‘ಸಾ, ಮೋಹನದಾಸ್ ಪೈ ಅಣ್ಣೋರು ಸರ್ಕಾರದ ಮ್ಯಾಲೆ ಸಿಟ್ಕಂದವ್ರೆ?’ ಅಂತಂದೆ.
‘ಅದ್ಯಾಕಂತೋ? ಅಣ್ಣೋರು ಹಂಗೆ ಸಿಟ್ಟಾಗ ಕುಲ್ವಲ್ಲಾ’ ತುರೇಮಣೆ ಇಚಾರಿಸಿದರು.
‘ಅದೀಯೆ ಸಾ, ಸರ್ಕಾರಕ್ಕೆ ನಾವು ವರ್ಸಕ್ಕೆ ಕೋಟ್ಯಂತರ ರೂಪಾಯಿ ಟ್ಯಾಕ್ಸು ಕೊಡ್ತುದವಿ, ಆದ್ರೂ ಬೆಂಗಳೂರು ರಸ್ತೆ ರಿಪೇರಿ ಮಾಡಕ್ಕಾಗಕಿಲ್ವಾ? ಹರತೆ ಹೊಡೆದಂಗಿರೋ ಬೆಂಗಳೂರು ರೋಡಿನಾಗೆ ಹೋಯ್ತಿದ್ರೆ ಹೊಟ್ಟೆ ಸಾಮಾನೆಲ್ಲಾ ಬಾಯಿಗೆ ಬತ್ತವೆ’ ಅನ್ನೋ ಅರ್ಥದೇಲಿ ಅಂದವುರೆ ಅಂತ ವಿವರಿಸಿದೆ.
‘ಬಸಣ್ಣ ಏನಂದದೆ?’ ತುರೇಮಣೆ ಕೇಳಿದರು.
‘ಇನ್ನೇನಂದದು ಸಾ, ‘ಹೋದೊರ್ಸ ತಾರಾಮಾರ ಮಳೆಯಾಗಿದ್ಕೆ ರೋಡೆಲ್ಲಾ ಕಿತ್ತು ಲಪ್ಪಾಟಾಗ್ಯವೆ. ರಿಪೇರಿಯಾಯ್ತವೆ ಬುಡಿ’ ಅಂದು ತಿಪ್ಪೆ ಸಾರಿಸ್ಯದೆ’ ಅಂದೆ.
‘ಅಲ್ಲಾ ಮನ್ನೆ ಬಿಜೆಪಿಯೋರು ಎಲೆಕ್ಸನ್ನಿಗೆ ಮೊದಲೇ ರೋಡ್ಮ್ಯಾಪ್ ಮಾಡ್ತೀವಿ ಅಂದಿ ದ್ರಲ್ಲೋ. ಈ ರೋಡುಗಳನ್ನೂ ಬೆಕ್ಕಟ್ಟೆ ಬೆಳ್ಳಗೆ ವೈಟ್ ಟಾಪಿಂಗ್ ಮಾಡ್ತರೇನೋ ಬುಡು’ ಅಂತು ಯಂಟಪ್ಪಣ್ಣ.
‘ಅಣೈ ಇದು ಮಂತ್ರಿ, ಬಿಬಿಎಂಪಿ, ಜಲ ಮಂಡಲಿ, ಕೆಇಬಿ ಶಾಮೀಲಾತಿಗಳ ಪ್ರಸಾದ! ಕಂತ್ರಾಟುಗಾರರು ನಲವತ್ತು ಪರ್ಸೆಂಟು ಕೊಟ್ಟು ಇನ್ನೇನು ಕೆಲಸ ಮಾಡ್ಯಾರು?’ ತುರೇಮಣೆಗೆ ಮತ್ತೆ ಬೇಜಾರಾಯ್ತು.
‘ಜನ ರೋಡುಗುಂಡಿಗೆ ಬಿದ್ದು ಹುಳ ಸತ್ತಂಗೆ ಸಾಯ್ತಾವ್ರೆ, ಕೋರ್ಟು ಉಗಿತಾದೆ. ಇಕ್ಕಡೆ ರಾಜಕಾರಣಿಗಳು ರೋಡಿನ ಇಚಾರವೇ ಮಾತಾಡ್ದೆ ಹಿಜಾಬು- ಶಾಲು, ಮಾಂಸ- ಮಡ್ಡಿ, ಮೈಕು- ಕರಗ ಅಂತ ಸೊಟ್ಟಗ ಆಡ್ಸದ್ರಲ್ಲೇ ಬಿಜಿಯಾಗವ್ರೆ. ರೋಡು ಯವಸ್ಥೆ ಯಾವಾಗ ಸರೋದದೋ ಕಾಣೆ’ ಅಂತ ನಾನೂ ಒಟ್ಟು ತೀರ್ಥ ಹಾಕಿದೆ.
‘ನಮ್ಮ ರಾಜರತ್ನಂ ಆವತ್ತೆ ಅಂದುದ್ರಲ್ಲೋ ‘ಎಲೆಲೆ ರಸ್ತೆ ಏನೀ ಅವ್ವೆವಸ್ತೆ! ಮೈಯ್ಯೆಲ್ಲಾ ಮುದುರಿ ಯಾಕ ಕುಣೀತಿ ಕುದುರಿ! ಕೊಟ್ಯಲ್ಲಾ ಗಸ್ತು ಕುಡ್ದಿದ್ದೀಯಾ ರಸ್ತೆ!’ ಅಂತ. ಇವತ್ತು ಕುಡಿದೋರಿಗೆ ಮಾತ್ರ ರಸ್ತೆ ಅವ್ವೆವಸ್ತೆಯಾಗಿಲ್ಲ, ನಡೆಯೋರಿಗೂ ಅವ್ವೆವಸ್ತೇನೆ!’ ಅನ್ನದಾ ಯಂಟಪ್ಪಣ್ಣ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.