಮಣ್ಣು ಹಾಗೂ ಅದರ ಫಲವತ್ತತೆಯ ನಾಶವು ಇಂದಿನ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿರುವುದು ಈ ಎಲ್ಲ ಕಾರಣಗಳಿಂದಾಗಿ. ಕಾಡು ಹಾಗೂ ಕೃಷಿ ಭೂಮಿಗಳ ‍‘ಮರುಭೂಮೀಕರಣ’ ಪ್ರಕ್ರಿಯೆಗೆ ಇದು ಎಡೆಮಾಡುತ್ತಿದೆ. ದೇಶದ ಶೇ 30ಕ್ಕೂ ಹೆಚ್ಚಿನ ಪ್ರದೇಶಗಳು ಈ ಅಪಾಯ ವನ್ನು ಈಗಾಗಲೇ ಎದುರಿಸುತ್ತಿವೆ. ಮಣ್ಣು ನಾಶದಿಂದಾಗಿ ಕೃಷಿ ಇಳುವರಿಯಲ್ಲಿ ವೇಗವಾಗಿ ಕುಸಿತವಾಗುತ್ತಿರುವುದನ್ನು ಕೇಂದ್ರ ಕೃಷಿ ಸಚಿವಾಲಯದ ಅಂಕಿ-ಅಂಶಗಳೇ ದೃಢಪಡಿಸಿವೆ. ಭವಿಷ್ಯದ ಕೃಷಿ ಹಾಗೂ ಆಹಾರ ಸುರಕ್ಷತೆಯ ದೃಷ್ಟಿಯಿಂದ ಅಪಾಯದ ಗಂಟೆಯಿದು.

ಇದಕ್ಕೆ ಪರಿಹಾರವಾದರೂ ಏನು? ಮೊನ್ನೆ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿಯವರೇ ಅಭಿಪ್ರಾಯಪಟ್ಟಂತೆ, ಸೂಕ್ತವಾದ ಸರ್ಕಾರಿ ಯೋಜನೆಗಳ ಜೊತೆಗೆ, ಖಾಸಗಿ ಕ್ಷೇತ್ರ ಹಾಗೂ ಜನಮಾನಸವೂ ಕೈಜೋಡಿಸಬೇಕಿದೆ. ರೈತ ಸಮುದಾಯದ ಪಾರಂಪರಿಕ ವಿವೇಕಕ್ಕೆ, ಸೂಕ್ತವಾದ ಆಧುನಿಕ ತಂತ್ರಜ್ಞಾನ ಬೆಸೆದು ಮಣ್ಣನ್ನು ಸುಸ್ಥಿರವಾಗಿ ಬಳಸುವ ಹಲವಾರು ಮಾದರಿ ಗಳನ್ನೇನೋ ಸಂಶೋಧನೆಗಳು ಅಭಿವೃದ್ಧಿಪಡಿಸಿವೆ. ಸರ್ಕಾರ ಹಾಗೂ ರೈತ ಸಮುದಾಯಗಳು ಜೊತೆಯಾಗಿ, ಅವನ್ನು ತಳಮಟ್ಟದಲ್ಲಿ ಈಗ ಅನುಷ್ಠಾನ ಮಾಡಬೇಕಿದೆಯಷ್ಟೆ.

ಮೊದಲನೆಯದು, ಸರ್ಕಾರದ ಹೊಣೆಗಾರಿಕೆ. ಅರಣ್ಯ ಇಲಾಖೆಯು ಕಾಡಿನ ಅತಿಕ್ರಮಣ ಹಾಗೂ ಕಲ್ಲು–ಮಣ್ಣಿನಂಥ ನೈಸರ್ಗಿಕ ಸಂಪತ್ತಿನ ದುರ್ಬಳಕೆಯನ್ನು ತಡೆಯಬೇಕಿದೆ. ಕಂದಾಯ ಇಲಾಖೆಯು ಸೂಕ್ತ ನೆಲ-ಜಲ ಬಳಕೆ ನೀತಿ ಜಾರಿ ಮಾಡಿ, ಹೊಲ-ತೋಟ, ಹೊಳೆ-ಕೆರೆಗಳ ಅಚ್ಚುಕಟ್ಟು ಪ್ರದೇಶಗಳ ನೈಸರ್ಗಿಕ ಸ್ವರೂಪವನ್ನು ಕಾಪಾಡಿಕೊಳ್ಳಬೇಕಿದೆ. ಕೃಷಿ ಅರಣ್ಯವನ್ನು ಪ್ರೋತ್ಸಾಹಿಸಿ ಭೂಸಾರ ಹಾಗೂ ಅಂತರ್ಜಲ ರಕ್ಷಿಸುವ ಹೊಣೆ ಜಲಾನಯನ ಇಲಾಖೆಯದ್ದಾಗಬೇಕಿದೆ. ಈಗಾಗಲೇ ನಿಷೇಧವಾಗಿರುವ ಅಪಾಯಕಾರಿ ಕೃತಕ ಕ್ರಿಮಿನಾಶಕ ಹಾಗೂ ಕಳೆನಾಶಕಗಳ ಬಳಕೆಯನ್ನು ತಡೆ ಯುವ ಕನಿಷ್ಠ ಕಾರ್ಯಕ್ಷಮತೆಯನ್ನಾದರೂ ಕೃಷಿ ಇಲಾಖೆ ತೋರಬೇಕಿದೆ. ಸಮಗ್ರ ದೃಷ್ಟಿಕೋನ ಮತ್ತು ಬದ್ಧತೆ ಬಯಸುವ ಕಾರ್ಯಗಳಿವು.

