ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಕೊರೊನಾ ಜಾತ್ರೆಯಲ್ಲಿ...

Last Updated 17 ಮೇ 2020, 22:13 IST
ಅಕ್ಷರ ಗಾತ್ರ

ಗೋದಾಮಿನಲ್ಲಿ ದೊಡ್ಡಿಲಿ, ಸಣ್ಣಿಲಿ, ಮೂಗಿಲಿ, ಸುಂಡಿಲಿಗಳು ಸಭೆ ಸೇರಿದ್ದವು. ಪೇಪರೋದುತ್ತಿದ್ದ ಸುಂಡಿಲಿ ಖುಷಿಯಿಂದ ಉದ್ಗರಿಸಿತು ‘ಹೇ... ನಾವು ಚೀನಾದವ್ರನ್ನ ಹಿಂದೆ ಹಾಕಿದ್ವಿ!’

ದೊಡ್ಡಿಲಿ ಗದರಿಸಿತು, ‘ಮಂಗ್ಯಾನಂಥವ್ನೆ... ಯಾವುದ್ರಲ್ಲಿ ಹಿಂದೆ ಹಾಕಿದ್ದಂತ ಸರಿಯಾಗಿ ನೋಡು...’

‘ಸಾರಿ... ಕೊರೊನಾಪೀಡಿತರ ಸಂಖ್ಯೆ ಅದು. ಅಷ್ಟೇ ಅಲ್ಲ, ಕೊರೊನಾ ವೈರಸ್‍ ಅಟ್ಯಾಕ್ ಮಾಡೋಕ್ಕಿಂತ ಮೊದಲೇ ಹಸಿವು, ಹೆದ್ದಾರಿ ಅಪಘಾತ, ರೈಲು ಅಪಘಾತದಲ್ಲಿ ಮಣ್ಣಾದ ವಲಸಿಗರ ಸಂಖ್ಯೆಯಲ್ಲಿಯೂ ನಮ್ಮದು ವಿಶ್ವಕ್ಕೇ ಮೊದಲ ಸ್ಥಾನ!’ ಹೆಮ್ಮೆಯಿಂದ ಉಲಿದ ಸುಂಡಿಲಿ ಮುಂದಿನ ಸುದ್ದಿ ಓದಿತು.

‘ಕೊರೊನಾ ಅಲ್ಲ, ಅವರಪ್ಪನಂತಹ ವೈರಸ್ಸು ಬಂದ್ರೂ ಇನ್ನೊಂದೆರಡು ವರ್ಷ ನಮಗೆ ಹೊಟ್ಟೆ ಚಿಂತೆ ಇಲ್ಲ. ಕೇಳ್ರಿಲ್ಲಿ... ಈ ವರ್ಷ ದಾಖಲೆ ಪ್ರಮಾಣದಲ್ಲಿ ಧಾನ್ಯ ಬೆಳದಾರಂತೆ ನಮ್ಮ ರೈತ್ರು... 29.56 ಕೋಟಿ ಟನ್ ಬೆಳೆ ಬಂದೈತಂತೆ’.

‘29.56 ಕೋಟಿ ಟನ್, ಅಂದರೆ 29ರ ಮುಂದೆ ಎಷ್ಟ್ ಸೊನ್ನೆ ಬರತೈತಿ’ ಸಣ್ಣಿಲಿ ಕೇಳಿತು.

‘ಎಷ್ಟರ ಸೊನ್ನೆ ಬರಲಿ, ನಮ್ಮ ಊಟಕ್ಕಂತೂ ಇನ್ನೊಂದೆರಡು ವರ್ಷ ಸೊನ್ನೆಯಾಗಲ್ಲ’ ಮೂಗಿಲಿ ಮೂಗರಳಿಸಿತು. ‘ರೈತ್ರು ಬೆಳೆದಿದ್ದರಲ್ಲಿ ಪಡಿತರಕ್ಕೆ ಅಂತನೇ ಅಷ್ಟೆಲ್ಲ ಕೂಡಿಡ್ತಾರೆ, ನಾವೂ ಒಳಗೆ ನುಸುಳಬಾರದಂತ ಅಷ್ಟ್ ಬಂದೋಬಸ್ತು ಮಾಡ್ತಾರೆ. ಆದರೂ ಎಷ್ಟೋ ಜನ ಹಸಿವಿನಿಂದ ಸಾಯ್ತಾರಂತೆ, ಹಂಗಾರೆ ಪಡಿತರ ಎಲ್ಲಿ ಹೋಗುತ್ತೆ...’ ಸಣ್ಣಿಲಿ ತಲೆಕೊಡವಿತು.

ಸುಂಡಿಲಿಯು 20 ಲಕ್ಷ ಕೋಟಿಯ ನಿರ್ಮಲಕ್ಕನ ಪ್ಯಾಕೇಜಿನ ಸುದ್ದಿಯನ್ನು ಓದುತ್ತ, ಬಾಹ್ಯಾಕಾಶ, ಗಣಿಗಾರಿಕೆ, ವಿಮಾನಯಾನ ಎಂದೆಲ್ಲ ಬಣ್ಣಿಸಿ, ‘ಸರ್ಕಾರದ ಯೋಜನೆಗಳಿರೋದೆ ಕೆಲವು ಪ್ರಭಾವಿಗಳ ಅನುಕೂಲಕ್ಕೆ. ವಲಸೆ ಕೆಲಸಗಾರರಿಗೆ ರಸ್ತೆ ಮೇಲೆ ಬಸ್ ವ್ಯವಸ್ಥೆ ಸರಿಯಾಗಿ ಮಾಡದಿದ್ದರೇನಂತೆ, ಕೆಲವರಿಗೆ ಬಾಹ್ಯಾಕಾಶಕ್ಕೆ ಏಣಿ ಹಾಕಿಕೊಡಬೇಕು. ಗಣಿ ಕೆಲಸಗಾರರ ಬಾಯಿಗೆ ಮಣ್ಣು ಬಿದ್ರೇನಂತೆ, ಗಣಿಗಾರಿಕೆ ನಡೆಸೋವ್ರಿಗೆ ಹೂಹಾಸಿಗೆ ಹಾಸಬೇಕು. ಕೊರೊನಾ ಮಾರಿಜಾತ್ರೆಯಲ್ಲಿ ಉಂಡು ತೇಗಿದವನೇ ಜಾಣ!’ ಎಂದು ಕೊಂಕು ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT