ನಗರದಲ್ಲಿ ವಾಸವಿದ್ದ ಅಪ್ ಟು ಡೇಟ್ ಅಮ್ಮಯ್ಯ, ಲಾಕ್ಡೌನ್ನಿಂದ ಮಕ್ಕಳ ಶಾಲೆಗೆ ರಜೆ ಇದ್ದದ್ದರಿಂದ ಹಳ್ಳಿಗೆ ಬಂದಿದ್ದಳು. ತಾತ ಮಣ್ಣೆತ್ತಿನ ಅಮಾವಾಸ್ಯೆ ಪೂಜೆಗೆ ಎರೆಮಣ್ಣಿನಲ್ಲಿ ಎತ್ತುಗಳನ್ನು ಮಾಡುತ್ತಿದ್ದುದನ್ನು ಆಕೆಯ ಕಾನ್ವೆಂಟ್ ಕಂದ ಕುತೂಹಲದಿಂದ ನೋಡುತ್ತಿದ್ದ. ಅವು ಚೋಟಾ ಭೀಮ್, ಮಿಕ್ಕಿ ಮೌಸ್ ಥರ ಇಲ್ಲವೆಂದು ಅವನಿಗೆ ಅಚ್ಚರಿ.
‘ತಾತಾ, ನಾನೂ ಒಂದು ಮಾಡ್ತೀನಿ’ ಎನ್ನುತ್ತಾ ಮಣ್ಣಿಗೆ ಕೈಹಾಕಿದಾಗ ಅಮ್ಮ ಗದರಿದಳು ‘ನೋ, ನೋ ಅದು ಡರ್ಟಿ ಮಣ್ಣು, ಮುಟ್ಟಬೇಡ’.
ಆಗ ಅಜ್ಜಿ ಬಂದು ‘ಬಾರೋ ಕಂದ, ಎಣ್ಣೆಗಾಯಿ, ರಾಗಿ ರೊಟ್ಟಿ ಮಾಡಿದೀನಿ ತಿನ್ನು’ ಎಂದಳು.
ಸ್ವಲ್ಪ ಹೊತ್ತಿನಲ್ಲಿ ಮಳೆ ಶುರುವಾದಾಗ ಬೀದಿಯಲ್ಲಿ ಹುಡುಗರು ‘ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕೆ ನೀರಿಲ್ಲ’ ಎಂದು ಹಾಡುತ್ತಾ ಕುಣಿಯತೊಡಗಿದರು. ಅದಕ್ಕೆ ಕಂದನೂ ದನಿಗೂಡಿಸಿದ- ‘ರೈನ್ ರೈನ್ ಗೋ ಅವೇ, ಕಮ್ ಎಗೆಯ್ನ್ ಅನದರ್ ಡೇ...’ (ಹೋಗೋ ಹೋಗೋ ಮಳೆರಾಯ, ಇನ್ನೊಂದು ದಿನ ಬಾರಯ್ಯ).
ಹೊರಬಂದ ತಾತ ಮೊಮ್ಮಗನ ಇಂಗ್ಲಿಷ್ ಹಾಡು ಕೇಳಿ ಖುಷಿಯಿಂದ ‘ಏನಮ್ಮಾ ಆ ಹಾಡಿನ ಅರ್ಥ?’ ಎಂದು ಮಗಳನ್ನು ಕೇಳಿದರು. ಅರ್ಥ ಕೇಳಿ ಕುಸಿದುಹೋದ ಆತ ‘ಮಗನನ್ನು ಒಳಗೆ ಕರೆಯಮ್ಮ, ಅವನಿಗೆ ಶೀತವಾದೀತು’ ಎಂದರು.
‘ಈ ಹಾಳು ಮಳೆಯಿಂದ ನಮ್ಮ ಆಟವೆಲ್ಲ ಕೆಟ್ಟೋಯ್ತು’ ಎನ್ನುತ್ತಾ ಕಂದ ಒಳಬಂದ.
‘ನಮ್ಗೆ, ನಿಂಗೆ ಊಟ ಸಿಗೋದು ಈ ಮಳೆಯಿಂದ್ಲೇ ಕಣಪ್ಪ. ನಿನ್ನ ಪಾಪ್ಕಾರ್ನ್, ಗೋಬಿ ಮಂಚೂರಿ ಎಲ್ಲಿಂದ ಬರುತ್ತೆ ಗೊತ್ತಾ?’ ಅಂದರು ತಾತ.