ಇನ್ನು ರೈತರು. ಸರ್ಕಾರದ ವೈಫಲ್ಯದಲ್ಲಿ ಅವರ ವಿವೇಕವೂ ತೊಳೆದುಹೋಗಬಾರದಷ್ಟೇ? ಕಪ್ಪು, ಕೆಂಪು, ಮರಳುಮಿಶ್ರಿತ- ಯಾವ ಬಗೆಯ ಮಣ್ಣೇ ಇರಲಿ, ಹಸಿರುಗಿಡಗಳ ಹೊದಿಕೆ ಹಾಗೂ ಸಾವಯವ ತ್ಯಾಜ್ಯಗಳ ಮುಚ್ಚಿಗೆಯಂಥ ಮೇಲ್ಮಣ್ಣು ರಕ್ಷಣಾತಂತ್ರಗಳನ್ನು ಕೈಹಿಡಿಯಬೇಕಿದೆ. ಜೆಸಿಬಿ ಬಳಸಿ ಭೂಸ್ವರೂಪ ಬದಲಾಯಿಸುವುದು ಹಾಗೂ ಮಿತಿಯಿರದ ಅಂತರ್ಜಲ ಬಳಕೆಗೆ ಕಡಿವಾಣ ಬೀಳಬೇಕಿದೆ. ಅತಿಯಾದ ನೀರಾ ವರಿಯಿಂದ ಮಣ್ಣನ್ನು ಹುಳಿಯಾಗಿಸಿ ಸಾರ ತಗ್ಗಿಸುವ ಸಂದರ್ಭಗಳನ್ನು ತಪ್ಪಿಸಬೇಕಿದೆ. ಗೊಬ್ಬರ, ಕ್ರಿಮಿನಾಶಕಗಳಂಥ ಒಳಸುರಿ ಬಳಸುವಾಗ, ಸುರಕ್ಷತೆ ಹಾಗೂ ಕ್ಷಮತೆ ಯತ್ತಲೂ ಕಾಳಜಿ ವಹಿಸಬೇಕಿದೆ. ಕೃಷಿಯು ದಿಢೀರ್ ಹಣ ಗಳಿಸುವ ಉದ್ಯಮವಲ್ಲ; ಬದುಕನ್ನು ದೀರ್ಘಕಾಲ ಪೋಷಿಸುವ ಜೀವನವಿಧಾನ ಎಂಬುದನ್ನು ಸ್ಮರಣೆಗೆ ತಂದುಕೊಳ್ಳಬೇಕಿದೆ.

ಸರ್ಕಾರ ಹಾಗೂ ಜನಮಾನಸ, ಇವೆರಡೂ ತಪ್ಪು ಮಾಡುತ್ತಿರುವುದನ್ನು ಮುಂಡಗೋಡು ಅಧ್ಯಯನ ತೆರೆ ದಿಡುತ್ತಿದೆ. ಇದು ನಾಡಿನ ಬಹುತೇಕ ಎಲ್ಲ ಪ್ರದೇಶಗಳ ಚಿತ್ರಣವೂ ಹೌದೆನ್ನಲು ಆಧಾರಗಳೂ ಇವೆ. ಈ ದಿಸೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗದಿದ್ದರೆ, ಕೃಷಿ ಪರಿಸ್ಥಿತಿ ಇನ್ನಷ್ಟು ಹಳಿತಪ್ಪಿ, ಭವಿಷ್ಯದಲ್ಲಿ ಆಹಾರ ಉತ್ಪಾದನೆ ತೀವ್ರವಾಗಿ ಕುಸಿಯುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತವೆ ಸಂಶೋ ಧನೆಗಳು. ನಾಡಿನಾದ್ಯಂತ ಅರಣ್ಯ ಹಾಗೂ ಸಾಗುವಳಿ ಪ್ರದೇಶಗಳ ನೆಲದ ರಕ್ಷಣೆಗೆ ಮುಂದಾಗದಿದ್ದಲ್ಲಿ, ರೈತರೂ ಸೇರಿದಂತೆ ನಮ್ಮೆಲ್ಲರ ಬಾಯಿಗೆ ಭವಿಷ್ಯದಲ್ಲಿ ಮಣ್ಣು ಬಿದ್ದೀತು!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT